ಕೃಷಿ ಹಾಗೂ ತೋಟಗಾರಿಕೆ ವಿಶ್ವ ವಿದ್ಯಾಲಯಗಳು ಸಂಶೋಧನೆ ಹೆಚ್ಚಿನ ಒತ್ತು ನೀಡಲಿ
ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯಗಳಲ್ಲಿ ಪದವಿ ವಿದ್ಯಾರ್ಥಿಗಳನ್ನು ತಯಾರು ಮಾಡುವುದರ ಜೊತೆಗೆ, ಸಂಶೋಧನೆ ಹೆಚ್ಚಿನ ಒತ್ತು ನೀಡಬೇಕು. ಹವಮಾನ ವೈಪರೀತ್ಯಕ್ಕೆ ಹೊಂದಿಕೊಳ್ಳುವ, ಬರ ಸಹಿಷ್ಣುತೆ ಹಾಗೂ ರೋಗ ನಿರೋಧಕ ಶಕ್ತಿವುಳ್ಳ ತಳಿಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹಿರಿಯೂರು ತಾಲ್ಲೂಕು ಬಬ್ಬೂರು ಫಾರಂ ಆವರಣದಲ್ಲಿ ಶುಕ್ರವಾರ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇವರ ವತಿಯಿಂದ ಆಯೋಜಿಸಲಾದ ಬಬ್ಬರೂ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಮಾರಂಭ ಹಾಗೂ ಸಿರಿಧಾನ್ಯ ಮೇಳ ಮತ್ತು ತೋಟಗಾರಿಕೆ ಬೆಳೆಗಳ ವಿಚಾರಸಂಕಿರಣ ಉದ್ಘಾಟಸಿ ಅವರು ಮಾತನಾಡಿದರು.
2016 ರಲ್ಲಿ ಕೃಷಿ ಸಂಶೋಧನಾ ಕೇಂದ್ರ ಶತಮಾನೋತ್ಸವ ಆಚರಸಬೇಕಿತ್ತು. ಈಗ ಸಂಶೋಧನಾ ಕೇಂದ್ರಕ್ಕೆ 107 ವರ್ಷ ತುಂಬಿದೆ. ಕಾರಣಾಂತರಗಳಿಂದ ಈಗ ಆಚರಿಸಲಾಗುತ್ತದೆ. ರೈತರ ಪರವಾಗಿ ಸಂಶೋಧನಾ ಕೇಂದ್ರ ಹೆಚ್ಚು ಬೆಳೆಯಲಿ. ದೇಶದ ಅಭಿವೃದ್ಧಿ ಅವಲೋಕಿಸಲು ಆ ದೇಶದಲ್ಲಿನ ವಿಶ್ವ ವಿದ್ಯಾಲಯ ಹಾಗೂ ಸಂಶೋಧನ ಕೇಂದ್ರಗಳು ಅಳೆತೆಗೋಲುಗಳಾಗಿವೆ. ಇಲ್ಲಿ ಸಂಶೋಧನೆಗಳು ಫಲಪ್ರದವಾದರೆ ದೇಶ ಅಭಿವೃದ್ಧಿ ಆಗುತ್ತದೆ ಎಂದರು.
ಬರಗಾಲ, ಅತಿವೃಷ್ಠಿ, ಬೆಳೆಗೆ ತಕ್ಕ ಬೆಲೆ ದೊರಕದೆ, ಹವಾಮಾನ ಬದಲಾವಣೆಗೆ ಹೊಸ ತಳಿ ಸಿಗದೆ, ಬೆಳೆಗಳನ್ನು ದಾಸ್ತಾನು ಮಾಡಲು ಗೋದಾಮುಗಳು ಇಲ್ಲದೆ, ಬೆಳೆಗಳನ್ನು ಸಂಸ್ಕರಣೆ ಮಾಡದೇ, ಮೌಲ್ಯವರ್ಧಿತ ಉತ್ಪನ್ನ ತಯಾರಿಸದೇ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಇವುಗಳಿಗೆ ಉತ್ತರವನ್ನು ಕೃಷಿ ಹಾಗೂ ತೋಟಗಾರಿಕೆ ಸಂಶೋಧನಾ ಕೇಂದ್ರಗಳು ಹುಡುಕಬೇಕು. ಇಲ್ಲಿನ ಸಂಶೋಧನೆಗಳು ರೈತರ ಭೂಮಿಯಲ್ಲಿ ಫಲಕಾಣಬೇಕು. ವಿಸ್ತರಣಾ ಚಟುವಟಿಕೆಗಳು ಹೆಚ್ಚಾಗಬೇಕು ಎಂದು ಸಲಹೆ ನೀಡಿದರು.
ಚಿತ್ರದುರ್ಗ ಮೊದಲೇ ಬರ ಪೀಡಿತ ಜಿಲ್ಲೆ, ಬರಗಾಲ ಬಂದರೆ ಜಿಲ್ಲೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಬಬ್ಬೂರು ಕೇಂದ್ರದಲ್ಲಿ ಸಂಶೋಧನೆಗಳು ಹೆಚ್ಚು ಆಗಬೇಕು. ಹೊಸ ತಳಿಗಳನ್ನು ಅಭಿವೃದ್ಧಿ ಪಡಿಸಬೇಕು. ಜಗತ್ತೇ ಹವಾಮಾನ ಬದಲಾವಣೆಗೆ ತುತ್ತಾಗಿದೆ. ಇಂತಹ ಸಂದರ್ಭದಲ್ಲಿ ಹೆಚ್ಚು ನಿರೋಧಕ ಹಾಗೂ ಬರ ಸಹಿಷ್ಣುತೆ ಶಕ್ತಿ ಇರುವ ಹಾಗೂ ಕಡಿಮೆ ನೀರಿನಲ್ಲಿ ಬೆಳೆಯುವ ತಳಿಗಳನ್ನು ಅಭಿವೃದ್ಧಿ ಪಡಿಸಬೇಕು. ರೈತರ ಸಂಕಷ್ಟ ಸ್ಪಂದನೆ ಮಾಡಬೇಕು. ಸಂಶೋಧನೆಗೆ ಸರ್ಕಾರ ಎಲ್ಲಾ ರೀತಿಯ ಅನುದಾನ ಹಾಗೂ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
ವಿ.ವಿ.ಸಾಗರಕ್ಕೆ 6 ಟಿ.ಎಂ.ಸಿ ನೀರು :
****” ಮೈಸೂರು ಅರಸರು ಹಾಗೂ ಸರ್.ಎಂ.ವಿಶ್ವೇಶ್ವರಯ್ಯನವರ ದೂರ ದೃಷ್ಟಿಯ ಫಲವಾಗಿ ವಾಣಿ ವಿಲಾಸ ಸಾಗರ ಅಣೆಕಟ್ಟು ನಿರ್ಮಿಸಲಾಯಿತು. 12 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿತ್ತು. ಸದ್ಯ ನೀರಾವರಿ ಅವಲಂಬಿತ ಪ್ರದೇಶ 40 ಸಾವಿರ ಎಕರೆಗೆ ವಿಸ್ತರಿಸಿದೆ. ಭದ್ರಾ ಮೇಲ್ದಂಡೆ ಹಾಗೂ ಎತ್ತಿನಹೊಳೆ ಯೋಜನೆಯಿಂದ 6 ಟಿ.ಎಂ.ಸಿ ನೀರನ್ನು ವಾಣಿ ವಿಲಾಸ ಸಾಗರಕ್ಕೆ ನೀಡಲು ರೈತರು ಮನವಿ ಸಲ್ಲಿಸಿದ್ದಾರೆ. ಈ ಕುರಿತು ಗಂಭೀರ ಚಿಂತನೆ ಮಾಡಿ, ಈ ಬಗ್ಗೆ ಯೋಜನೆ ರೂಪಿಸಲು ನೀರಾವರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಹಿರಿಯೂರು ಸಕ್ಕರೆ ಕಾರ್ಖಾನೆ ನಿರ್ವಹಣೆ ಖಾಸಗಿ ಅವರಿಗೆ ವಹಿಸಲು ಚಿಂತನೆ ಮಾಡಲಾಗುವುದು. ಬಬ್ಬೂರು ಸಂಶೋಧನಾ ಕೇಂದ್ರವಾಗಿ ಮುಂದುವರಿಯಲಿ ಎಂದು ಮುಖ್ಯಮಂತ್ರಿಗಳು ಹೇಳಿದರು.
ಬರ ಸಮರ್ಥ ನಿರ್ವಹಣೆ :
******ರಾಜ್ಯ ಭೀಕರ ಬರಗಾಲ ತುತ್ತಾಗಿದೆ. ರಾಜ್ಯದ 236 ತಾಲ್ಲೂಕುಗಳ ಪೈಕಿ 195 ತಾಲ್ಲೂಕು ಬರಕ್ಕೆ ತುತ್ತಾಗುವೆ. ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರ ಎಂದು ಘೋಷಿಸಲಾಗಿದೆ. ಸೋಮವಾರ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಬರ ತಾಲ್ಲೂಕಿನ ಸಂಖ್ಯೆ 210 ರಿಂದ 215ಕ್ಕೆ ಏರಬಹುದು.ಆಗಸ್ಟ್ ತಿಂಗಳಲ್ಲಿ ಮಳೆ ಬಾರದೆ ಇರುವುದರಿಂದ ಬರಕ್ಕೆ ಕಾರಣವಾಗಿದೆ. ರೈತರ ಬೆಳೆ ಕೈಗೆ ಬಾರದೆ ನಷ್ಟ ಉಂಟಾಗಿದೆ. ಈ ಬಾರಿಯ ಮುಂಗಾರಿನಲ್ಲಿ 80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿತ್ತು. 42 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ನಾಶವಾಗಿದೆ. ಶೇ.52 ಬೆಳೆ ನಾಶದಿಂದ ರೂ. 30 ಸಾವಿರ ಕೋಟಿ ಕೃಷಿ ಕ್ಷೇತ್ರದ ನಷ್ಟವಾಗಿದೆ. ಇದಷ್ಟನ್ನು ಕೇಂದ್ರ ರಾಜ್ಯ ಸರ್ಕಾರ ಭರಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ, ಕೇಂದ್ರ ವಿಪತ್ತು ನಿರ್ವಹಣಾ ನಿಧಿ (ಎನ್.ಡಿ.ಆರ್.ಎಫ್)ಅಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ರೂ.4860 ಕೋಟಿ ಪರಿಹಾರ ಕೇಳಿದ್ದೇವೆ. ಸದ್ಯ ಕೇಂದ್ರ ಬರ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸಿದ್ದು. 11 ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಿ, ಅವಲೋಕಿಸಿ ವರದಿ ನೀಡಲಿದೆ. ಸರ್ಕಾರ ಬರಗಾಲವನ್ನು ಸಮರ್ಥವಾಗಿ ಎದುರಿಸಲಿದೆ. ಜನರು ಹಾಗೂ ಜಾನುವಾರು ರಕ್ಷಣೆ ಮಾಡಲಾಗುವುದು. ಬರಗಾಲದಲ್ಲಿ ಕುಡಿಯುವ ನೀರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಹೆಚ್ಚಿನ ಅನುದಾನ ನೀಡಲಾಗುವುದು. ಮೇವು ಸಂಗ್ರಹಣೆಗೂ ಸೂಚನೆ ನೀಡಲಾಗಿದೆ.
ಬರ ಸ್ಥಿತಿ ಎದುರಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಇದರಲ್ಲಿ ವಿಪಲವಾದರೆ ಸಂಬಂಧಿಸಿದ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದು ವೇದಿಕೆಯಲ್ಲಿಯೇ ಸೂಚನೆ ನೀಡಿದರು.
ಯೂರೋಪಿನ ಸಾರ್ವತ್ರಿಕ ಮೂಲ ಆದಾಯ ನೀತಿಯನ್ನು ರಾಜ್ಯದಲ್ಲಿ ಅಳವಡಿಕೊಳ್ಳಲಾಗಿದೆ. ಇದರ ಅನುಸಾರ ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಮಾತನಾಡಿ, ವಿಶ್ವ ವಿದ್ಯಾಲಯಗಳು ಹಾಗೂ ವಿಜ್ಞಾನಿಗಳು ಸಂಶೋಧನೆ ಅವಶ್ಯಕತೆ ಇದೆ. ಕೃಷಿಗೆ ಸವಾಲುಗಳು ಹೆಚ್ಚಾಗಿವೆ. ಹವಾಮಾನ ವೈಪರೀತ್ಯ ಹೆಚ್ಚಾಗಿದೆ. ಇವೆಲ್ಲವನ್ನೂ ಗಮನದಲ್ಲಿ ಇರಿಸಿಕೊಂಡು , ರೈತರಿಗೆ ಬೇಸಾಯದಲ್ಲಿ ಅನುಕೂಲವಾಗುವ ಪದ್ದತಿಗಳನ್ನು ಪರಿಚಯಿಸಬೇಕು. 123 ವರ್ಷದ ನಂತರ ರಾಜ್ಯದಲ್ಲಿ ಅತ್ಯಂತ ಕಡಿಮೆ ಮಳೆ ಬಂದಿದೆ. ಹತ್ತಿ ಹಾಗೂ ಕಬ್ಬೂ ನಲ್ಲಿ ಈ ಬಬ್ಬೂರು ಸಂಶೋಧನೆ ಕೇಂದ್ರ ಉತ್ತಮ ತಳಿಗಳನ್ನು ಪರಿಚಯಿಸಿದೆ. ಕೃಷಿ ಇಲಾಖೆಯಿಂದ ರೂ.35 ಸಾವಿರ ಕೋಟಿ ಯೋಜನೆಗಳನ್ನು ರೈತರಿಗೆ ಈ ವರ್ಷ ನೀಡಲಾಗುವುದು. ಮುಂದಿನ ವರ್ಷ 55 ಸಾವಿರ ಕೋಟಿ ಅನುದಾನ ನೀಡಲಾಗುವುದು. ಹಾಲಿಗೆ ರೂ.3 ಪ್ರೋತ್ಸಾಹ ಧನ ಹೆಚ್ಚಿಸಲಾಗಿದೆ. ರೈತರಿಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಬರಗಾಲ ಪರಿಶೀಲನೆಗೆ ಕೃಷಿ ಹಾಗೂ ಕಂದಾಯ ಸಚಿವರ ನೇತೃತ್ವದಲ್ಲಿ ಉಪ ಸಮಿತಿ ರಚನೆ ಮಾಡಿ, ರೈತರ ಬಗ್ಗೆ ಉದಾರವಾಗಿದ್ದು, ಬರ ಪರಿಸ್ಥಿತಿಯ ವರದಿ ನೀಡುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದರು. ಇದರಂತೆ 195 ತಾಲ್ಲೂಕೂಗಳು ಬರಗಾಲಕ್ಕೆ ತುತ್ತಾಗಿವೆ ಎಂದು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ. ಕೇಂದ್ರ ಅಧ್ಯಯನ ತಂಡವು ರಾಜ್ಯ ಬರ ಪರಿಸ್ಥಿತಿ ಬಗ್ಗೆ ಅಧ್ಯಯನ ಮಾಡುತ್ತಿದೆ. ರಾಜ್ಯದ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯಗಳಿಂದ ಹೊಸ ತಳಿಗಳನ್ನು ಹೊರತರಬೇಕು. ಪರ್ಯಾಯ ಬೆಳೆಗಳಿಗೆ ಸಂಶೋಧನೆ ಮಾಡಬೇಕು. ನೆಟ್ಟಿ ರೋಗಕ್ಕೆ ಘೋಷಿಸಲಾದ ರೂ.223 ಕೋಟಿ ಹಣದಲ್ಲಿ ರೂ.148 ಕೋಟಿಗಳನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಲಾಗಿದೆ. ಸರ್ಕಾರದಿಂದ ಕೃಷಿಭಾಗ್ಯ ಯೋಜನೆಗೆ ಮರು ಚಾಲನೆ ನೀಡಲಾಗುವುದು. ರಾಜ್ಯದಲ್ಲಿ ಕಬ್ಬು ಕಟಾವಿಗೆ ಅನುಕೂಲವಾಗುವಂತೆ 100 ಕೃಷಿ ಯಂತ್ರಧಾರೆ ಕೇಂದ್ರಗಳಿಗೆ ಅತ್ಯಾಧುನಿಕ ಕಬ್ಬು ಕಟಾವು ಯಂತ್ರಗಳನ್ನು ನೀಡಲಾಗುವುದು. ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹವಾಗಿ ಹೆಕ್ಟೇರ್ ಗೆ 10 ಸಾವಿರ ಧನವನ್ನು 2.5 ಹೆಕ್ಟೇರ್ ವರೆಗೂ ನೀಡಲಾಗುತ್ತಿದೆ. ಹೊಸ ಕೃಷಿ ಉತ್ಪಾದಕ ಸಂಘಗಳಿಗೆ ಶೇ.4 ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಹಳೆ ಸಂಘಗಳಿಗೆ ಬ್ಯಾಂಕುಗಳಲ್ಲಿ ರೂ. 50 ಲಕ್ಷದವರೆಗೆ ಸಾಲ ಪಡೆಯುವ ಅವಕಾಶ ನೀಡಲಾಗಿದೆ ಎಂದರು.
ಯೋಜನೆ ಮತ್ತು ಸಾಂಖ್ಯಿಕ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸಂಶೋಧನಾ ಕೇಂದ್ರ ಪ್ರಾರಂಭವಾಗಿ 100 ವರ್ಷಗಳು ತುಂಬಿವೆ. ಈ ಕೇಂದ್ರದ ಸ್ಥಾಪನೆಗೆ ಕಾರಣೀಭೂತರಾದ ಎಲ್ಲರನ್ನೂ ಸ್ಮರಿಸುವುದು ಅಗತ್ಯ. 1913 ರಲ್ಲಿ ಈ ಭಾಗದ ಜನರು ಉದಾರ ಮನೋಭಾವದಿಂದ ಸಂಶೋಧನಾ ಕೇಂದ್ರಕ್ಕೆ ಜಮೀನು ನೀಡಿದ್ದಾರೆ. ಸಂಶೋಧನಾ ಕೇಂದ್ರದಿಂದ ಜಿಲ್ಲೆಯ ರೈತರ ಹೊಲಗಳಲ್ಲಿ ಬೆಳೆಗಳ ಕುರಿತು ಪ್ರಯೋಗ ಹಾಗೂ ಪ್ರಾತ್ಯಕ್ಷಿಕೆ ನಡೆಸಲಾಗುತ್ತದೆ. ಹಿರಿಯೂರಿನಲ್ಲಿ ತೋಟಗಾರಿಕೆ ಕಾಲೇಜು ಈಗಾಗಲೇ ಇದೆ. ಬಬ್ಬೂರು ಸಂಶೋಧನಾ ಕೇಂದ್ರದಲ್ಲಿಯೂ ಕೃಷಿ ಪದವಿ ಕಾಲೇಜು ಆರಂಭಿಸಬೇಕು. ಸಂಶೋಧನಾ ಕೇಂದ್ರದಲ್ಲಿ ಬೋಧನೆ, ಸಂಶೋಧನೆ, ವಿಸ್ತರಣೆ ಕಾರ್ಯ ನಡೆಯುತ್ತಿದೆ. ಇವುಗಳನ್ನು ಉನ್ನತೀಕರಣ ಗೊಳಿಸಲು ಸಹಕಾರ ನೀಡಬೇಕು. ಈ ಭಾಗದ ರೈತರ ಅನುಕೂಲಕ್ಕಾಗಿ ಮೈಸೂರು ಅರಸರ ಕಾಲದಲ್ಲಿ ಆರಂಭಿಸಿದ ವಾಣಿ ವಿಲಾಸ ಸಕ್ಕರೆ ಕಾರ್ಖಾನೆಯನ್ನು ಮರು ಪ್ರಾರಂಭಕ್ಕೆ ಅನುದಾನ ನೀಡಬೇಕು. ಹಿರಿಯೂರು ನಗರ ಅಭಿವೃದ್ಧಿ ರೂ.40 ಕೋಟಿ, ನಗರದಲ್ಲಿ ಈಗಿನ ಹಳೆಯ ಬಸ್ ನಿಲ್ದಾಣ ತೆರವುಗೊಳಿಸಿ ಹೈಟೆಕ್ ಬಸ್ ನಿರ್ಮಾಣ ಮಾಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಕೋರಿದರು.
ಶಾಸಕ ಬಿ.ಜಿ.ಗೋವಿಂದ ಮಾತನಾಡಿ ಜಿಲ್ಲೆಯಲ್ಲಿ ಕಪ್ಪು ತಲೆ ಹುಳಿವಿನ ಬಾಧೆಯಿಂದ ತೆಂಗಿನ ತೋಟಗಳು ಹಾಳಾಗುತ್ತಿವೆ. ರೈತರ ನೆರವಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಲೆಸ್ಲಿ ಕೋಲ್ಮನ್ ಶತಮಾನೋತ್ಸವ ಭವನದ ಉದ್ಘಾಟನೆ. ಕೃಷಿ ಯಂತ್ರೋಪಕರಣಗಳ ಪರೀಕ್ಷಾ ಕೇಂದ್ರ, ಶೇಂಗಾ ಸಂಸ್ಕರಣ ಘಟಕ, ವಿಶೇಷ ಅಂಚೆ ಲಕೋಟೆ ಹಾಗೂ ಭೂಪಟಗಳು, ಕೃಷಿ ಪ್ರಕಟಣೆಗಳನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
ಶಾಸಕರಾದ ಟಿ. ರಘುಮೂರ್ತಿ, ಎನ್.ವೈ. ಗೋಪಾಲಕೃಷ್ಣ, ಬಿ.ಜಿ. ಗೋವಿಂದಪ್ಪ, ಕೆ.ಸಿ.ವೀರೇಂದ್ರ ಪಪ್ಪಿ, ಬಬ್ಬೂರು ಗ್ರಾ.ಪಂ. ಅಧ್ಯಕ್ಷ ಪಿ. ಕರಿಯಣ್ಣ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ., ಜಿ.ಪಂ. ಸಿಇಒ ಸೋಮಶೇಖರ್ ಎಸ್.ಜೆ., ತೋಟಗಾರಿಕೆ ನಿರ್ದೇಶಕ ರಮೇಶ್ ಡಿ.ಎಸ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇಂದ್ರ ಕುಮಾರ್ ಮೀನಾ, ಬೆಂಗಳೂರು ಕೃಷಿ ವಿ.ವಿ. ಕುಲಪತಿ ಡಾ. ಎಸ್.ವಿ. ಸುರೇಶ, ಪಶುಸಂಗೋಪನೆ ವಿವಿ ಕುಲಪತಿ ಡಾ. ಕೆ.ಸಿ. ವೀರಣ್ಣ, ಮಾಜಿ ಸಹಕಾರ ಸಚಿವ ಡಾ. ಹೆಚ್. ಏಕಾಂತಯ್ಯ, ಕೃಷಿಕ ಸಮಾಜ ತಾಲ್ಲೂಕು ಅಧ್ಯಕ್ಷ ಹೆಚ್.ಆರ್. ತಿಮ್ಮಯ್ಯ, ಮಾಜಿ ಸಚಿವ ಹೆಚ್. ಆಂಜನೇಯ, ಮಾಜಿ ಸಂಸದ ಚಂದ್ರಪ್ಪ, ಸೇರಿದಂತೆ ವಿವಿಧ ಗಣ್ಯರು, ಅಧಿಕಾರಿಗಳು, ವ್ಯವಸ್ಥಾಪನಾ ಮಂಡಳಿ ಸದಸ್ಯರು, ವಿಶ್ವವಿದ್ಯಾಲಯದ ಅಧಿಕಾರಿಗಳು, ಪ್ರಗತಿಪರ ರೈತರು ಭಾಗವಹಿಸಿದ್ದರು. ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ. ಜಗದೀಶ್ ಸ್ವಾಗತಿಸಿದರು.





