
ಚಿತ್ರದುರ್ಗ:ರೈತ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ರಾಜಕೀಯ ಜೀವನದಲ್ಲಿ ಬಳಸಿದ್ದ ಸಿಕೆಆರ್ 45 ನಂಬರಿನ ಹಿಂದೂಸ್ತಾನ್ ಅಂಬಾಸಿಡರ್ ಕಾರು ಇಡೀ ರಾಜ್ಯದ ಜನರಿಗೆ ಪರಿಚಿತವಾಗಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ B. Y. Vijayendra ಹೇಳಿದರು.
ಚಿತ್ರದುರ್ಗದಲ್ಲಿ ನಾಳೆ ನಡೆಯಲಿರುವ ಬಿಎಸ್ವೈ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಈ ಐತಿಹಾಸಿಕ ಕಾರನ್ನು ತರಲಾಗಿದ್ದು, ಪ್ರದರ್ಶನಕ್ಕೆ ಇಡಲಾಗಿದೆ. ಕಾರಿನ ಮುಂದೆ ಶಾಸಕರು, ಮಾಜಿ ಶಾಸಕರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಫೋಟೋ ತೆಗಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, ಕರ್ನಾಟಕದಲ್ಲಿ B. S. Yediyurappa ಅವರನ್ನು ರೈತನಾಯಕ ಎಂದು ಜನ ಪ್ರೀತಿಯಿಂದ ಗುರುತಿಸುತ್ತಾರೆ. ಯಡಿಯೂರಪ್ಪ ಅವರ ಮೇಲಿರುವ ಅಭಿಮಾನವೇ ಸಿಕೆಆರ್ 45 ಕಾರಿನ ಮೇಲೂ ಜನರಿಗೆ ಇದೆ ಎಂದು ಹೇಳಿದರು.

ಆ ಕಾಲದಲ್ಲಿ ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಬಿಜೆಪಿಯನ್ನು ಹಳ್ಳಿಹಳ್ಳಿಗೆ ತೆಗೆದುಕೊಂಡು ಹೋಗಿ ಪಕ್ಷವನ್ನು ಬಲಪಡಿಸಲು ಯಡಿಯೂರಪ್ಪ ಅಪಾರ ಶ್ರಮ ಪಟ್ಟಿದ್ದರು. ಪಕ್ಷ ಸಂಘಟನೆಯಲ್ಲಿ ಬಿಎಸ್ವೈ ಅವರ ಪಾತ್ರ ಎಷ್ಟಿದೆಯೋ, ಈ ಕಾರಿನ ಪಾತ್ರವೂ ಅಷ್ಟೇ ಮಹತ್ವದ್ದಾಗಿದೆ ಎಂದು ವಿವರಿಸಿದರು.
ಬಿಎಸ್ವೈ ಅವರೊಂದಿಗೆ Ananth Kumar ಹಾಗೂ D. H. Shankaramurthy ಇದೇ ಕಾರಿನಲ್ಲಿ ರಾಜ್ಯ ಪ್ರವಾಸ ಮಾಡುತ್ತಿದ್ದರು. ಆ ದಿನಗಳಲ್ಲಿ ರಸ್ತೆಗಳಿಗಿಂತ ಗುಂಡಿಗಳೇ ಹೆಚ್ಚಿದ್ದರೂ, ಯಡಿಯೂರಪ್ಪ ಸದಾ ಇದೇ ಕಾರನ್ನು ಬಳಸುತ್ತಿದ್ದರು. ಅವರ ರಾಜಕೀಯ ಪ್ರವಾಸಕ್ಕೆ ಶಕ್ತಿ ತುಂಬಿದ್ದು ಇದೇ ಕಾರು ಎಂದು ಹೇಳಿದರು.
ಶಂಕರ್ ಹಾಗೂ ಮಂಜಣ್ಣ ಎಂಬವರು ಹಲವು ವರ್ಷಗಳ ಕಾಲ ಈ ಕಾರಿನ ಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ. ಕುಟುಂಬ ಸದಸ್ಯರಂತೆ ಅವರು ಬಿಎಸ್ವೈ ಜೊತೆ ಇದ್ದರು. ಒಮ್ಮೆ ಮಾತ್ರ ಕಾರು ಅಪಘಾತಕ್ಕೊಳಗಾಗಿದ್ದು, ಬಳಿಕ ಯಾವುದೇ ಅವಘಡ ಸಂಭವಿಸಿಲ್ಲ. ಇಡೀ ರಾಜ್ಯದಲ್ಲಿ ಸುರಕ್ಷಿತವಾಗಿ ಯಡಿಯೂರಪ್ಪರನ್ನು ಸುತ್ತಾಡಿಸಿದ ಕಾರು ಇದು ಎಂದು ಹೇಳಿದರು.
ಚಿತ್ರದುರ್ಗದ ಅಭಿಮಾನೋತ್ಸವಕ್ಕೆ ಈ ಕಾರನ್ನು ತರಬೇಕೆಂದು ನೂರಾರು ಕಾರ್ಯಕರ್ತರು ಬೇಡಿಕೆ ಇಟ್ಟಿದ್ದರು. ಅವರ ಒತ್ತಾಯದ ಮೇರೆಗೆ ಕಾರನ್ನು ಇಲ್ಲಿಗೆ ತರಲಾಗಿದ್ದು, ಇದೀಗ ಇದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದೆ. ಎಲ್ಲರೂ ಕಾರಿನ ಬಳಿ ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ ಎಂದು ವಿಜಯೇಂದ್ರ ಸಂತಸ ವ್ಯಕ್ತಪಡಿಸಿದರು.

