ಚಿತ್ರದುರ್ಗ: ಜಾತಿ ವ್ಯವಸ್ಥೆ ನಾಶಗೊಂಡು, ಸಮ ಸಮಾಜ ನಿರ್ಮಾಣಗೊಂಡರೇ ಬಸವಣ್ಣನ ಜಯಂತಿಗೆ ಅರ್ಥಪೂರ್ಣತೆ ಬರಲಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ಸೀಬಾರ ಸಮೀಪದಲ್ಲಿರುವ ತಮ್ಮ ಕಚೇರಿಯಲ್ಲಿ ತಾಲೂಕು ಕಾಂಗ್ರೆಸ್ ಎಸ್ಸಿ ಘಟಕದ ಶುಕ್ರವಾರ ಆಯೋಜಿಸಿದ್ದ ಜಯಂತ್ಯುತ್ಸವದಲ್ಲಿ ಬಸವಣ್ಣನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಅನುಭವ ಮಂಟಪದ ಪರಿಕಲ್ಪನೆಯಲ್ಲಿಯೇ ಅಂಬೇಡ್ಕರ್ ರಚಿಸಿದ ಸಂವಿಧಾನ ಇರುವುದು ವಿಶೇಷ ಎಂದರು.
ಜಾತ್ಯಾತೀತ ಸಮಾಜ ನಿರ್ಮಾಣದ ಶಿಲ್ಪಿ ಬಸವಣ್ಣನ ಆಶಯ, ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಈ ಕಾರಣಕ್ಕೆ ನಮ್ಮಂತ ಶೋಷಿತ ವರ್ಗದವರು ರಾಜಕೀಯದಲ್ಲಿ ಉನ್ನತ ಸ್ಥಾನಮಾನ ಗಳಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ, ಪೈಗಂಬರ್, ಏಸು, ಸ್ವಾಮಿ ವಿವೇಕಾನಂದ ಸೇರಿ ಅನೇಕ ಮಹನೀಯರ ಆದರ್ಶಗಳು ಜಯಂತ್ಯುತ್ಸವಗಳನ್ನು ಹಬ್ಬದ ರೀತಿ ಎಲ್ಲರೂ ಒಗ್ಗೂಡಿ ಆಚರಿಸುವ ವಾತಾವರಣ ನಿರ್ಮಾಣವಾಗಬೇಕು. ಇವರೆಲ್ಲರ ಸಿದ್ಧಾಂತಗಳು ಅನುಷ್ಟಾನಕ್ಕೆ ತರುವ ಹೊಣೆಗಾರಿಕೆ ನಮ್ಮೆಲ್ಲರದ್ದು ಆಗಿದೆ. ಈ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ತಿಳಿಸಿದರು.
ಬಸವಣ್ಣನ ಚಿಂತನೆ ಫಲ ಇಂದು ಹೆಣ್ಣು ಮಕ್ಕಳು ಸಾಧನೆಯತ್ತ ಮುಖ ಮಾಡಲು ಸಾಧ್ಯವಾಗಿದೆ. ಶೋಷಿತ ವರ್ಗ ಮುಖ್ಯವಾಹಿನಿಗೆ ಬರಲು ಸಹಕಾರಿ ಆಗಿದೆ ಎಂದರು.
ಅಂಧಶ್ರದ್ಧೆ, ಮೌಢ್ಯಾಚಾರಣೆ, ಅಸಮಾನತೆ ವಿರುದ್ಧ ನಿರಂತರ ಹೋರಾಟ ನಡೆಸಿ, ವೈಜ್ಞಾನಿಕ ಸಮಾಜ ನಿರ್ಮಾಣದ ಕನಸು ಕಂಡಿದ್ದ ಬಸವಣ್ಣನ ಆದರ್ಶಗಳನ್ನು ಇಂದಿನ ಧರ್ಮಾಧಿಕಾರಿಗಳು, ಪ್ರಜ್ಞಾವಂತರು, ಚಿಂತಕರು ಅನುಷ್ಠಾನಕ್ಕೆ ತರುವ ಪ್ರಯತ್ನ ನಡೆಸುತ್ತಿದ್ದು, ಇದಕ್ಕೆ ಸರ್ವರ ಸಹಕಾರ ಅಗತ್ಯ ಎಂದು ಹೇಳಿದರು.
ಅರುಂಧತಿ ಆಂಜನೇಯ ಮಾತನಾಡಿ, ದಾರ್ಶಜನಿಕರು, ಸಾಧಕರನ್ನು ಜಾತಿ ಸಂಕೋಲೆಯಿಂದ ಹೊರ ತರುವ ಯುವ ಪೀಳಿಕೆಯ ದೊಡ್ಡ ಜವಾಬ್ದಾರಿ ಆಗಿದೆ ಎಂದರು.
ಕರೊನಾ ಮಾರ್ಗಸೂಚಿಯನ್ವಯ ಸರಳವಾಗಿ ಜಯಂತಿ ಆಚರಿಸಲಾಯಿತು. ವಿಜಯಮ್ಮ ಆಂಜನೇಯ, ಕಾಂಗ್ರೆಸ್ ಎಸ್ಸಿ ಘಟಕದ ತಾಲೂಕಾಧ್ಯಕ್ಷ ಅನಿಲ್ ಕೋಟಿ, ಪ್ರದೀಪ್, ರಂಗಸ್ವಾಮಿ, ವಿರುಪಾಕ್ಷಪ್ಪ, ರೇಖಾ ಇದ್ದರು.
ಸಂಯುಕ್ತವಾಣಿ





