ಚಿತ್ರದುರ್ಗ- ಬಳ್ಳಾರಿ ಜಿಲ್ಲೆ ಕೊಟ್ಟೂರು ತಾಲೂಕಿನಲ್ಲಿ ನಡೆಯಬೇಕಾಗಿದ್ದ ಈ ಬಾರಿಯ ತರಳುಬಾಳು ಹುಣ್ಣಿಮೆ ಮಹೋತ್ಸವವನ್ನು ಮುಂದೂಡಲಾಗಿದೆ ಎಂದು ಸಿರಿಗೆರೆ ಮಠದ ಶ್ರೀ ತರಳಬಾಳು ಜಗದ್ಗುರು ಡಾ ಶಿವಮೂರ್ತಿ ಶಿವಾಚಾರ್ಯ ಮಹಾಸ್ಚಾಮೀಗಳು ಪ್ರಟಕಣೆ ಹೊರಡಿಸಿದ್ದಾರೆ.

ದೇಶದಲ್ಲೆಡೆ ಕೋವಿಡ್ನ ಪ್ರಭಾವ ಇರುವ ಸಂದರ್ಭದಲ್ಲಿ ಅದರ ಜವಾಬ್ದಾರಿಯನ್ನು ನಿರ್ವಹಿಸಬೇಕಾದ ಹೊಣೆಗಾರಿಕೆ ಇರುವುದರಿಂದ ಈ ಕ್ರಮ ಅಗತ್ಯವಾಗಿದೆ. ೯ ದಿನಗಳ ಕಾಲ ನಡೆಯುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ನಿತ್ಯವೂ ಸಾವಿರಾರು ಜನರು ಭಾಗಿಯಾಗುತ್ತಾರೆ. ಕೋವಿಡ್ ಕಾರಣದಿಂದ ಭಕ್ತರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾದರೆ ತಮಗೆ ವೇದನೆಯಾಗುತ್ತದೆ. ಆ ಸಂಕಟವನ್ನು ತಾಳಿಕೊಳ್ಳಲು ತಮಗೆ ಸಾಧ್ಯವಾಗುವುದಿಲ್ಲ. ಗುರುಗಳಾದ ನಮಗೆ ಆರೋಗ್ಯದ ತೊಂದರೆ ಆದಲ್ಲಿ ರಾಜ್ಯದ ಚುಕ್ಕಾಣಿ ಹಿಡಿದಿರುವ ಸರ್ಕಾರ, ಮುಖ್ಯಮಂತ್ರಿಗಳು, ಸಚಿವರು, ಆಡಳಿತ ವ್ಯವಸ್ಥೆ ನಮ್ಮ ಆರೋಗ್ಯದ ಕಡೆ ಗಮನ ನೀಡುತ್ತದೆ. ಆದರೆ ಜನಸಾಮಾನ್ಯರಾದ ಭಕ್ತರಿಗೆ ಆರೋಗ್ಯದ ಏರುಪೇರು ಆದಲ್ಲಿ ನೋಡಿಕೊಳ್ಳುವುದು ಸುಲಭವಲ್ಲ. ಈ ಹಿನ್ನೆಲೆಯಲ್ಲಿ ಕೊಟ್ಟೂರಿನಲ್ಲಿ ನಡೆಯಬೇಕಾಗಿದ್ದ ತರಳಬಾಳು ಹುಣ್ಣಿಮೆಯನ್ನು ಒಂದು ವರ್ಷ ಮುಂದಕ್ಕೆ ಹಾಕಿದ್ದೇವೆ ಎಂದರು.
ಸರಳ ಹುಣ್ಣಿಮೆ, ಜಾಲತಾಣದಲ್ಲಿ ಪ್ರಸಾರ
ತರಳಬಾಳು ಹುಣ್ಣಿಮೆ ಮಹೋತ್ಸವ ರದ್ದಾದಾಗೆಲ್ಲ ಸರಳವಾಗಿ ಒಂದು ದಿನದ ಆಚರಣೆಯಾಗಿ ಸಿರಿಗೆರೆಯ ಮಠದ ಆವರಣದಲ್ಲಿ ಹುಣ್ಣಿಮೆ ನಡೆಯುತ್ತಿತ್ತು. ಆದರೆ ಈ ಬಾರಿ ಆ ಯೋಚನೆಯನ್ನು ಸಹ ಕೈಬಿಡಲಾಗಿದ್ದು ಹುಣ್ಣಿಮೆ ಸಂದೇಶವು ಭಕ್ತರಿಗೆ ತಲುಪುವಂತೆ ೯ ದಿನಗಳ ಕಾಲ ನಿತ್ಯವೂ ಸಂದೇಶವನ್ನು ಸಾಮಾಜಿಕ ಜಾಲತಾಣದ ಮೂಲಕ ಪ್ರಸಾರ ಮಾಡುವಂತೆ ಏರ್ಪಾಟು ಮಾಡಲಾಗಿದೆ. ಜಗತ್ತಿನೆಲ್ಲೆಡೆಯಿಂದ ಭಕ್ತರು ತಮ್ಮ ಮೊಬೈಲ್ ಫೋನ್ ಮೂಲಕವೂ ಸಹ ತರಳಬಾಳು ಹುಣ್ಣಿಮೆ ಮಹೋತ್ಸವದ ಸಂದೇಶಗಳನ್ನು ವೀಕ್ಷಿಸಬಹುದು ಎಂದು ಸ್ವಾಮೀಜಿ ಹೇಳಿದ್ದಾರೆ.
ಸಂಯುಕ್ತವಾಣಿ





