- ರೈತರ ಹಿತ ಕಾಯದ ಸಿಎಂ ಸಿದ್ದರಾಮಯ್ಯ ಹಾಗು ಕೃಷಿ ಸಚಿವರ ರಾಜೀನಾಮೆಗೆ ಒತ್ತಾಯಿಸುತ್ತೇವೆ: ಎಂಎಲ್ ಸಿ ಕೆ ಎಸ್ ನವೀನ್
- ಚಿತ್ರದುರ್ಗ ಜು. 27: ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗತ್ಯವಾದ ಯೂರಿಯಾ ರಸಗೊಬ್ಬರವನ್ನು ವಿಲೇವಾರಿ ಮಾಡುತ್ತಿದೆ.ಆದರೆ ರಾಜ್ಯ ಸರ್ಕಾರ ಸರಿಯಾದ ರೀತಿಯಲ್ಲಿ ವಿತರಣೆ ಮಾಡದೇ ರಸ ಗೊಬ್ಬರವನ್ನು ತಯಾರಿಕೆ ಮಾಡುವ ಕೈಗಾರಿಕೆಗಳಿಗೆ ಅಕ್ರಮ ಮಾರಾಟ ಮಾಡುವವರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ರಾಜ್ಯದಲ್ಲಿ ಕೃತಕ ಯೂರಿಯಾ ಗೊಬ್ಬರದ ಅಭಾವ ಸೃಷ್ಟಿ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಆರೋಪಿಸಿದರು.
- ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಭಾನುವಾರ ಪತ್ರಿಕಾಗೋಷ್ಟಿಯಲ್ಲಿ ಮಾತಾಡಿ,ರಾಜ್ಯ ಸರ್ಕಾರ ಮಾರ್ಚ್ – ಏಪ್ರಿಲ್ ತಿಂಗಳಲ್ಲಿಯೇ ನಮ್ಮ ರಾಜ್ಯಕ್ಕೆ ಇಷ್ಟೇ ಪ್ರಮಾಣದ ಅಗತ್ಯತೆ ಇದೆ ಎಂದು ಪತ್ರ ಬರೆಯುವುದರ ಮೂಲಕ ಅದರ ಬಿಡುಗಡೆಗೆ ಅಗತ್ಯವಾದ ಹಣ ನೀಡಬೇಕು.ಈ ಹಿಂದೆ ನಮ್ಮ ಸರ್ಕಾರವಿದ್ದಾಗ ಇದಕ್ಕೆ 1ಸಾವಿರ ಕೋಟಿ ರೂ ನೀಡಲಾಗಿತ್ತು. ಆದರೆ ಈಗಿನ ಸಿದ್ದರಾಮಯ್ಯನವರ ಸರ್ಕಾರ ಕೇವಲ 400 ಕೋಟಿ ರೂ ಮಾತ್ರ ನೀಡಿ ಉಳಿದ 600 ಕೋಟಿ ರೂ ಖಾಸಗಿ ಕಂಪನಿಗಳಿಗೆ ಅನುಕೂಲವಾಗುವ ವಾತಾವರಣ ಕಲ್ಪಿಸಿದೆ ಎಂದು ದೂರಿದರು.ರಾಜ್ಯದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ. ರೈತರ ಬಗ್ಗೆ ಎಳ್ಳಷ್ಟು ಕಾಳಜಿ ವಹಿಸುತ್ತಿಲ್ಲ.ತಮ್ಮ ಅಧಿಕಾರ ಕುರ್ಚಿ ಉಳಿವಿಗೆ ಹಲವಾರು ಬಾರಿ ದೆಹಲಿ ಪ್ರವಾಸ ಮಾಡಿರುವ ಸಿದ್ದರಾಮಯ್ಯರವರು ಇದರಲ್ಲಿ ಒಂದು ಬಾರಿಯೂ ಕೇಂದ್ರ ಕೃಷಿ ಸಚಿವರನ್ನಾಗಲಿ,ಸಂಬಂಧಪಟ್ಟ ಅಧಿಕಾರಿಗಳನ್ನಾಗಲೀ ಭೇಟಿ ಮಾಡಿ ನಮ್ಮ ರಾಜ್ಯಕ್ಕೆ ಯೂರಿಯಾ ಬಗ್ಗೆ ಬೇಡಿಕೆ ಇಟ್ಟಿಲ್ಲ.ಇಂದಿನ ದಿನಗಳಲ್ಲಿ ಏಕಕಾಲದಲ್ಲಿ ಮಳೆ ವ್ಯಾಪಿಸಿದೆ.ರೈತರೆಲ್ಲರೂ ಸಹ ಬಿತ್ತನೆ ಕಾರ್ಯ ಪ್ರಾರಂಭಿಸಿದ್ದಾರೆ.ಎಲ್ಲಾ ರೈತರಿಗೂ ಯೂರಿಯಾ ಗೊಬ್ಬರದ ಅವಶ್ಯಕತೆಯಿದೆ.ಇದರ ಬಗ್ಗೆ ಗಮನಹರಿಸದ ಸಿದ್ದರಾಮಯ್ಯರವರು ತಮ್ಮ ಕುರ್ಚಿ ಉಳಿವಿಕೆಗೆ ಗಮನ ನೀಡಿದ್ದಾರೆ. ಅನ್ನದಾತರ ಬಗ್ಗೆ ಯಾವ ಗಮನ ನೀಡಿಲ್ಲ ಎಂದು ನವೀನ್ ತಿಳಿಸಿದರು.ಮುಖ್ಯಮಂತ್ರಿಯವರ ತಪ್ಪಿನಿಂದಾಗಿ ನಾಡಿನ ರೈತರು ಕಷ್ಟಕ್ಕೆ ಸಿಲುಕ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಬಗ್ಗೆ ಸಂಬಂಧಪಟ್ಟ ಸಚಿವರಾಗಲಿ ಕೃಷಿ ಅಧಿಕಾರಿಗಳಾಗಲಿ ಗಮನ ನೀಡಬೇಕಾಗಿದೆ.ಆಗಸ್ಟ್ -11ರಿಂದ ನಡೆವ ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಚರ್ಚೆ ಮಾಡಿ ಮುಖ್ಯಮಂತ್ರಿಗಳ ಹಾಗೂ ಕೃಷಿ ಸಚಿವರ ರಾಜೀನಾಮೆಗೆ ಒತ್ತಾಯಿಸಲಾಗುವುದು.ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ರೈತರ ಬಗ್ಗೆ ನಿರ್ಲಕ್ಷ ಧೋರಣೆ ತಾಳಿದೆ. ತಮ್ಮ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿಯೇ ಮುಂದಾಗಿದ್ದಾರೆ.ಜನರ ಹಿತ ಕಾಯುತ್ತಿಲ್ಲ ಇದರ ಬಗ್ಗೆ ಬಿಜೆಪಿ ರೈತ ಮೋರ್ಚಾದಿಂದ ಆದಷ್ಟು ಬೇಗನೆ ಹೋರಾಟ ಮಾಡಲಾಗುವುದು ಎಂದರು. ಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಖಂಜಾಚಿ ಮಾಧುರೀ ಗೀರೀಶ್, ಉಪಾಧ್ಯಕ್ಷ ಮೋಹನ್, ರಾಜ್ಯ ರೈತ ಮೋರ್ಚಾದ ಕಾರ್ಯದರ್ಶಿ ಮಲ್ಲಿಕಾರ್ಜನ್, ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ವೆಂಕಟೇಶ್ ಯಾದವ್, ವಕ್ತಾರ ನಾಗರಾಜ್ ಬೇದ್ರೇ ಉಪಸ್ಥಿತರಿದ್ದರು.





