ಹೊಳಲ್ಕೆರೆ,ಮಾ26 : ಜನಪ್ರತಿನಿಧಿಗೆ ಸಾಮಾನ್ಯ ಜ್ಞಾನವಿದ್ದರೆ ಅಭಿವೃದ್ದಿ ಕೆಲಸಗಳಾಗುತ್ತವೆ. ಮತ ಹಾಕಿದವರು ಮನಸ್ಸಿಗೆ ನೋವುಂಟು ಮಾಡಿಕೊಂಡಾರೆಂಬ ಅರಿವಿಟ್ಟುಕೊಂಡು ಬದ್ದತೆಯಿಂದ ಕೆಲಸ ಮಾಡುವ ರಾಜಕಾರಣಿ ನಾನು ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ತಾಲ್ಲೂಕಿನ ಚಿಕ್ಕಂದವಾಡಿ ಗ್ರಾಮದ ಹತ್ತಿರ ಹರಿಯುವ ಹಳ್ಳಕ್ಕೆ 80 ಲಕ್ಷ ರೂ.ವೆಚ್ಚದಲ್ಲಿ ನೂತನ ಚಕ್ಡ್ಯಾಂ ನಿರ್ಮಾಣ ಹಾಗೂ ಮೂರು ಶಾಲಾ ಕೊಠಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.
ಅಪ್ಪರಸನಹಳ್ಳಿ ಬಳಿ ಹಳ್ಳಕ್ಕೆ ಎತ್ತರವಾದ ಡ್ಯಾಂ ಕಟ್ಟಿ ಕೆರೆಗೆ ನೀರು ಹರಿಯುವಂತೆ ಮಾಡಿದ್ದೇನೆ. ಯಾರಿಂದಲೂ ಈ ಕೆಲಸ ಆಗುತ್ತಿರಲಿಲ್ಲ. ಹದಿನಾರು ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್ ಪವರ್ಸ್ಟೇಷನ್ ಕಟ್ಟಿಸಿದ್ದೇನೆ. ಪ್ರತಿನಿತ್ಯವೂ ವಿದ್ಯುತ್ ಅಭಾವವಿದೆ ಎಂದು ರೈತರು ನನಗೆ ಫೋನ್ ಮಾಡಿ ಕಷ್ಟ ಹೇಳಿಕೊಳ್ಳುತ್ತಿದ್ದರು. ಚಿಕ್ಕಜಾಜೂರಿನ ಕೋಟೆಹಾಳ್ ಸಮೀಪ ಐದುನೂರು ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣವಾಗುತ್ತಿದ್ದು, ಜೋಗ್ಫಾಲ್ಸ್ನಿಂದ ನೇರವಾಗಿ ವಿದ್ಯುತ್ ಪೂರೈಕೆಯಾಗಲಿದೆ ಎಂದು ತಿಳಿಸಿದರು.
ಚಿಕ್ಕಜಾಜೂರಿನಿಂದ ಚಿತ್ರಹಳ್ಳಿವರೆಗೆ ರಸ್ತೆಗೆ ಹದಿಮೂರು ಕೋಟಿ ರೂ.ಗಳನ್ನು ನೀಡಿದ್ದೇನೆ. ಕೇಶವಾಪುರಕ್ಕೆ ಹೋಗುವ ರಸ್ತೆಗೂ ಹಣ ನೀಡಿದ್ದೇನೆ. ತಾಲ್ಲೂಕಿನಾದ್ಯಂತ
493 ಹಳ್ಳಿಗಳಿಗೂ ಏನೇನು ಅವಶ್ಯಕತೆಯಿದೆ ಎನ್ನುವುದನ್ನು ಅರ್ಥಮಾಡಿಕೊಂಡು ಕ್ಷೇತ್ರದ ಅಭಿವೃದ್ದಿಗೆ ಹಗಲು-ರಾತ್ರಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ಚಿಕ್ಕಜಾಜೂರಿನಲ್ಲಿ ಹೈಟೆಕ್ ಆಸ್ಪತ್ರೆ, ವೈದ್ಯರುಗಳು ಅಲ್ಲಿಯೇ ಉಳಿದುಕೊಳ್ಳಲು ವಸತಿ ಗೃಹಗಳನ್ನು ಕಟ್ಟಿಸಿದ್ದೇನೆ. ಸಿ.ಸಿ.ರಸ್ತೆ, ಮೂಲಭೂತ ಸೌಲಭ್ಯಗಳನ್ನು ಒದಗಿಸಿದ್ದೇನೆ. ಐದು ಕೋಟಿ ರೂ.ವೆಚ್ಚದಲ್ಲಿ ಅತ್ಯುತ್ತಮ ಶಾಲೆ ಕಟ್ಟಿಸಿದ್ದೇನೆ. ಸುತ್ತಮುತ್ತಲಿನ ಹಳ್ಳಿಗಳಿಂದ ಬರುವ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದೆಂದು ನನ್ನ ಅನುದಾನದಲ್ಲಿ ಬಸ್ಗಳನ್ನು ಬಿಡುತ್ತಿದ್ದೇನೆ. ಆಂಗ್ಲ ಮಾಧ್ಯಮದಲ್ಲಿ ಮಕ್ಕಳಿಗೆ ಶಿಕ್ಷಣ ಕಲಿಸಲಾಗುವುದು ಎಂದರು.
ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತಂದು ಪ್ರತಿ ಮನೆ ಮನೆಗೆ ಶುದ್ದ ಕುಡಿಯುವ ನೀರು ಪೂರೈಸಲಾಗುವುದು. ಇದರಿಂದ ಇನ್ನು 30 ವರ್ಷಗಳ ಕಾಲ ನೀರಿಗೆ ಅಭಾವವಿರುವುದಿಲ್ಲ. ರಾಜಕಾರಣಿಯಾದವನು ಸಾರ್ವಜನಿಕರ ಬದುಕನ್ನು ಸ್ವಂತ ಬದುಕೆಂದು ಅರ್ಥಮಾಡಿಕೊಂಡು ಕೆಲಸ ಮಾಡಬೇಕು ಎಂದು ನುಡಿದರು.
ಡಿ.ಸಿ.ಮೋಹನ್, ಕರಿಸಿದ್ದಯ್ಯ, ಮೂರ್ತಿ, ಈಶ್ವರಪ್ಪ, ಷಣ್ಮುಖಪ್ಪ, ಆನಂದಪ್ಪ, ರಾಜಪ್ಪ, ಗುರುಸ್ವಾಮಿ, ಜಗದೀಶ್, ತಿಪ್ಪೇಸ್ವಾಮಿ, ಅನಿಲ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ರುದ್ರಮ್ಮ, ಶಿವಮೂರ್ತಿ, ಪವಿತ್ರ ಅಜ್ಜಯ್ಯ, ಸಾವಿತ್ರಮ್ಮ, ಹೊಳಲ್ಕೆರೆ ಬಿಜೆಪಿ.ಮಂಡಲ ಕಾರ್ಯದರ್ಶಿ ಸಿ.ವಿ.ಶಶಿಧರ್, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಊರಿನ ಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.





