ಹೊಳಲ್ಕೆರೆ : ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿದಾಗ ದೈವ ಬೆನ್ನಿಗೆ ನಿಲ್ಲುತ್ತದೆಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಭರಮಸಾಗರ ಹೋಬಳಿ ಚೀಳಂಗಿ ಗ್ರಾಮದಲ್ಲಿ ಸೋಮವಾರ ಬಸವೇಶ್ವರ ದೇವಸ್ಥಾನ ಉದ್ಘಾಟನೆ ಹಾಗೂ ಕಳಸಾರೋಹಣ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಮಾತಾಡಿದರು.
ಹನ್ನೆರಡನೆ ಶತಮಾನದ ಕ್ರಾಂತಿಕಾರಿ ಬಸವಣ್ಣನವರು ಅನೇಕ ವಚನ ಬರೆದಿದ್ದಾರೆ. ಕಾಯಕವೇ ಕೈಲಾಸ ಎನ್ನುವ ಸಂದೇಶವನ್ನು ವಿಶ್ವಕ್ಕೆ ಸಾರಿದ್ದಾರೆ. ಚಿಕ್ಕಂದಿನಿಂದಲೇ ಮಕ್ಕಳಿಗೆ ಶಿಕ್ಷಣದ ಜೊತೆ ಬಸವಣ್ಣನವರ ವಿಚಾರ, ತತ್ವ ಸಿದ್ದಾಂತ ಹಾಗೂ ವಚನಗಳನ್ನು ತಿಳಿಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪೋಷಕರುಗಳ ಮೇಲಿದೆ. ಮಕ್ಕಳಿಗೆ ಆಸ್ತಿ ಕೂಡಿಡುವ ಬದಲು ಶಿಕ್ಷಣವನ್ನೇ ಆಸ್ತಿಯನ್ನಾಗಿ ಮಾಡಿದಾಗ ತಂದೆ-ತಾಯಿಗಳ ಮನಸ್ಸಿಗೆ ಖುಷಿ ಕೊಡುತ್ತದೆ. ಶಿಕ್ಷಣದ ಜೊತೆ ಮಕ್ಕಳಿಗೆ ಸಂಸ್ಕಾರ ಕಲಿಸಬೇಕೆಂದು ಹೇಳಿದರು.
ಸಾರ್ವಜನಿಕರ ಬದುಕನ್ನು ಸ್ವಂತ ಬದುಕೆಂದು ಅರ್ಥಮಾಡಿಕೊಂಡು ಕಳೆದ ಮೂವತ್ತು ವರ್ಷಗಳಿಂದಲೂ ಶಾಸಕನಾಗಿ ಕ್ಷೇತ್ರದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ಉತ್ತಮ ಗುಣ ಮಟ್ಟದ ರಸ್ತೆ, ಶಾಲಾ-ಕಾಲೇಜು, ಹೈಟೆಕ್ ಆಸ್ಪತ್ರೆ, ಕೆರೆ ಕಟ್ಟೆ, ಚೆಕ್ಡ್ಯಾಂಗಳ ನಿರ್ಮಾಣ, ರೈತರ ತೋಟಗಳು ಒಣಗಬಾರದೆಂದು ವಿದ್ಯುತ್ ಪವರ್ಸ್ಟೇಷನ್ಗಳನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ ಸಿ.ಸಿ.ರಸ್ತೆ ಕಿತ್ತು ಹೋಗಿರುವುದರಿಂದ ಮತ್ತೆ 25 ಲಕ್ಷ ರೂ.ಗಳನ್ನು ಬಿಡುಗಡೆಗೊಳಿಸಿ ಹೊಸ ರಸ್ತೆ ನಿರ್ಮಿಸಲಾಗುವುದು. ಬಸವೇಶ್ವರ ದೇವಸ್ಥಾನದಲ್ಲಿ ಒಳ್ಳೆ ಅರ್ಚಕರನ್ನು ನೇಮಿಸಿ ದಿನನಿತ್ಯವೂ ಪೂಜೆ ಪುನಸ್ಕಾರಗಳು ನಡೆಯುವಂತೆ ನೋಡಿಕೊಳ್ಳಿ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಗ್ರಾಮಸ್ಥರಿಗೆ ತಿಳಿಸಿದರು.
ಸಿ.ಜೆ.ಕಲ್ಲಪ್ಪ, ಸಿ.ಜೆ.ನಿಜಲಿಂಗಪ್ಪ, ಸಿ.ಜೆ.ಪ್ರಕಾಶ್, ಸಿ.ಜೆ.ಮಂಜುನಾಥ್, ಕರೆಗೌಡ್ರು, ಹಿರೆಬೆನ್ನೂರು ರಾಜಣ್ಣ, ತಿಪ್ಪಣ್ಣ, ಬಸವಲಿಂಗಯ್ಯ, ಗ್ರಾಮದ ಯುವ ಮುಖಂಡ ಗಿರೀಶ್, ಅಭಿಷೇಕ್ ಚೀಳಂಗಿ, ಗ್ರಾಮದ ಹಿರಿಯರು ಈ ಸಂದರ್ಭದಲ್ಲಿ ಹಾಜರಿದ್ದರು.





