ಶ್ರಮಜೀವಿಗಳ ಕೆಲಸವನ್ನು ಗೌರವಿಸುವ ಹಾಗೂ ಅವರ ಕಷ್ಟಗಳನ್ನು ಸ್ಮರಿಸುವ ಸಲುವಾಗಿ ಮೇ 1ರಂದು ಜಾಗತಿಕವಾಗಿ ‘ಅಂತಾರಾಷ್ಟ್ರೀಯ ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ರಾಷ್ಟ್ರೀಯ ಯುವ ಸನ್ಮಾನ್ ಪ್ರಶಸ್ತಿ ಪುರಸ್ಕೃತರಾದ ವಕೀಲ ಎಸ್. ವೇದಮೂರ್ತಿ ತಿಳಿಸಿದರು.
ಹೊಳಲ್ಕೆರೆ ಪಟ್ಟಣದ ಪತ್ರಿಕಾ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ತಾಲೂಕು ಪತ್ರಿಕಾ ವಿತರಕರ ಸಂಘ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆ ಹಾಗೂ ಪತ್ರಿಕಾ ವಿತರಕರ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜಕ್ಕಾಗಿ ಕಾರ್ಮಿಕರ ಕೊಡುಗೆ ಹಾಗೂ ತ್ಯಾಗವನ್ನು ಕಾರ್ಮಿಕ ದಿನಾಚರಣೆ ಹಮ್ಮಿಕೊಂಡು ಸ್ಮರಿಸಬೇಕು. ಇಂದು ಗ್ರಾಮೀಣ ಮಟ್ಟದಲ್ಲಿ ಕಾರ್ಮಿಕ ವೃತ್ತಿಯಲ್ಲಿರುವ ಸಾಕಷ್ಟು ಕುಟುಂಬಗಳು ಸಂಕಷ್ಟದ ಬದುಕು ಕಟ್ಟಿಕೊಳ್ಳುತ್ತವೆ. ಕೌಶಲ್ಯ ಆಧಾರಿತವಾಗಿ ವೃತ್ತಿ ನಿರ್ವಹಿಸುವ ಕಾರ್ಮಿಕರಿಗೆ ಕಾಲಕಾಲಕ್ಕೆ ಉದ್ಯೋಗ ಸಿಗುತ್ತಿಲ್ಲ .
ಜೀವನಕ್ಕೆ ಬೇಕಾದಷ್ಟು ಹಣ ಸಂಪಾದನೆ ಆಗುತ್ತಿಲ್ಲ. ವಾರದಲ್ಲಿ ಒಂದೆರಡು ದಿನ ವೃತ್ತಿ ನಿರ್ವಹಿಸಿ ಬಾಕಿ ದಿನ ದುಡಿಮೆ ಇಲ್ಲದೆ ಖಾಲಿ ಕೂರುವ ಸ್ಥಿತಿ ಇದೆ. ಬರಗಾಲ ಎಲ್ಲಾ ವಿಧದ ಕಾರ್ಮಿಕರಿಗೆ ಕೆಲಸವಿಲ್ಲದಂತೆ ಮಾಡಿದೆ. ಸರ್ಕಾರಗಳು ಕಾರ್ಮಿಕ ಕಲ್ಯಾಣ ನಿಧಿಯನ್ನು ಸಾಲದ ರೂಪದಲ್ಲಿ ವಿತರಿಸಿ ದುಡಿಯುವ ವರ್ಗಕ್ಕೆ ಕೆಲಸ ನೀಡಬೇಕು. ಇವರ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣಕಾಸು ಸೌಲಭ್ಯ ಕಲ್ಪಿಸಬೇಕು. ವಿವಾಹ, ಅಪಘಾತ, ಸಾವುಗಳಂತಹ ಸಮಸ್ಯೆಯಾದಾಗ ತ್ವರಿತಗತಿಯಲ್ಲಿ ಪರಿಹಾರ ನೀಡಲು ಕಾರ್ಮಿಕ ಇಲಾಖೆ ನಿರ್ಲಕ್ಷ ಮಾಡಬಾರದು. ಕಾರ್ಮಿಕರು ಸಂಘಟಿತರಾಗಿ ಸರ್ಕಾರಿ ಸೌಲಭ್ಯಗಳನ್ನು ಸಕಾಲಕ್ಕೆ ಪಡೆದುಕೊಂಡು ಅಭಿವೃದ್ಧಿ ಸಾಧಿಸಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ತಿಳಿಸಿದರು.
ಪತ್ರಕರ್ತರ ಸಂಘದ ಉಪಾಧ್ಯಕ್ಷ ಎ. ಚಿತ್ತಪ್ಪ ಮಾತನಾಡಿ, ಕಾರ್ಮಿಕರು ಸಮಸ್ಯೆಗಳನ್ನು ಹೊತ್ತುಕೊಂಡು ಬದುಕುತ್ತಿದ್ದಾರೆ. ಅವರಿಗೆ ಸರ್ಕಾರ ಸೌಲಭ್ಯಗಳನ್ನು ಬರಪೂರವಾಗಿ ನೀಡಬೇಕು. ಕಾರ್ಮಿಕರಿಗೆ ಆರೋಗ್ಯ ವಿಮೆ, ಅಪಘಾತ ವಿಮೆ, ಮತ್ತಿತರ ಸೌಲಭ್ಯವನ್ನು ಕಲ್ಪಿಸಿಕೊಡಬೇಕು. ಪತ್ರಿಕಾ ವಿತರಕರನ್ನ ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಒಳಪಡಿಸಿ ಸೂಕ್ತ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ತಿಳಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ತಿಪ್ಪೇರುದ್ರಪ್ಪ ವಹಿಸಿದ್ದರು. ಗೌರವಾಧ್ಯಕ್ಷ ಮಲ್ಲೇಶಪ್ಪ, ಗೌಡಿಹಳ್ಳಿ ವಿರೂಪಾಕ್ಷಪ್ಪ, ನಿಕಟ ಪೂರ್ವ ಅಧ್ಯಕ್ಷ ನಾಗರಾಜ್, ಕಾರ್ಯದರ್ಶಿ ರವಿಕುಮಾರ್ ಸದಸ್ಯರಾದ ಶಿವಕುಮಾರ್, ಯೋಗರಾಜ್, ನಾಗರಾಜ್, ಶಿವಣ್ಣ , ಸುರೇಶ್ ಹಾವಿನಟ್ಟಿ, ಸೇರಿದಂತೆ ಹಲವಾರು ಕಾರ್ಮಿಕರು ಇದ್ದರು.
ಪತ್ರಿಕಾ ವಿತರಕರ ಸಂಘದಿಂದ ತಾಲೂಕಿನ ಪತ್ರಿಕಾ ವಿತರಕರಿಗೆ ಗುರುತಿನ ಪತ್ರ ವಿತರಣೆ ಮಾಡಲಾಯಿತು.





