ರಾಜೀನಾಮೆ ಕೊಡಲು ಬಂದ ಉಪಾಧ್ಯಕ್ಷರಿಂದ ನಗರಸಭೆ ಮಾಜಿ ಸದಸ್ಯನಿಂದ ಸರ್ಕಾರಿ ಆಸ್ತಿ ಕಬಳಿಕೆ ವಿರುದ್ಧ. ದಿಢೀರ್ ಪ್ರತಿಭಟನೆ
ಚಿತ್ರದುರ್ಗ ,08: ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ ಇಂದು ರಾಜೀನಾಮೆ ಸಲ್ಲಿಸಲು ಆಗಮಿಸುತ್ತಿದ್ದಾಗ, ನಾಟಕೀಯ ಬೆಳವಣಿಗೆಯೊಂದು ಇಂದು ನಡೆಯಿತು. ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ ಮತ್ತು ಪತಿ ಚಕ್ರವರ್ತಿ ಜೊತೆಯಾಗಿ ರಾಜೀನಾಮೆ ಸಲ್ಲಿಸಲು ನಗರಸಭೆ ಕಮೀಷನರ್ ರೇಣುಕಾ ರನ್ನು ನೋಡಲು ಬರುತ್ತಿದ್ದರು. ಇದರ ಮಧ್ಯೆ ನಗರಸಭೆ ಬಾಗಿಲ ಬಳಿ ಮಾಜಿ ಸದಸ್ಯ ಗಾಡಿ ಮಂಜುನಾಥ್ ಮತ್ತು ಚಕ್ರವರ್ತಿ ನಡುವೆ ಮಾತಿನ ಚಕಮಕಿ ನಡೆಯಿತು. ಚಕಮಕಿಗೆ ಚುನಾವಣೆಯ ಸಮಯದಲ್ಲಿ ಇಬ್ಬರ ನಡುವಿನ ವೈಷಮ್ಯವೇ ಕಾರಣ ಎಂದು ತಿಳಿದು ಬಂದಿದೆ. ಇಬ್ಬರ ನಡುವಿನ ಮಾತಿನ ಚಕಮಕಿಯಿಂದ ಸಿಟ್ಟಾದ ಚಕ್ರವರ್ತಿ, ಪತ್ನಿ ಶ್ರೀದೇವಿ ಅವರ ಚುನಾವಣೆ ಸಮಯದಲ್ಲಿ, ನನ್ನ ಮೇಲೆ ಸುಳ್ಳು ಆರೋಪ ಮಾಡಿ, ಮೇಲಾಧಿಕಾರಿಗಳಿಗೆ ದೂರು ನೀಡಿ, ಅಮಾನತ್ತುಗೊಳಿಸಲು ಕಾರಣರಾಗಿದ್ದರು. ಸುಖಾ ಸುಮ್ಮನೆ ಕಾಲು ಕೆರೆದು ಜಗಳ ಮಾಡುತ್ತಾರೆ. ಇಷ್ಟೆ ಅಲ್ಲದೆ ಸ್ವಾಮಿವಿವೇಕಾನಂದ ನಗರದಲ್ಲಿ ನಗರಸಭೆಯ ನಾಲ್ಕುಕೋಟಿ ರೂಪಾಯಿ ಬೆಲೆ ಬಾಳುವ ಜಾಗವನ್ನು ಗಾಡಿ ಮಂಜುನಾಥ್ ಕಬಳಿಸಿದ್ದಾರೆ ಎಂದು ಆರೋಪಿಸಿದರು. ಇದನ್ನೆ ಮುಂದು ಮಾಡಿಕೊಂಡು ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ ಕಮಿಷನರ್ ಮುಂದೆ ನೆಲದಲ್ಲಿಯೇ ಕುಳಿತು, ನಗರಸಭೆ ಆಸ್ತಿ ಕಬಳಿಕೆ ಮಾಡಿದವರ ವಿರುದ್ಧ ಕ್ರಮಕ್ಕೆ ಈ ಹಿಂದೆ ದೂರು ನೀಡಿದ್ದೆ, ಆದರೆ ನೀವು ಯಾಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರತಿಭಟನೆ ಆರಂಭಿಸಿದರು. ಇದರಿಂದ ತಬ್ಬಿಬ್ಬಾದ ಪೌರಾಯುಕ್ತರಾದ ರೇಣುಕಾ ಅವರು, ಶ್ರೀದೇವಿ ಅವರಿಗೆ ಸಮಾಧಾನ ಪಡಿಸಿ, ಮೇಲೆ ಕುಳಿತುಕೊಳ್ಳಲು ಮನವಿ ಮಾಡಿದರೂ ಕುಳಿತುಕೊಳ್ಳಲಿಲ್ಲ. ನಂತರ ಪ್ರತಿಭಟನೆ ಸ್ಥಳದಿಂದಲೇ ಪೌರಾಯುಕ್ತರನ್ನು ಸ್ವಾಮಿವಿವೇಕಾನಂದ ನಗರಕ್ಕೆ ಸ್ಥಳ ಪರಿಶೀಲನೆಗೆ ಕರೆದುಕೊಂಡು ಹೋದರು. ಪರಿಶೀಲನೆ ಮಾಡಿಕೊಂಡು ಬಂದ ನಂತರ ಶ್ರೀದೇವಿ ಜಿಲ್ಲಾಧಿಕಾರಿಗಳಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.
ಉಪಾಧ್ಯಕ್ಷೆ ಶ್ರೀದೇವಿಚಕ್ರವರ್ತಿ ಅವರ ರಾಜೀನಾಮೆ ಯಾಕೆ : ನಾನು ಈ ಹಿಂದೆ ಪ್ಲಾಸ್ಟಿಕ್ ಮರು ಬಳಕೆ ಮಾಡದಂತೆ ತಡೆಯಬೇಕು. ಗಾಂಧಿ ವೃತ್ತದಲ್ಲಿರುವ ಮಳಿಗೆ ಬಳಿ ಸ್ಬಚ್ಛತೆ ಮಾಡಿಸಬೇಕು. ಹಾಗೂ ಜಕಾತಿ ವಸೂಲಿ ನಿಲ್ಲಿಸಿದ್ದರಿಂದ, ನನ್ನ ಮೇಲೆ ರಾಜಕೀಯ ದ್ವೇಷದಿಂದ ಅವಿಶ್ವಾಸ ತರಲು ರಾಜಕಾರಣಿಗಳು ಮುಂದಾಗಿದ್ದರು. ನಾನು ನಗರದ ಅಭಿವೃದ್ದಿ ಬಗ್ಗೆ ಮಾತಾಡಿದ್ದಕ್ಕೆ ನನ್ನ ವಿರುದ್ಧ ಅವಿಶ್ವಾಸ ತರಲು ನಿರ್ಣಯಿಸಿದ್ದು, ಅವರು ಅವಿಶ್ವಾಸ ತರುವ ಮುನ್ನವೇ ನಾನೇ ರಾಜೀನಾಮೆ ಕೊಡುತ್ತಿದ್ದೇನೆ ಎಂದರು.





