ರೈತರಿಗೆ
ಹೆಚ್ಚಿನ ಪ್ರೋತ್ಸಾಹ ಅತ್ಯಗತ್ಯ :ಅಮರ್ ನಾರಾಯಣ್
ಶ್ರೀಗಂಧ ಕೃಷಿ ಬೆಳೆ ಬೆಳೆಯಲು ರೈತರಿಗೆ ಸರ್ಕಾರದಿಂದ ಪ್ರೋತ್ಸಾಹ ಅತ್ಯಗತ್ಯವಾಗಿದ್ದು, ಕಳೆದ ಒಂದು ವರ್ಷದ ಹೋರಾಟದ ಫಲವಾಗಿ ಶ್ರೀಗಂಧ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸರ್ಕಾರ ಅನುಮತಿ ಕೊಟ್ಟಿದೆ ಅದರ ಬಗ್ಗೆ ವಿವರವಾದ ಮಾರ್ಗಸೂಚಿಗಳು ಬಿಡುಗಡೆಯಾಗಬೇಕಾಗಿದೆ ಎಂದು ಪರಿಸರ ತಜ್ಞರು ಹಾಗೂ ನಿವೃತ್ತ ಜಿಲ್ಲಾಧಿಕಾರಿ ಕೆ.ಅಮರ್ ನಾರಾಯಣ್ ತಿಳಿಸಿದರು.
ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನ ಕೃಷಿ ಬೆಳಗಾರರ ಸಂಘ, ಮರ ಕೃಷಿ ಮತ್ತು ತಂತ್ರಜ್ಞಾನ ಸಂಸ್ಥೆ ಬೆಂಗಳೂರು ಹಾಗೂ ಕೃಷಿ ವಿಜ್ಞಾನ ಕೇಂದ್ರ ಬಬ್ಬೂರ್ ಫಾರಂ ಹಿರಿಯೂರು ತಾಲ್ಲೂಕು ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಒಂದು ದಿನದ ಶ್ರೀಗಂಧ ಹಾಗೂ ವನ ಕೃಷಿಯ ಬಗ್ಗೆ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ವಿಜ್ಞಾನಿಗಳಾದ ಡಾಕ್ಟರ್ ಹೆಮ್ಲಾ ನಾಯಕ್ ಮಾತನಾಡಿ, ಶ್ರೀಗಂಧ ಹಾಗೂ ವನಕೃಷಿಯ ಕಾರ್ಯಕ್ರಮಕ್ಕೆ ಹೆಚ್ಚು ರೈತರು ಬಂದಿರುವುದು ತುಂಬಾ ಸಂತೋಷದ ವಿಚಾರವಾಗಿದ್ದು, ಕರ್ನಾಟಕದ ಶ್ರೀಗಂಧಕ್ಕೆ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೇಡಿಕೆ ಹಾಗೂ ಮಾರುಕಟ್ಟೆ ಇದ್ದು, ರೈತರು ಒಂದೇ ಬಾರಿ ಅತ್ಯಧಿಕ ಆದಾಯ ತರುವ ಶ್ರೀಗಂಧ ಬೆಳೆಯನ್ನು ಬೆಳೆಯಬೇಕು ಎಂದು ಹೇಳಿದರು.
ಶ್ರೀಗಂಧ ಬೆಳೆಯ ರಕ್ಷಣೆ ಬಗ್ಗೆ ಮಾತನಾಡಿದ ಉಪಾಧ್ಯಕ್ಷರಾದ ಶರಣಪ್ಪರವರು ಶ್ರೀಗಂಧ ಬೆಳೆಯನ್ನು ಬೆಳೆಯುವಲ್ಲಿ ತಂತ್ರಜ್ಞಾನ ಆಧಾರಿತ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅತ್ಯಧಿಕ ಲಾಭ ಗಳಿಸುವಲ್ಲಿ ಆಸಕ್ತರಾಗಬೇಕು ಎಂಬುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಡಾಕ್ಟರ್ ದಿವಾಕರ್ ನಾಗೇಶ್ ದಿನೇಶ್, ರಾಮಣ್ಣ, ಚಂದ್ರೇಗೌಡ, ಎಲ್ಲದಕೆರೆ ರವಿ ,ಕಸವನಹಳ್ಳಿ ರಮೇಶ್ ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ನೂರಾರು ಕೃಷಿಕ ರೈತರು ಮಹಿಳೆಯರು ಭಾಗವಹಿಸಿದ್ದರು.
ಆರಂಭದಲ್ಲಿ ಹಿರಿಯ ವಿಜ್ಞಾನಿ ಪ್ರಕಾಶ್ ಕೆರೂರ್ ಅವರು ಸ್ವಾಗತಿಸಿದರು. ಕೊನೆಯಲ್ಲಿ ವಿಜ್ಞಾನಿ ಕುಮಾರ್ ವಂದನಾರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ಮರ ಕೃಷಿಯ ಬಗ್ಗೆ ವಿಷಯ ತಜ್ಞರು, ಶ್ರೀಗಂಧ ಬೆಳೆಗಾರರು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡರು..