ರಾಜ್ಯದಾದ್ಯಂತ ಮೋದಿ ಅಲೆ ಇದೆ. ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕೆಂಬ ಭಾವನೆ ರಾಜ್ಯದ ಜನರಲ್ಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.
ಅವರು ಹೊಳಲ್ಕೆರೆಯಲ್ಲಿ ನಡೆದ ಬಿಜೆಪಿ ಬಹಿರಂಗ ಸಭೆಯಲ್ಲಿ ಮಾತಾಡಿದರು.
ನರೇಂದ್ರ ಮೋದಿಯವರು ದೇಶದ ಬಡವರು, ಯಾರು ಉಪವಾಸ ಇರಬಾರದು ಎಂದು ಐದು ಕೇಜಿ ಅಕ್ಕಿ ತಲುಪಿಸುತ್ತಿದ್ದಾರೆ. ಸಿದ್ದರಾಮಯ್ಯ ಕೂಡ ಹತ್ತು ಕೇಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದವರು ಅಕ್ಕಿ ಕೊಡುತ್ತಿಲ್ಲ. ಯಾವ ಮುಖವನ್ನು ಹೊತ್ತು ಜನರ ಮತಯಾಚನೆ ಮಾಡುತ್ತಿದ್ದಿರಾ ಸಿಎಂ ಮತ್ತು ಡಿಸಿಎಂ ಅವರೇ, ಎಂದು ತಿವಿದರು. ಕಾಂಗ್ರೆಸ್ ಸರ್ಕಾರದ ಸಾಧನೆ ಎಂದರೆ ಬೆಲೆ ಏರಿಕೆ ಮಾತ್ರ, ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಸಿಎಂ ಸಿದ್ದರಾಮಯ್ಯ ಅವರು, ಇಂದು ರೈತರು ವಿದ್ಯುತ್ ಸಂಪರ್ಕಕ್ಕಾಗಿ 3 ಲಕ್ಷ ಹಣವನ್ನು ಕಟ್ಟಬೇಕಾದ ಸ್ಥಿತಿ ನಿರ್ಮಾಣ ಮಾಡಿದ್ದಾರೆ. ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವ ಕೆಲಸ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಎಸ್ಸಿಪಿ ಟಿಎಸ್ಪಿ 11 ಸಾವಿರ ಕೋಟಿ ಹಣವನ್ನು ಬೇರೆಡೆಗೆ ವರ್ಗಾಯಿಸಿದ್ದಾರೆ. ಗ್ಯಾರಂಟಿಗಾಗಿ ಎಸ್ಸಿ ಎಸ್ಟಿ ಗಳಿಗೆ ಮೀಸಲಿಟ್ಟಿದ್ದ ಹಣವನ್ನು ಬೇರೆಡೆಗೆ ವರ್ಗಾಯಿಸಿ ಮೋಸ ಮಾಡಿದ್ದಾರೆ. ಅಂಬೇಡ್ಕರ್ ಬದುಕಿದ್ದಾಗಲೆ ಅವರನ್ನು ಕಗ್ಗೊಲೆ ಮಾಡಿದ್ದಾರೆ. ಅಂಬೇಡ್ಕರ್ ಹೆಸರೇಳುವ ಯೋಗ್ಯತೆಯನ್ನು ಕಾಂಗ್ರೆಸ್ ಉಳಿಸಿಕೊಂಡಿಲ್ಲ. ಬರ ಪರಿಹಾರ ಕೊಟ್ಟಿಲ್ಲ ಎಂದು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಾರೆ. ಸಿದ್ದರಾಮಯ್ಯ ಅವರು ರೈತರಿಗೆ ಬರ ಪರಿಹಾರ ಕೊಡದೆ ಅನ್ಯಾಯ ಮಾಡುತ್ತಿದ್ದಾರೆ. ದಲಿತ ವಿರೋಧಿ ಸರ್ಕಾರ ಈ ಕಾಂಗ್ರೆಸ್ ಸರ್ಕಾರ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಬೇಕಿದೆ. ದೇವೇಗೌಡರು ಕೂಡ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಬೆಂಬಲ ಸೂಚಿಸಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ನಿದ್ದೆ ಗೆಟ್ಟಿದೆ. ಕಾಂಗ್ರೆಸ್ ಪಕ್ಷ ಒಂದು ಕ್ಷೇತ್ರ ಗೆಲ್ಲಲ್ಲ, ಎಲ್ಲವೂ ಕೂಡ ಬಿಜೆಪಿ ಹಾಗೂ ಜೆಡಿಎಸ್ ಗೆಲ್ಲಲಿದೆ. ಬಿಜೆಪಿ ಕಾರ್ಯಕರ್ತರು ಒಂದಾಗಿ ಬಿಜೆಪಿಗೆ ಮತ ಹಾಕಿಸುವ ಮೂಲಕ ಕಾರಜೋಳ ಅವರನ್ನು ಗೆಲ್ಲಿಸಬೇಕು ಎಂದರು.ಇದೇ ತಿಂಗಳು 26 ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿರುವ ನನ್ನನ್ನು ಬೆಂಬಲಿಸಬೇಕೆಂದು ಮಾತು ಆರಂಭಿಸಿದ ಕಾರಜೋಳ,ಮೋದಿಯವರು ಯಾವುದೇ ಭ್ರಷ್ಠಾಚಾರದಲ್ಲಿ ಸಿಲುಕಿಲ್ಲ, ಹಗರಣಗಳಲ್ಲಿ ಇಲ್ಲ. ಜಗತ್ತಿನ ಎಲ್ಲಾ ರಾಷ್ಟ್ರಗಳ ಮೋದಿಯವರನ್ನು ಕೊಂಡಾಡುತ್ತಿದ್ದಾರೆ. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಮಾಡಿರುವ ಅಭಿವೃದ್ದಿ ಕಾರ್ಯಗಳನ್ನು ಮುಂದಿಟ್ಟುಕೊಂಡು, ಮನೆ ಮನೆಗೆ ತಲುಪಿಸಿ ಬಿಜೆಪಿ ಗೆಲ್ಲಿಸಬೇಕು. ಮೋದಿಯವರ ಕೈ ಬಲಪಡಿಸಬೇಕು ಎಂದರು.
ಕಾಂಗ್ರೆಸ್ ನವರು ಪ್ರತಿ ಪಕ್ಷದ ನಾಯಕರಾಗುವಷ್ಟು ಸೀಟುಗಳನ್ನು ಗೆಲ್ಲುವುದಿಲ್ಲ. ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ. ಮೋದಿ ಪ್ರಧಾನಿಯಾಗುವುದನ್ನು 140 ಕೋಟಿ ಜನ ಹಂಬಲಿಸುತ್ತಿದ್ದಾರೆ.
ಶಾಸಕ ಚಂದ್ರಪ್ಪ ಮಾತಾಡಿ, ಕಳೆದ ಒಂದು ವರ್ಷದಿಂದ ಬರಗಾಲವನ್ನು ಎದುರಿಸುತ್ತಿರುವ ರೈತರಿಗೆ ಅಕ್ಟೋಬರ್ 2 ರಂದು ಈ ಭಾಗದ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡುತ್ತೇನೆ. ಕೊಟ್ಟ ಮಾತಿಗೆ ಬದ್ದರಾಗಿರುವಂತವರು ನಾವು, ಅದರಂತೆ ನಾವು ನಡೆದುಕೊಳ್ಳುತ್ತೇವೆ. ಹಿಂದೆಯೂ 40 ಸಾವಿರ ಮತಗಳ ಲೀಡ್ ಕೊಟ್ಟಿದ್ದೆವು, ನಾನು ಶಾಸಕನಾಗದೆ ಇದ್ದಾಗಲೂ 14 ಸಾವಿರ ಮತಗಳ ಲೀಡ್ ಕೊಟ್ಟಿದ್ದೆ, ಅದರಂತೆ ಈಗಲೂ ನಾವು ಗೋವಿಂದ ಕಾರಜೋಳ ಅವರನ್ನು ಗೆಲ್ಲಿಸಲು ಪ್ರಯತ್ನ ಮಾಡುತ್ತೇವೆ ಎಂದರು.
ಯುವ ಮುಖಂಡ ರಘುಚಂದನ್ ಮಾತಾಡಿ, ನಾವು ಕೊಟ್ಟ ಮಾತಿಗೆ ಬದ್ದರಾಗಿರುತ್ತೇವೆ. ಅದರಂತೆ ನಡೆಯುತ್ತೇವೆ. ನಾನು ಆಕಾಂಕ್ಷಿಯಾಗಿದ್ದು, ಕಾರಜೋಳ ಅವರು ಬಂದ ಮೇಲೆ, ಕೆಲವರು ತಮ್ಮ ಪಕ್ಷಗಳಿಗೆ ಕರೆದರು. ಆದರೆ ನಾವು ಕ್ಷೇತ್ರದ ಜನತೆಯನ್ನು ಬಿಟ್ಟು ಅವರ ಕತ್ತು ಕೋಯ್ದು ಹೋಗುವ ಜನರಲ್ಲ ಆದ್ಧರಿಂದ ಯಾವುದೇ ಪಕ್ಷಕ್ಕೆ ಹೋಗಲಿಲ್ಲ. ವಿಜಯೇಂದ್ರ ಅವರಿಗೆ ಕೊಟ್ಟ ಮಾತಿನಂತೆ ನಾವು ಈ ಬಾರಿ ಕಾರಜೋಳ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುತ್ತೇವೆ ಎಂದರು. ಸಭೆಯಲ್ಲಿ ಬಿಜೆಪಿ ಚುನವಾಣಾ ಸಂಚಾಲಕ ಲಿಂಗಮೂರ್ತಿ, ಜಿಲ್ಲಾಧ್ಯಕ್ಷ ಮುರುಳಿ, ವಿಧಾನ ಪರಿಷತ್ ಸದಸ್ಯರಾದ ಕೆ ಎಸ್ ನವೀನ್, ರವಿಕುಮಾರ್, ಇನ್ನಿತರರಿದ್ದರು.