*ವಿಶೇಷ ಶಿಬಿರ ಆಯೋಜಿಸಿ, ಬೂಸ್ಟರ್ ಲಸಿಕೆ ನೀಡಿ*
ಜಿಲ್ಲೆಯಲ್ಲಿ ಮುಂಚೂಣಿ ಕಾರ್ಯಕರ್ತರು ಹಾಗೂ ಆರೋಗ್ಯ ಸೇವೆ ಕಾರ್ಯಕರ್ತರು ಬೂಸ್ಟರ್ ಡೋಸ್ ಪಡೆದ ಪ್ರಮಾಣ ಶೇ. 98 ಕ್ಕಿಂತ ಹೆಚ್ಚಿದ್ದು, ಆದರೆ ಸಾರ್ವಜನಿಕರಲ್ಲಿ ಇದರ ಪ್ರಮಾಣ ಕೇವಲ ಶೇ. 12 ರಷ್ಟು ಮಾತ್ರ ಇದೆ. ಇದುವರೆಗೂ ಜಿಲ್ಲೆಯಲ್ಲಿ 10.40 ಲಕ್ಷ ಜನರು ಬೂಸ್ಟರ್ ಡೋಸ್ ಪಡೆಯಲು ಅರ್ಹರಾಗಿದ್ದು, ವಿಶೇಷ ಶಿಬಿರ ಆಯೋಜಿಸಿ, ಅರ್ಹರೆಲ್ಲರಿಗೂ ಬೂಸ್ಟರ್ ಡೋಸ್ ಲಸಿಕೆ ನೀಡಿಕೆಗೆ ಕ್ರಮವಹಿಸಬೇಕು ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಡಿಹೆಚ್ಓಗೆ ಸೂಚಿಸಿದರು.
ಅವರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿನಡೆದ ದಿಶಾ ಸಭೆಯಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಿಚ್ಓ ಡಾ.ರಂಗನಾಥ್ ಮಾತನಾಡಿ, ಬೂಸ್ಟರ್ ಡೋಸ್ಗೆ ಗುರಿ ನಿಗಧಿಯಲ್ಲಿ ಶೇ.50 ರಷ್ಟು ಸಾಧನೆಯನ್ನು ಜನವರಿ ಮಾಹೆಯೊಳಗೆ ಮುಕ್ತಾಯಗೊಳಿಸಬೇಕು. ಬೂಸ್ಟರ್ ಡೋಸ್ ಗುರಿ ಪೂರ್ಣಗೊಳಿಸಲು ಈಗಾಗಲೇ ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದೆ. 37 ಸಾವಿರ ಡೋಸ್ ಕೋವ್ಯಾಕ್ಸಿನ್ ದಾಸ್ತಾನು ಇದೆ. ಕೋವಿಶಿಲ್ಡ್ ಲಸಿಕೆ ಶೀಘ್ರದಲ್ಲಿ ಸರಬರಾಜು ಆಗಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಕೋವಿಡ್-19ರ ಕುರಿತು ಅಗತ್ಯ ಮುಂಜಾಗ್ರತಾ ಕ್ರಮಗಳ ಕುರಿತು ವಿವಿಧ ಇಲಾಖೆಗಳೊಂದಿಗೆ ಈಗಾಗಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಕಳೆದ 14 ದಿನಗಳಿಂದ ಜಿಲ್ಲೆಯಲ್ಲಿ ಯಾವುದೇ ಕೋವಿಡ್ ಪ್ರಕರಣ ವರದಿಯಾಗಿಲ್ಲ. ಒಂದು ವೇಳೆ ಯಾವುದಾರೂ ಪ್ರಕರಣ ಪಾಸಿಟಿವ್ ಎಂದು ಕಂಡುಬಂದಲ್ಲಿ ಯಾವ ತಳಿ ಎಂದು ಪತ್ತೆಹಚ್ಚಲು ಕೇಂದ್ರ ಸರ್ಕಾರದ ನಿರ್ದೇಶನದಂತೆ ಜಿನೋಮ್ ಸೀಕ್ವೆನ್ಸ್ಗೆ ಕಳುಹಿಸಲಾಗುವುದು. ಕೋವಿಡ್-19ರ ಚಿಕಿತ್ಸೆಗೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಎಲ್ಲಾ ತಾಲ್ಲೂಕು ಹಾಗೂ ಜಿಲ್ಲಾಮಟ್ಟದ ಆಸ್ಪತ್ರೆಗಳಲ್ಲಿ ಈಗಾಗಲೇ ಮಾಕ್ ಡ್ರಿಲ್ ಮಾಡಲಾಗಿದೆ ಎಂದು ಡಿಹೆಚ್ಓ ಡಾ.ರಂಗನಾಥ್ ತಿಳಿಸಿದರು.
ವೈಂಜಕ್ಷನ್ ಸಮಸ್ಯೆ ಇತ್ಯರ್ಥಪಡಿಸಲು ಸೂಚನೆ: ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ವೈಜಂಕ್ಷನ್ ಬಳಿ 1.9 ಕಿಮೀ ಸ್ಥಗಿತವಾಗಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯ ಕೆಲಸ ನಿರ್ವಹಿಸಲು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಗತ್ಯ ಸಹಕಾರ ನೀಡಬೇಕು. ಕೆಲವರು ಭೂ ಪರಿಹಾರ ಹಣ ಪಡೆದರೂ ಕೋರ್ಟ್ ಮೊರೆಹೋಗಿದ್ದಾರೆ. ಇದು ಗಂಭೀರ ವಿಷಯವಾಗಿದ್ದು, ವೈಂಜಕ್ಷನ್ ಬಳಿಯ ಸಮಸ್ಯೆಯ ಇತ್ಯರ್ಥ ಪಡಿಸಬೇಕು ಎಂದು ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಕಳೆದ ಎರಡು ವರ್ಷಗಳಿಂದ ವೈಜಂಕ್ಷನ್ ಸಮಸ್ಯೆ ಇತ್ಯರ್ಥವಾಗುತ್ತಿಲ್ಲ. ವೈಂಜಕ್ಷನ್ ಸಮಸ್ಯೆ ಇತ್ಯರ್ಥವಾಗದಿದ್ದರೆ, ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾದರೂ ಬರದ ನಾಡಿಗೆ ಯಾವುದೇ ಉಪಯೋಗವಿಲ್ಲದಂತಾಗುತ್ತದೆ. ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗದಿದ್ದರೆ ಚಿತ್ರದುರ್ಗ ಜಿಲ್ಲೆಗೆ ನ್ಯಾಯ ಸಿಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಸಚಿವರು, ವೈಂಜಕ್ಷನ್ ಸಮಸ್ಯೆ ಇತ್ಯರ್ಥಕ್ಕೆ ಆ ಭಾಗದ ಜನರು ಕೇಳಿದಷ್ಟು ಹಣ ನೀಡಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು.