ಕೆರೆಗಳ ಪುನಶ್ಚೇತನಕ್ಕೆ ಕ್ರಮ: ಡಿಸಿ ದಿವ್ಯ ಪ್ರಭು

ಆರೋಗ್ಯ

ಕೆರೆಗಳ ನಿರ್ವಹಣೆ ಮತ್ತು ಸಂರಕ್ಷಣೆಯನ್ನು ಕೆರೆ ಬಳಕೆದಾರರ ಸಂಘಗಳಿಗೆ ವಹಿಸಿಕೊಡುವಂತೆ ಚಿತ್ರದುರ್ಗ ಜಿಲ್ಲಾ ಕೆರೆ ಬಳಕೆದಾರರ ಸಂಘಗಳ ಒಕ್ಕೂಟದವರು ಜಿಲ್ಲಾಧಿಕಾರಿ ಜೊತೆ ಬುಧವಾರ ಚರ್ಚಿ ನಡೆಸಿದರು.
ಮಧ್ಯಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆ ಮಳೆಯಾಶ್ರಿತ ಪ್ರದೇಶವಾಗಿದ್ದು, ರೈತರ ಕೃಷಿ ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಕೆರೆಗಳನ್ನು ಆಶ್ರಯಿಸುವಂತಾಗಿದೆ. ಜಿಲ್ಲೆಯಲ್ಲಿರುವ 305 ಕೆರೆಗಳಲ್ಲಿ 153 ಕೆರೆಗಳನ್ನು ಈ ಯೋಜನೆ ವ್ಯಾಪ್ತಿಯಲ್ಲಿ ಸೇರಿಸಿ 153 ಕೆರೆ ಬಳಕೆದಾರರ ಸಂಘಗಳನ್ನು ರಚಿಸಿ ಕೆರೆಗಳನ್ನು ಪುನಶ್ಚೇತನಗೊಳಿಸಲಾಯಿತು. ಚಿತ್ರದುರ್ಗ ತಾಲ್ಲೂಕಿನಲ್ಲಿ 44, ಹಿರಿಯೂರು 54, ಮೊಳಕಾಲ್ಮುರು 22, ಹೊಸದುರ್ಗ 52, ಹೊಳಲ್ಕೆರೆ 55, ಚಳ್ಳಕೆರೆ ತಾಲ್ಲೂಕಿನಲ್ಲಿ 78 ಕೆರೆಗಳಿದ್ದು, ಒಟ್ಟು 59 ಸಂಘಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ಸಭೆಯಲ್ಲಿ ತರಲಾಯಿತು.
ಜಿಲ್ಲಾ ಕೆರೆ ಬಳಕೆದಾರರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಿ.ನಾಗರಾಜಯ್ಯ ಮಾತನಾಡಿ ಜಿಲ್ಲೆಯಲ್ಲಿ ಬಹುತೇಕ ಕೆರೆಗಳು ಭರ್ತಿಯಾಗಿದ್ದು, ಜಂಗಲ್ ಬೆಳೆದಿವೆ. ಅದಕ್ಕಾಗಿ ಕೆರೆಗಳನ್ನು ನಿರಂತರವಾಗಿ ನಿರ್ವಹಿಸಲು ತ್ರಿಪಕ್ಷಿಯ ಒಪ್ಪಂದದಂತೆ ಕೆರೆ ಸಂಘಗಳಿಗೆ ವಹಿಸಬೇಕು. ಕೆರೆ ಅಂಗಳವನ್ನು ಸರ್ವೆ ಮಾಡಿಸಿ ಒತ್ತುವರಿ ತೆರವುಗೊಳಿಸಿ ಕೆರೆ ಅಂಚಿನಲ್ಲಿ ಬೌಂಡರಿ ಟ್ರಂಚ್ ಮಾಡಬೇಕು. ಕೆರೆ ಅಂಗಳ ಮತ್ತು ಏರಿಯ ಮೇಲೆ ಬೆಳೆದಿರುವ ಜಂಗಲ್ ತೆಗೆಸಬೇಕು. ಕೆರೆ ಅಂಗಳದಲ್ಲಿ ಅವೈಜ್ಞಾನಿಕವಾಗಿ ಎತ್ತುವ ಮರಳು ಮತ್ತು ಗ್ರಾವೆಲ್ ನಿಲ್ಲಬೇಕು. ಕೆರೆ ಅಂಚಿನಲ್ಲಿ ಅರಣ್ಯೀಕರಣವಾಗಬೇಕು. ಕೆರೆ ಆದಾಯಗಳಾದ ಮೀನು ಪಾಶುವಾರ ಹಕ್ಕನ್ನು ಕೆರೆ ಸಂಘಗಳಿಗೆ ವಹಿಸಬೇಕು. ಕೆರೆ ಏರಿಯ ಮೇಲೆ ಮತ್ತು ಗ್ರಾಮಗಳ ಮುಖ್ಯ ಸ್ಥಳಗಳಲ್ಲಿ ಕೆರೆ ಸಂರಕ್ಷಣೆ ಮತ್ತು ಕೆರೆ ನಿರ್ವಹಣೆಗೆ ಸಂಬಂಧಿಸಿದ ಕಾನೂನನ್ನು ಬೋರ್ಡ್‍ಗಳಲ್ಲಿ ಬರೆಸಿ ಹಾಕಬೇಕು. ಕೆರೆ ಬಳಕೆದಾರರ ಸಂಘಗಳ ಐದು ವರ್ಷಗಳ ಮೇಲ್ಪಟ್ಟು ನವೀಕರಿಸದ ಕೆರೆ ಸಂಘಗಳಿಗೆ ದಂಡ ರಹಿತವಾಗಿ ನವೀಕರಿಸಬೇಕು ಎಂದು ಮನವಿ ಮಾಡಿದಾಗ ಬಹುತೇಕ ಎಲ್ಲಾ ಬೇಡಿಕೆಗಳನ್ನು ಸಮ್ಮತಿಸಿದ ಜಿಲ್ಲಾಧಿಕಾರಿ ಸರ್ಕಾರದ ಮಟ್ಟದಲ್ಲಿ ಆಗುವ ಕೆಲಸಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಜಿಲ್ಲಾ ಕೆರೆ ಬಳಕೆದಾರರ ಸಂಘಗಳ ಒಕ್ಕೂಟದವರಿಗೆ ಭರವಸೆ ನೀಡಿದರು.
ಬೇಸಿಗೆಗೆ ರೈತರ ಕೃಷಿಗೆ ಕೆರೆಗಳಿಂದ ನೀರು ಹರಿಸಬೇಕು ಎಂದು ಸಭೆಯಲ್ಲಿ ಚರ್ಚಿಸಿದಾಗ ಸಣ್ಣ ನೀರಾವರಿ ಹಾಗೂ ಇತರೆ ಇಲಾಖೆಯ ಇಂಜಿನಿಯರ್‍ಗಳಿಗೆ ಕೆರೆ ಬಳಕೆದಾರರ ಸಂಘಗಳ ಒಕ್ಕೂಟದ ಜೊತೆ ಎಲ್ಲಾ ಕೆರೆಗಳನ್ನು ವೀಕ್ಷಿಸಿ ಇನ್ನೊಂದು ತಿಂಗಳಲ್ಲಿ ವರದಿ ಕೊಡಿ ನಂತರ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ಜೊತೆ ಮತ್ತೊಂದು ಸಭೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಕೆರೆಗಳ ಪುನಶ್ಚೇತನಕ್ಕಾಗಿ ಮುಂದಿನ ಕ್ರಮ ಕೈಗೊಳ್ಳುತ್ತೇನೆಂದು ಜಿಲ್ಲಾಧಿಕಾರಿ ತಿಳಿಸಿದರು.
ಚಿತ್ರದುರ್ಗ ಜಿಲ್ಲಾ ಕೆರೆ ಬಳಕೆದಾರರ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಆನಂದ್, ಜಿಲ್ಲಾ ಉಪಾಧ್ಯಕ್ಷ ಐಯ್ಯಣ್ಣ, ಖಜಾಂಚಿ ಬೋಜಣ್ಣ ಕೂನಿಕೆರೆ, ಚಿತ್ರದುರ್ಗ ತಾಲ್ಲೂಕು ಕೆರೆ ಬಳಕೆದಾರರ ಸಂಘಗಳ ಒಕ್ಕೂಟದ ಅಧ್ಯಕ್ಷ ಸಿದ್ದೇಶ್, ಕಾರ್ಯದರ್ಶಿ ನಾಗರಾಜ್ ಸಿರಿಗೆರೆ, ಚಳ್ಳಕೆರೆ ತಾಲ್ಲೂಕಿನ ಮಲ್ಲೇಶಪ್ಪ, ಬೋರಯ್ಯ, ಮೊಳಕಾಲ್ಮುರು ತಾಲ್ಲೂಕಿನ ನಾಗರಾಜ್, ರಮೇಶ್, ಹಿರಿಯೂರು ತಾಲ್ಲೂಕಿನ ಕೃಷ್ಣಪ್ಪ, ಚಂದ್ರಶೇಖರಯ್ಯ, ಹೊಸದುರ್ಗದ ನೀರಗುಂದ ಚಂದ್ರಣ್ಣ, ಹೊಳಲ್ಕೆರೆಯ ಜಗದೀಶ್ ನಾಡಿಗ್, ಬುಕ್ಕಾಂಬೂದಿ ನಾಗರಾಜ್, ಗೋಸಿಕೆರೆ ನಾಗೇಂದ್ರಪ್ಪ, ಕಾರ್ಯನಿರ್ವಹಣಾಧಿಕಾರಿ ಸಿ.ಎಸ್.ದೇಶ್‍ಮುಖ್, ಪಿ.ಆರ್.ಐ.ಡಿ.ಕಾರ್ಯಪಾಲಕ ಇಂಜಿನಿಯರ್ ಹನುಮಂತಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿರ್‍ಗಳಾದ ಅಣ್ಣಪ್ಪ, ಪಾಂಡುರಂಗಪ್ಪ, ಸಣ್ಣನೀರಾವರಿ ಇಲಾಖೆಯ ಇಂಜಿನಿಯರ್‍ಗಳು ಸಭೆಯಲ್ಲಿದ್ದರು.

 

 

 

Leave a Reply

Your email address will not be published. Required fields are marked *