ಯಾವುದೋ ಉದ್ದೇಶವಿಟ್ಟುಕೊಂಡು ನಿಮ್ಮತನವನ್ನು ನೀವು ಕಳೆದುಕೊಳ್ಳಬಾರದು ಅಧಿಕಾರದಲ್ಲಿದ್ದಾಗ ಯಾರು ಒಳ್ಳೆಯದು ಮಾಡುತ್ತಾರೋ ಅಂತಹವರನ್ನು ಚುನಾವಣೆಯಲ್ಲಿ ಬೆಂಬಲಿಸುವಂತೆ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದರು.
ಹೊಳಲ್ಕೆರೆ ಪಟ್ಟಣದ ಮೂರು ವಾರ್ಡ್ಗಳಿಗೆ ಸೇರಿದ ವಿವಿಧ ಬಡಾವಣೆಗಳಲ್ಲಿ ಅಮೃತ ನಗರೋತ್ಥಾನ ಯೋಜನೆಯಡಿ ಹತ್ತು ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುವ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಮೊದಲನೆ ಹಂತವಾಗಿ 2.65 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ. ರಸ್ತೆ ಬದಿಯಲ್ಲಿ ಗೂಡಂಗಡಿಗಳನ್ನಿಟ್ಟುಕೊಂಡು ಜೀವನ ಮಾಡುತ್ತಿದ್ದ ಬಡವರಿಗೆ ಅನುಕೂಲವಾಗಲಿ ಎಂದು ಕಂದಾಯ ಇಲಾಖೆಗೆ ಸೇರಿದ ಜಾಗದಲ್ಲಿ ಮಳಿಗೆಗಳನ್ನು ಕಟ್ಟಿಸಿ ಇನ್ನೇನು ಹಂಚಬೇಕು ಎನ್ನುವಷ್ಟರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜಿನಾಮೆ ನೀಡಿದ್ದರಿಂದ ಅವರ ಬೆಂಬಲಿಗನಾಗಿದ್ದ ನಾನು ಕೂಡ ಅಧಿಕಾರದ ಆಸೆ ತೊರೆದು ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡಬೇಕಾಯಿತು. ನಂತರ ಶಾಸಕನಾಗಿ ಗೆದ್ದು ಬಂದ ಸಚಿವನಾಗಿ ಕ್ಷೇತ್ರಕ್ಕೆ ಮಾಡಿದ್ದೇನು? ಎಸ್ಸಿ.ಎಸ್ಟಿ.ಗಳಿಗೆ ಮಾತ್ರ ಮಳಿಗೆಗಳನ್ನು ನೀಡಿ ನಿಜವಾದ ಬಡವರಿಗೆ ಅನ್ಯಾಯವೆಸಗಿದರು. ಒಳ್ಳೆಯದು ಮಾಡುವವರ ಮೇಲೆ ಯಾವಾಗಲು ನಂಬಿಕೆಯಿಡಿ ಎಂದು ಮತದಾರರಿಗೆ ತಿಳಿಸಿದರು.
ಈದ್ಗಾ ಮೈದಾನದಲ್ಲಿ ಬಳ್ಳಾರಿ ಜಾಲಿಗಿಡಗಳು ಬೆಳೆದು ದೊಡ್ಡ ದೊಡ್ಡ ಬಂಡೆಕಲ್ಲುಗಳಿದ್ದವು. ತಲ ತಲಾಂತರದಿಂದ ಪ್ರಾರ್ಥನೆ ಮಾಡಿಕೊಂಡು ಬರುತ್ತಿದ್ದ ಈದ್ಗಾ ಮೈದಾನ ನಿಮ್ಮ ಹೆಸರಿನಲ್ಲಿತ್ತೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏಕೆ ನಿಮ್ಮ ಹೆಸರಿಗೆ ಮಾಡಿಕೊಡಲಿಲ್ಲ. ನಾನು ಬಿಜೆಪಿ.ಶಾಸಕನಾಗಿದ್ದರೂ ಈದ್ಗಾ ಮೈದಾನದ ಸುತ್ತ ತಂತಿ ಬೇಲಿ ಹಾಕಿಸಿ ಬೇರೆ ಜಾತಿಯವರು ನಮ್ಮದೆಂದು ಹೇಳಿಕೊಂಡು ಬರಬಾರದೆಂದು ಬಂದೋಬಸ್ತ್ ಮಾಡಿಸಿ ಓಡಾಡಲು ರಸ್ತೆ ಮಾಡಿಸಿಕೊಟ್ಟಿದ್ದೇನೆ. ಲಾಲ್ಬಾಗ್ನಿಂದ ಗಿಡಗಳನ್ನು ತರಿಸಿ ಬೋರ್ ಕೊರೆಸಿ ನೀರಿನ ವ್ಯವಸ್ಥೆ ಕಲ್ಪಿಸಿದ್ದೇನೆ. ಅಷ್ಟೆ ಅಲ್ಲದೆ ಕಾವಲು ಕಾಯಲು ಒಬ್ಬ ವ್ಯಕ್ತಿಯನ್ನು ನೇಮಿಸಿದ್ದೇನೆ. ಮುಸಲ್ಮಾನರೆಂದು ಕಡೆಗಣಿಸಿಲ್ಲ ಎಂದು ಹೇಳಿದರು.
ನನ್ನ ಮೇಲೆ ವಿಶ್ವಾಸವಿಟ್ಟು ಒಂದು ಲಕ್ಷ ಎಂಟು ಸಾವಿರ ಮಂದಿ ಚುನಾವಣೆಯಲ್ಲಿ ಮತ ನೀಡಿದ್ದರಿಂದ ನಲವತ್ತು ಸಾವಿರ ಮತಗಳ ಅಂತರದಿಂದ ಗೆದ್ದು ಶಾಸಕನಾಗಿ ನಿಮ್ಮಗಳ ಸೇವೆ ಮಾಡುತ್ತಿದ್ದೇನೆ. ಪಕ್ಷ ಯಾವುದೇ ಇರಲಿ ನಿಮ್ಮಗಳ ಕಷ್ಟ-ಸುಖಕ್ಕೆ ಸ್ಪಂದಿಸುವವರನ್ನು ಗೆಲ್ಲಿಸಿ ಎಂದು ವಿನಂತಿಸಿದರು.
ಹೊಳಲ್ಕೆರೆ ಪುರಸಭೆ ಅಧ್ಯಕ್ಷ ಆರ್.ಅಶೋಕ್, ಉಪಾಧ್ಯಕ್ಷ ಕೆ.ಸಿ.ರಮೇಶ್, ಸದಸ್ಯರುಗಳಾದ ಬಿ.ಎಸ್.ರುದ್ರಪ್ಪ, ಡಿ.ಎಸ್.ವಿಜಯ್, ವಿಜಯಸಿಂಹ ಖಾಟ್ರೋತ್, ಶ್ರೀಮತಿ ನಾಗರತ್ನ ಎಚ್.ಆರ್. ವೇದಮೂರ್ತಿ, ಪಿ.ಹೆಚ್.ಮುರುಗೇಶ್, ಪಿ.ಆರ್.ಮಲ್ಲಿಕಾರ್ಜುನ್, ಶೀಮತಿ ಸುಧಾ, ಸೈಯದ್ ಸಜೀಲ್, ಶ್ರೀಮತಿ ಸವಿತಾ ನರಸಿಂಹ ಖಾಟ್ರೋತ್, ಶ್ರೀಮತಿ ಮಮತ ಜಯಸಿಂಹ ಖಾಟ್ರೋತ್, ಶ್ರೀಮತಿ ಶಬೀನಾ ಅಶ್ರಫ್, ಸೈಯದ್ ಮನ್ಸೂರ್, ಶ್ರೀಮತಿ ಪೂರ್ಣಿಮ ಬಸವರಾಜು, ಶ್ರೀಮತಿ ಬಿ.ವಸಂತ, ಆರ್.ರಾಜಪ್ಪ, ಕೆ.ಆರ್.ರಾಜಪ್ಪ, ಶ್ರೀಮತಿ ಆರ್.ಕವಿತ, ಶ್ರೀಮತಿ ಶೀಲ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.