ಕಬೀರಾನಂದ ಶ್ರೀಗಳು ಚಿಂದಿ ಬಟ್ಟೆಗಳಿಂದ ತಯಾರು ಮಾಡಿದ ಕೌದಿಯನ್ನು ಧರಿಸಿ ಕೈಲೊಂದು ಕಮಂಡಲ ಹಾಗೂ ಭಿಕ್ಷಾ ಪಾತ್ರೆ ಹಿಡಿದು ಮಠಕ್ಕೆ ಬಂದ ಭಕ್ತರಲ್ಲಿ ಭಿಕ್ಷೆಯನ್ನು ಬೇಡಿದರು.
ಚಿತ್ರದುರ್ಗದ ಕಬೀರಾನಂದ ಮಠವು ಆರೂಢ ಸಂಪ್ರದಾಯಗಳನ್ನು ಆಚರಿಸಿಕೊಂಡು ಬರುತ್ತಿರುವ ಮಠ ಹಾಗೂ ಇದೊಂದು ಜಾತ್ಯಾತೀತ ಮಠವಾಗಿದೆ. ಪ್ರತೀ ವರ್ಷವೂ ಕೂಡ ಮಹಾ ಶಿವರಾತ್ರಿಯನ್ನು ಸಡಗರ ಸಂಭ್ರಮ ಹಾಗೂ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಒಂದು ವಾರಗಳ ಕಾಲ ನಡೆಯುವ ಮಹಾ ಶಿವರಾತ್ರಿ ಉತ್ಸವದಲ್ಲಿ ಕೊನೆಯ ದಿನ ಕೌದಿ ಪೂಜೆಯನ್ನು ಆಚರಿಸಲಾಗುತ್ತದೆ. ಈ ಸಮಯದಲ್ಲಿ ಶಿವ ಚರ್ಮಾಂಭಧಾರಿಯಾಗಿ ಭಿಕ್ಷಾಟನೆ ಮಾಡುತ್ತಾನೆಂಬ ಪ್ರತೀತಿಗಳಿವೆ. ಅದರಂತೆ ಕಬೀರಾನಂದ ಮಠದ ಶಿವಲಿಂಗಾನಂದ ಶ್ರೀಗಳು ಚಿಂದಿ ಬಟ್ಟೆಗಳಿಂದ ತಯಾರಿಸಿದ ಕೌದಿಯನ್ನು ಧರಿಸುತ್ತಾರೆ. ಅರಿಷ್ಡವರ್ಗಗಳನ್ನು ತ್ಯಜಿಸಿದ ಸನ್ಯಾಸಿಯಂತೆಯೇ ಅವರು ಭಕ್ತರ ಬಳಿ ಹೋಗಿ ಭಿಕ್ಷಾಟನೆಯನ್ನು ಮಾಡುತ್ತಾರೆ.ಭಕ್ತರು ಕೂಡ ಶ್ರೀಗಳ ಕಾಲಿಗೆರಗಿ ಭಿಕ್ಷಾ ಪಾತ್ರೆಗೆ ಕಾಣಿಕೆಯನ್ನು ಹಾಕುವ ಮೂಲಕ ಭಕ್ತಿಯನ್ನು ಮೆರೆಯುತ್ತಾರೆ. ಇಂತಹ ಕಾರ್ಯಕ್ರಮವು ಪ್ರತೀ ವರ್ಷವೂ ನಡೆಯುತ್ತದೆ. ಒಟ್ಟಾರೆ ಆರೂಢ ಪರಂಪರೆಯನ್ನು ಆಚರಿಸುವ ಶ್ರೀ ಮಠವು ಇಂತಹ ಆಚರಣೆಯಿಂದಲೇ ಪ್ರಸಿದ್ದಿಯಾಗಿದೆ.