ಹತ್ತು ವರ್ಷದಿಂದ ಒಂದು ಬಾರ್ ಶಾಪ್ ಹೊಸದಾಗಿ ತಂದಿಲ್ಲ, ಗ್ರಾಮೀಣ ಭಾಗದ ಯಾವುದೇ ಗೂಡು ಅಂಗಡಿಗಳಲ್ಲಿ ಮಧ್ಯ ಮಾರಾಟ ಮಾಡಿದರೆ ನಾನು ಸಹಿಸಲ್ಲ , ಎಲ್ಲಾ ಹಳ್ಳಿಗಳಿಗೆ ಅಧಿಕಾರಿಗಳು ತೆರಳಿ ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡಬೇಕು. ಕೆಲಸ ಮಾಡದೆ ಜನರನ್ನು ಅಲೆದಾಡಿಸುವ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೇ ಕ್ರಮ ಜರುಗಿಸುತ್ತೇನೆ ಎಂದು ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಇಂದು ತಾಲೂಕಿನ ತುರುವನೂರು ಹೋಬಳಿಯ ತುರುವನೂರು ಗ್ರಾಮದಲ್ಲಿ ತಾಲೂಕು ಅಧಿಕಾರಿಗಳ ಸಮ್ಮುಖದಲ್ಲಿ ಹೋಬಳಿ ಮಟ್ಟದ “ಜನಸ್ಪಂದನ” ಕಾರ್ಯಕ್ರಮದ ಮೂಲಕ ಜನ ಅಹವಾಲು ಸ್ವೀಕರಿಸಿ ಮಾತನಾಡಿದರು.
ನನ್ನ ಕ್ಷೇತ್ರದಲ್ಲಿ ಎಂಎಸ್ಎಲ್ ಮತ್ತು ಹಳೆ ಬಾರ್ ಗಳು ಬಿಟ್ಟು ಕಳೆದ ಹತ್ತು ವರ್ಷದಲ್ಲಿ ಒಂದು ಸಹ ಹೊಸ ಬಾರ್ ಪರವಾನಗಿ ನೀಡಿಲ್ಲ.ಆದರೆ ಹಳ್ಳಿಗಳಲ್ಲಿ ಗೂಡು ಅಂಗಡಿಗಳಲ್ಲಿ ಮಧ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು ಅಂತವರ ವಿರುದ್ದ ಅಬಕಾರಿ ಇಲಾಖೆ ಅಧಿಕಾರಿಗಳು ಕೇಸ್ ದಾಖಲಿಸಿಬೇಕು ಎಂದರು.
ಗ್ರಾಮೀಣ ಭಾಗದ ಓವರ್ ಹೆಡ್ ಟ್ಯಾಂಕ್, ಚಿಕ್ಕ ಟ್ಯಾಂಕ್, ನೆಲ ತೊಟ್ಟಿಗಳು, ಪೈಪ್ ಲೈನ್ ಲಿಕೇಜ್ ಸೇರಿ ನೀರಿನ ಸಂಪರ್ಕದ ಸಮಸ್ಯೆ ಇದ್ದಲ್ಲಿ ಕೂಡಲೇ ಬಗೆಹರಿಸಬೇಕು. ಯಾವುದೇ ಕಾರಣಕ್ಕೂ ಸ್ವಚ್ಚತೆಗೆ ನಿರ್ಲಕ್ಷ್ಯ ವಹಿಸಬಾರದು. ಜನರಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಬೇಕು. ಬಯಲು ಶೌಚದ ಬಗ್ಗೆ ಅರಿವು ಮೂಡಿಸಬೇಕು ಎಂದು ಸೂಚಿಸಿದರು.
ಕಾಮಗಾರಿಗಳನ್ನ ಪೂರ್ಣಗೊಳಿಸಲು ಸೂಚನೆ: ತುರುವನೂರು ಹೋಬಳಿಯಲ್ಲಿ ಅರ್ಧಕ್ಕೆ ಸ್ಥಗಿತವಾಗಿರುವ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಬೇಕು. ಕಾಮಗಾರಿಗೆ ಅಡೆತಡೆ ಇದ್ದರೆ ನೇರವಾಗಿ ನನ್ನ ಗಮನಕ್ಕೆ ತಂದರೆ ಸರಿಪಡಿಸಿ ಕಾಮಗಾರಿ ಪೂರ್ಣಗೊಳಿಸಲು ಸಹಕಾರ ನೀಡುತ್ತೇನೆ. ಅಧಿಕಾರಿಗಳು ಕೆಲಸ ಮಾಡದೇ ನೆಪ ಹೇಳಿದರೆ ನಾನು ಸುಮ್ಮನಿರಲ್ಲ , ಎಲ್ಲಾ ಇಲಾಖೆಯವರು ತಮ್ಮ ಕೆಲಸ ಅಚ್ಚುಕಟ್ಟಾಗಿ ನಿರ್ವಹಿಸಬೇಕು.
ಕುರಿ ಕಳ್ಳರ ಬಗ್ಗೆ ನಿಗಾ ವಹಿಸಿ: ತುರುವನೂರು ವ್ಯಾಪ್ತಿಯಲ್ಲಿ ಕುರಿ ಕಳ್ಳತನ ಹೆಚ್ಚುತ್ತಿದ್ದು ಕಳ್ಳರ ಹಿಡಿಯಲು ಪೋಲಿಸ್ ಇಲಾಖೆ ಗಮನ ಹರಿಸಬೇಕು. ಒಂದು ಕುರಿ ಕಳ್ಳತನ ಕೇಸ್ ಏನು ಅಂತ ಅಸಡ್ಡೆ ತೋರದೆ ಕೇಸ್ ದಾಖಲಿಸಿಕೊಂಡು ಕಳ್ಳರಿಗೆ ಬಲೆ ಬೀಸಿ ಹಿಡಿಯಬೇಕು ಮತ್ತು ಇಂತಹ ಪ್ರಕರಣಗಳು ಮರುಕಳಿಸಬಾರದು ಎಂದರು.
ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ: ಸಾರ್ವಜನಿಕರಿಗೆ ಸುಖ ಸುಮ್ಮನೆ ಕೆಲಸವಿಲ್ಲದಿದ್ದರು ಅಲೆದಾಡಿಸಬಾರದು. ಅವರ ಕೆಲಸವನ್ನು ತುರ್ತಾಗಿ ಮಾಡಿಕೊಡಬೇಕು. ಅವರು ಕೂಲಿ ಕೆಲಸ ಬಿಟ್ಟು ಇಲಾಖೆಗಳಿಗೆ ಬಂದಿರುತ್ತಾರೆ ಮತ್ತು ಗ್ರಾಮ ಪಂಚಾಯತಿಯವರು ಸಹ ಯಾವುದೇ ಕಾರಣಕ್ಕೂ ಜನರಿಗೆ ಸಮಸ್ಯೆ ಆಗದಂತೆ ಕೆಲಸ ಮಾಡಬೇಕು. ಕೆಲಸ ಮಾಡದಿದ್ದರೆ ಜಾಗ ಖಾಲಿ ಮಾಡಿ ಎಂದು ಅಧಿಕಾರಿಗಳ ವಿರುದ್ಧ ಗುಡುಗಿದರು.
ಬಗರ್ ಹುಕುಂ ಯೋಜನೆಯಡಿ ಜಮೀನು ನೀಡಲು ಎಲ್ಲಾ ಸಿದ್ದತೆ ನಡೆಸಲಾಗುತ್ತದೆ.ಸರ್ಕಾರದ ಹಂತದಲ್ಲಿ ತಿರ್ಮಾನ ಮಾಡಿ ಜಮೀನಿನ ಹಕ್ಕು ಪತ್ರವನ್ನು ಮುಂದಿನ ದಿನಗಳಲ್ಲಿ ನೀಡಲಾಗುತ್ತದೆ. ಯಾರಿಗೂ ಸಹ ಆತಂಕ ಬೇಡ ಎಂದರು.
ಸ್ಮಶಾನ ಸಮಸ್ಯೆ, ರಸ್ತೆ ಸಮಸ್ಯೆ, ನಿವೇಶನ ಸಮಸ್ಯೆಗಳು, ಹೊಲದ ರಸ್ತೆಗಳು, ಹಿರಿಯ ನಾಗರಿಕರ ಪಿಂಚಣಿ, ಅಂಗವಿಕಲರ ಪಿಂಚಣಿ , 94 ಸಿ ಹಕ್ಕು ಪತ್ರ ಸೇರಿ ಯಾವುದೇ ಸಮಸ್ಯೆಗಳು ಇದ್ದರು ಕೂಡಲೇ ಗಮನ ಹರಿಸಿ ಇತ್ಯರ್ಥಗೊಳಿಸಬೇಕು. ಎಲ್ಲವನ್ನು ಇಓ ಅಧಿಕಾರಿಗಳ ನಿರಂತರ ಸಂಪರ್ಕದ ಮೂಲಕ ಬಗೆಹರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ನಾಗವೇಣಿ, ತಾಲೂಕು ಪಂಚಾಯತಿ ಇಓ ಹನುಮಂತಪ್ಪ,ಡಿವೈಎಸ್ಪಿ ಅನಿಲ್ ಕುಮಾರ್, ತಿಪ್ಪೇಸ್ವಾಮಿ, ಕೃಷಿ ಇಲಾಖೆ ಉಪ ನಿರ್ದೇಶಕ ಪ್ರಭಾಕರ್, ಗ್ರಾ.ಪಂ. ಅಧ್ಯಕ್ಷೆ ದೀಪಾ ಮಹೇಶ್, ಉಪಾಧ್ಯಕ್ಷ ಆರ್.ತಿಪ್ಪೇಸ್ವಾಮಿ, ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತಿ ಸದಸ್ಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
Post Views:
428