ಚಿತ್ರದುರ್ಗ:-ಗ್ರಾಮ ಪಂಚಾಯಿತಿಗಳಲ್ಲಿ ಯಾವ ದಿನದಂದು ಪಿಡಿಓ, ತಾಂತ್ರಿಕ ಇಂಜಿನಿಯರ್ಗಳು ಸಿಗುತ್ತಾರೆ ಎಂಬ ಮಾಹಿತಿಯನ್ನು ನಾಮ ಫಲಕದಲ್ಲಿ ಹಾಕುವಂತೆ
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಸುರೇಶ್ ಬಾಬು ಗ್ರಾ.ಪಂ.ಯ ಪಿಡಿಓ ಹಾಗೂ ವ್ಯವಸ್ಥಾಪಕರುಗಳಿಗೆ ಸೂಚನೆ ನೀಡಿದ್ದಾರೆ.
ಚಿತ್ರದುರ್ಗ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಪ್ರಗತಿ ಪರೀಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಚಿತ್ರದುರ್ಗ ತಾಲ್ಲೂಕಿನಲ್ಲಿ ಇರುವ ಪಂಚಾಯಿತಿಗಳಲ್ಲಿ 2 ಅಥವಾ 3 ಪಂಚಾಯಿತಿಗಳಿಗೆ ಒಬ್ಬರಂತೆ ಇಂಜಿನಿಯರ್ಗಳು ಇರುತ್ತಾರೆ ಅದರೆ ಅವರು ಏನು ಕೆಲಸ ಮಾಡುತ್ತಾರೆ ಎಂಬುದು ಮಾತ್ರ ಯಾರಿಗೂ ಗೊತ್ತಾಗುವುದಿಲ್ಲ ಇದರಿಂದ ಜನತೆಯ ಕೋಪಕ್ಕೆ ಬಲಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾಲ್ಲೂಕಿನ ಹಲವಾರು ಪಂಚಾಯಿತಿಗಳಲ್ಲಿ ಎನ್.ಆರ್.ಇ.ಜಿ. ಕೆಲಸ ಸಮರ್ಪಕವಾಗಿ ನಡೆದಿಲ್ಲ, ಕೆಲವು ಪಂಚಾಯಿತಿಗಳು ಉತ್ತಮವಾದ ಪ್ರಗತಿಯನ್ನು ತೋರಿಸಿದರೆ ಮತ್ತೇ ಕೆಲವು ಪಂಚಾಯಿತಿಗಳು ಸಾಧನೆ ಮಾಡುವಲ್ಲಿ ಹಿನ್ನಡೆಯಾಗಿದೆ, ಸಿಬ್ಬಂದಿಗಳು ಅಸಕ್ತಿಯಿಂದ ಕೆಲಸ ಮಾಡುತ್ತಿಲ್ಲ. ಮಾಡಿದ ಕೆಲಸಕ್ಕೆ ಸರಿಯಾದ ರೀತಿಯಲ್ಲಿ ಹಣ ಪಾವತಿಯಾಗಬೇಕು ಇದಕ್ಕೆ ಕಾನೂನು ಪ್ರಕಾರವಾಗಿ ಎಂಬಿಗಳನ್ನು ಬರೆಯಬೇಕು ಎಂದು ತಾಕೀತು ಮಾಡಿದರು.
ಜಿ.ಪಂ,ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹರಾಜು ಮಾತನಾಡಿ, ಪಂಚಾಯಿತಿ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಮನಸಿಟ್ಟು ಕೆಲಸ ಮಾಡಿದರೆ ಉತ್ತಮವಾದ ಪಂಚಾಯಿತಿಯನ್ನಾಗಿ ಮಾಡಬಹುದು ಅದರೆ ಯಾರೂ ಸಹಾ ಮಾಡುತ್ತಿಲ್ಲ ಎಲ್ಲೂ ಕೆಲವರು ಮಾತ್ರ ಅಸಕ್ತಿಯಿಂದ ಕೆಲಸ ಮಾಡುತ್ತಾರೆ ಆಂತಹ ಪಂಚಾಯಿತಿಗಳು ಮಾತ್ರ ಪ್ರಗತಿ ಹೊಂದಲು ಸಾಧ್ಯವಿದೆ ಎಂದ ಅವರು, ಪಂಚಾಯಿತಿಯಲ್ಲಿ ಸರಿಯಾದ ರೀತಿಯಲ್ಲಿ ಕೆಲಸ ಮಾಡದ ಸಿಬ್ಬಂದಿಯ ಮೇಲೆ ಕ್ರಮವನ್ನು ತೆಗೆದುಕೊಳ್ಳುವ ಕಾರ್ಯವನ್ನು ಮಾಡಿದಾಗ ಮಾತ್ರ ಉತ್ತಮವಾದ ಕೆಲಸವಾಗಲು ಸಾಧ್ಯವ ಇದೆ ಇಲ್ಲವಾದಲ್ಲಿ ಬರೀ ಸಭೆ ಮಾಡುವುದಿರಿಂದ ಪ್ರಗತಿ ಹೊಂದುವುದಿಲ್ಲ ಎಂದು ಖಾರವಾಗಿ ಹೇಳಿದರು.
ಜಿ.ಪಂ. ಮಾಜಿ ಅಧ್ಯಕ್ಷೆ ಹಾಲಿ ಸದಸ್ಯರಾದ ಶ್ರೀಮತಿ ಸೌಭಾಗ್ಯ ಬಸವರಾಜನ್ ಮಾತನಾಡಿ ಚಿತ್ರದುರ್ಗದ ಎಲ್ಲಾ ಪಂಚಾಯಿತಿಗಳು ಸರಿಯಾದ್ ಸಿಬ್ಬಂದಿ ಇದ್ದರು ಸಹಾ ಅಭೀವೃದ್ದಿ ಸರಿಯಾದ್ ಪ್ರಮಾಣದಲ್ಲಿ ಆಗಿಲ್ಲ ಕೆಲವೊಂದು ಪಂಚಾಯಿತಿಗಳು ಉನ್ನತ ಮಟ್ಟದಲ್ಲಿ ಇದ್ದರೆ ಮತ್ತೇ ಕೆಲವು ಕಡಿಮೆ ಪ್ರಮಾಣದಲ್ಲಿ ಪ್ರಗತಿಯನ್ನು ಸಾಧಿಸಿದೆ ಇದರ ಬಗ್ಗೆ ಸಂಬಂಧಪಟ್ಟವರು ಪರೀಶೀಲನೆಯನ್ನು ಮಾಡಬೇಕಿದೆ, ಕೆಲವೊಂದು ಪಂಚಾಯತಿಗಳಲ್ಲಿ ಕಂಪ್ಯೂಟರ್ ಆಪರೇಟರ್ಗಳ ಸಮಸ್ಯೆ ಇದೆ ಅದನ್ನು ಸರಿಪಡಿಸಬೇಕಿದೆ, ಮತ್ತೇ ಕೆಲವು ಪಿಡಿಓಗಳಿಗೆ ಎರಡೆರಡು ಪಂಚಾಯಿತಿಗಳ ಉಸ್ತ್ತುವಾರಿಯನ್ನು ನೀಡಲಾಗಿದೆ ಇದನ್ನು ಸರಿಪಡಿಸಿ ಒಬ್ಬರಿಗೆ ಒಂದೇ ಪಂಚಾಯಿತಿಯನ್ನು ನೀಡುವಂತೆ ಇಓಗೆ ಸೂಚನೆ ನೀಡಿದರು.ಸಭೆಯಲ್ಲಿ ಚಿತ್ರದುರ್ಗ ತಾಲ್ಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್ ನಾಯ್ಕ್, ಇಓ ಕೃಷ್ಣಾನಾಯ್ಕ್ ಭಾಗವಹಿಸಿದ್ದರು.
ಸಂಯುಕ್ತವಾಣಿ