ಪತಿಯ ಹಣದಾಸೆಗೆ ಬೇಸತ್ತ ಗೃಹಿಣಿಯೊಬ್ಬಳು ಮನೆಯಲ್ಲಿ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ನಡೆದಿದೆ.
ತುಮಕೂರು ಮೂಲದ ಗೀತಶ್ರೀ ಮೃತ ರ್ದುದೈವಿ ಎಂದು ಗುರುತಿಸಲಾಗಿದೆ. ಗೀತಶ್ರೀ ಹೊಸದುರ್ಗದ ಗೊರವಿನಕಲ್ಲು ಗ್ರಾಮದ ಪ್ರಭುಕುಮಾರ್ ಜೊತೆ ಐದಾರು ವರ್ಷದ ಹಿಂದೆ ಮದುವೆಯಾಗಿದ್ದರು.
ಪತಿ ಪ್ರಭುಕುಮಾರ್ ಖಾಸಗಿ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದ, ಗೀತಶ್ರೀ ಕೂಡ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು. ಇವರಿಗೆ ಮುದ್ದಾದ ಹೆಣ್ಣು ಮಗು ಕೂಡ ಇತ್ತು ಎಂದು ಹೇಳಲಾಗಿದೆ. ಆದರೆ ಇತ್ತೀಚಿಗೆ ವರದಕ್ಷಿಣೆ ಹಣ ತರುವಂತೆ ಪತಿ ಪ್ರಭುಕುಮಾರ್ ಗೀತಶ್ರೀಗೆ ಕಿರುಕುಳ ನೀಡಲು ಆರಂಭಿಸಿದ್ದ, ಇದರಿಂದ ಬೇಸತ್ತಿದ್ದ, ಗೀತಶ್ರೀ ಕಳೆದ ಕೆಲವು ದಿನಗಳ ಹಿಂದೆ ತವರು ಮನೆ ಸೇರಿದ್ದಳು, ಆದರೆ ನಾಲ್ಕು ದಿನಗಳ ಹಿಂದೆ ಮತ್ತೆ ಗೀತಾ ಶ್ರೀ ಗಂಡನ ಮನೆಗೆ ಬಂದಿದ್ದಳು.ಆದರೆ ಇಂದು ಗೀತಶ್ರೀ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇದರಿಂದ ಪತಿಯೇ ಹಣಕ್ಕಾಗಿ ಪತ್ನಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ನಾಟಕ ಆಡುತ್ತಿದ್ದಾನೆಂದು ಮೃತ ಗೀತಶ್ರೀ ಸಹೋದರ ನಿರಂಜನ ಗಂಭೀರವಾದ ಆರೋಪ ಮಾಡುತ್ತಿದ್ದಾನೆ. ಘಟನಾ ನಂತರ ಪ್ರಭುಕುಮಾರ್ ನಾಪತ್ತೆಯಾಗಿದ್ದಾನೆ. ಸದ್ಯ ಘಟನೆ ಕುರಿತಂತೆ ಹೊಸದುರ್ಗ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ಪ್ರಭು ಕುಮಾರ್ ಪತ್ತೆಗಾಗಿ ಜಾಲ ಬೀಸಿದ್ದಾರೆ.