ಪ್ರವಾದಿ ಮೊಹಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ಬಿಜೆಪಿ ಶಾಸಕನ ವಿರುಧ್ದ ಆಕ್ರೋಶ

ರಾಜ್ಯ

 

BIG BREAKING

ಪ್ರವಾದಿ ಮಹಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿ ಹೇಳಿಕೆ: ಬಿಜೆಪಿ ಶಾಸಕ ರಾಜಾ ಸಿಂಗ್ ವಿರುದ್ಧ ಮುಗಿಲು ಮುಟ್ಟಿದ ಆಕ್ರೋಶ

ಹೈದರಾಬಾದ್​​ನಲ್ಲಿ ಅಮಾನತುಗೊಂಡಿರುವ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್​​ ಅವರಿಗೆ ಜಾಮೀನು ಸಿಗುತ್ತಿದ್ದಂತೆ ಮುಸ್ಲಿಂ ಸಮುದಾಯದ ಆಕ್ರೋಶ ಮುಗಿಲುಮುಟ್ಟಿದೆ. ರಾಜಾ ಸಿಂಗ್​​ಗೆ ಜಾಮೀನು ಸಿಕ್ಕಿರುವುದನ್ನು ವಿರೋಧಿಸಿ ರಾತ್ರಿಯಿಡೀ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆಯ ಸಂದರ್ಭದಲ್ಲಿ ತಲೆಯನ್ನು ದೇಹದಿಂದ ಬೇರ್ಪಡಿಸಿ ಎಂಬ ಘೋಷಣೆಗಳು ಮೊಳಗುತ್ತಲೇ ಇದ್ದವು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಸಾಕಷ್ಟು ಯತ್ನಿಸಿದರು. ಈ ಸಂದರ್ಭದಲ್ಲಿ ಸಬ್​ ಇನ್​ಸ್ಪೆಕ್ಟರ್​ ಸೇರಿದಂತೆ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ.

 

 

 

ಸಿಆರ್​​ಪಿಸಿ ಸೆಕ್ಷನ್​ 41(ಎ) ಅಡಿಯಲ್ಲಿ ಯಾವುದೇ ನೋಟಿಸ್​​​ನ್ನು ಶಾಸಕ ರಾಜಾ ಸಿಂಗ್​​ ಅವರಿಗೆ ನೀಡಲಾಗಿಲ್ಲ ಎಂದು ರಾಜಾ ಸಿಂಗ್​ ಪರ ವಕೀಲರು ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಕೋರ್ಟ್​ ಎದುರು ವಾದಿಸಿದರು. ವಕೀಲರ ಈ ವಾದವನ್ನು ಪರಿಗಣನೆಗೆ ತೆಗೆದುಕೊಂಡ ನ್ಯಾಯಾಲಯ ಜಾಮೀನನ್ನು ನೀಡಿತ್ತು.

ಜಾಮೀನು ದೊರಕಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ತೆಲಂಗಾಣದಾದ್ಯಂತ ಪ್ರತಿಭಟನೆಗಳು ಮಿತಿಮೀರಿವೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

ಅಂಬರ್​ಪೇಟ್​​, ತಲಬಕಟ್ಟಾ, ಮೊಗಲ್​​ಪುರ, ಖಿಲ್ವತ್​, ಬಹದ್ದೂರ್​ಪುರ ಹಾಗೂ ಚಂಚಲಗುಡಾದಲ್ಲಿ ರಾಜಾ ಸಿಂಗ್​​​ ವಿರುದ್ಧ ಪ್ರತಿಭಟನೆಗಳು ಹೆಚ್ಚಾಗಿ ನಡೆಯುತ್ತಿದೆ. ಪ್ರತಿಭಟನಾಕಾರರು ಕೋರ್ಟ್​ನ ಆದೇಶವನ್ನು ವಿರೋಧಿಸಿ ಬರ್ಕಾಸ್​ನಿಂದ ಚಂದ್ರಾಯನಗುಟ್ಟದವರೆಗೆ ಮೆರವಣಿಗೆ ನಡೆಸಿದ್ದಾರೆ.

ಹೈದರಾಬಾದ್​ನ ಶಾಲಿಬಂಡಾದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ ಏರ್ಪಟ್ಟಿದೆ. ಪ್ರತಿಭಟನಾಕಾರರು ಪೊಲೀಸ್​ ವ್ಯಾನ್​ನ್ನು ಧ್ವಂಸಗೊಳಿಸಿದ್ದಾರೆ. ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದ್ದು ಮಾತ್ರವಲ್ಲದೇ ರಾಜಾ ಸಿಂಗ್​ ಪೋಸ್ಟರ್​​ಗೆ ಚಪ್ಪಲಿಯಿಂದ ಹೊಡೆದು ಅವರ ಪ್ರತಿಕೃತಿ ದಹಿಸಿದ್ದಾರೆ.

ನೂಪುರ್ ಶರ್ಮಾ ಬೆನ್ನಲ್ಲೇ ತೆಲಂಗಾಣದ ಅಮಾನತುಗೊಂಡಿರುವ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್​ ಪ್ರವಾದಿ ಮೊಹಮ್ಮದ್ ಪೈಗಂಬರ್​ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೆ ಈಡಾಗಿದ್ದಾರೆ. ಸಮುದಾಯದ ಭಾವನೆಗೆ ಧಕ್ಕೆಯುಂಟು ಮಾಡಿದ ಆರೋಪದ ಅಡಿಯಲ್ಲಿ ರಾಜಾ ಸಿಂಗ್​​ರನ್ನು ಬಂಧಿಸಲಾಗಿತ್ತು.

 

Leave a Reply

Your email address will not be published. Required fields are marked *