ಬಿಜೆಪಿಯ ಸುಳ್ಳು ಭರವಸೆ ನಂಬಿ ಈ ಬಾರಿ ಚುನಾವಣೆಯಲ್ಲಿ ಮೋಸ ಹೋಗಬೇಡಿ. ದೇಶದ ಸರ್ವಾಂಗೀಣ ಅಭಿವೃದ್ಧಿಗೆ, ಎಲ್ಲಾ ಧರ್ಮ, ಜಾತಿಯ ಹಿತ ಕಾಪಾಡಲು ಹಾಗೂ ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಅಭ್ಯರ್ಥಿಯಾದ ನನಗೆ ಬೆಂಬಲ ನೀಡಿ ಗೆಲ್ಲಿಸಿ. ನಿಮ್ಮ ಮತಕ್ಕೆ ಅಪಚಾರ ಆಗದ ರೀತಿಯಲ್ಲಿ ಪ್ರಾಮಾಣಿಕವಾಗಿ ಜನರ ಸೇವೆ ಮಾಡುವ ಮೂಲಕ ನೀವು ನನಗೆ ಕೊಟ್ಟ ಮತಕ್ಕೆ ಗೌರವ ತರುತ್ತೇನೆ ಎಂದು ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರು ಮನವಿ ಮಾಡಿದರು.
ಹೊಸದುರ್ಗದ ಶ್ರೀದೇವಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದರು. 2009ರ ಲೋಕಸಭೆ ಚುನಾವಣೆಗೆ ಚಿತ್ರದುರ್ಗ ಕ್ಷೇತ್ರಕ್ಕೆ ನಾನು ಏಕಾಏಕಿ ಅಭ್ಯರ್ಥಿಯಾಗಿ ಬಂದಾಗಲೆ 1.02 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಿದ್ದೀರಿ. ಅಂದಿನಿಂದ ಇಂದಿನ ವರೆಗೂ 10 ವರ್ಷಗಳಿಂದ ಕ್ಷೇತ್ರದ ಜನರ ಜೊತೆಗೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದೇನೆ. ಇಲ್ಲಿನ ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಬಿಜೆಪಿ ಆಡಳಿತದಲ್ಲಿ ದೇಶ ದುರ್ಬಲ ಸ್ಥಿತಿಯಲ್ಲಿದೆ. ಸಂವಿಧಾನ ಬಿಜೆಪಿ ಪಕ್ಷಕ್ಕೆ ಸಿಲುಕಿ ಒದ್ದಾಡುತ್ತಿದೆ. ಬಿಜೆಪಿಯು ಜಾತಿ, ಜಾತಿ ಮಧ್ಯೆ ವಿಷಬೀಜ ಬಿತ್ತಿ ರಾಜಕೀಯ ಮಾಡುತ್ತಿದೆ. 10 ವರ್ಷದಲ್ಲಿ ದೇಶದ ಅಭಿವೃದ್ದಿ ಶೂನ್ಯವಾಗಿದೆ. ಸುಳ್ಳನ್ನೇ ಸತ್ಯವಾಗಿ ಪ್ರಚಾರ ಮಾಡಿ 10 ವರ್ಷ ದೇಶ ಆಳಿದರು. ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಬಿಜೆಪಿ ಜನರಿಗೆ ಮೋಸ ಮಾಡುತ್ತಿದೆ ಎಂದು ವಾಗ್ದಾಳಿ ಮಾಡಿದರು. ದೇಶದ ಪ್ರಸ್ತುತ ಸ್ಥಿತಿ ಅರಿತವರು ಬಿಜೆಪಿಗೆ ವೋಟ್ ಹಾಕಲ್ಲ. ನಾನು ಎಂಪಿ ಆಗಿದ್ದಾಗ ಪ್ರಾಮಾಣಿಕವಾಗಿ ಜನಸೇವೆ ಮಾಡಿದ್ದೇನೆ. ಈಗಿನ ಎಂಪಿ ಏನು ಕೆಲಸ ಮಾಡಿದ್ದಾರೆ ಎಂಬುದನ್ನು ಹೇಳಲಿ. 363 ಬಾರಿ ಸಂಸತ್ ನಲ್ಲಿ ಮಾತನಾಡಿದ್ದೇನೆ. ಒಂದು ಕಪ್ಪುಚುಕ್ಕೆ ಬಾರದಂತೆ ಕೆಲಸ ಮಾಡಿದ್ದೇನೆ. ಚುನಾವಣೆ ಸಂದರ್ಭದಲ್ಲಿ ಕೆಟ್ಟ ವಿಚಾರ ಪ್ರಚಾರ ಮಾಡಿ, ವಾಮ ಮಾರ್ಗದಲ್ಲಿ ಮತದಾರರ ಮನಗೆದ್ದು ಮತ್ತೆ ಅಧಿಕಾರಕ್ಕೆ ಬರಲು ಹುನ್ನಾರ ನಡೆಸುತ್ತಾರೆ. ಈ ಬಗ್ಗೆ ಎಚ್ಚರ ವಹಿಸಬೇಕು. ಇಂತಹ ವಿಚಾರಕ್ಕೆ ಯಾರು ಕಿವಿಗೊಡಬಾರದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಪಕ್ಷದ ಉರಿಯಾಳುಗಳಾಗಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರ ಗೆಲುವಿಗೆ ಎಲ್ಲರೂ ಕೆಲಸ ಮಾಡಬೇಕು. ಗ್ಯಾರಂಟಿ ಅನುಷ್ಠಾನದ ಮೂಲಕ ನುಡಿದಂತೆ ನಡೆದು ಮತ ಕೇಳಲಿಕ್ಕೆ ಹೋಗುತ್ತಿದ್ದೇವೆ. ಎಲ್ಲಾ ಜಾತಿ ಹಾಗೂ ಪಕ್ಷದವರಿಗೆ ಸೌಲಭ್ಯ ನೀಡಲಾಗುತ್ತಿದೆ. ಅನುಷ್ಟಾನ ಸಮಿತಿಯವರು ಪ್ರತಿ ಮನೆಗೂ ಈ ಮಾಹಿತಿ ತಿಳಿಸಬೇಕು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಡಬಲ್ ಗ್ಯಾರಂಟಿ ಅನುಷ್ಠಾನಕ್ಕೆ ಬರಲಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ತೆಗೆದುಕೊಂಡ ಜವಾಬ್ದಾರಿಯನ್ನು ಈ ಚುನಾವಣೆಯಲ್ಲಿಯೂ ಎಲ್ಲರೂ ತೆಗೆದುಕೊಳ್ಳಬೇಕು. ಪ್ರಚಾರದ ಕೊರತೆಯಿಂದ ಸೋಲಿಗೆ ಕಾರಣ ಆಗಬಾರದು ಎಂದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ರಾಜ್ಯ ಕಾರ್ಮಿಕ ವಿಭಾಗದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತಾಜ್ ಫೀರ್, ಕೆಪಿಸಿಸಿ ಸದಸ್ಯ ಎಂ.ಪಿ.ಶಂಕರ್, ಅಲ್ತಾಫ್ ಪಾಷಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ್, ಹೊಸದುರ್ಗ ನಗರ ಘಟಕದ ಅಧ್ಯಕ್ಷ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಿಕಾ ಸತೀಶ್, ಮುಖಂಡರಾದ ಗೋ.ತಿಪ್ಪೇಶ್, ಕಾರೇಹಳ್ಳಿ ಬಸವರಾಜು, ಡಾ.ಕೆ.ಅನಂತ್, ಎಚ್.ಬಿ.ಮಂಜುನಾಥ್, ಡಾ.ಎಂ.ಎಚ್.ಕೃಷ್ಣಮೂರ್ತಿ, ಮಹಮದ್ ಇಸ್ಮಾಯಿಲ್, ಲೋಕೇಶ್ವರಪ್ಪ, ಚಂದ್ರಶೇಖರ್, ಕೆ.ಟಿ.ಮಂಜುನಾಥ್, ರಾಜೇಂದ್ರಪ್ರಸಾದ್ ನಾಯ್ಕ್, ಯಶವಂತಗೌಡ, ರಾಜಣ್ಣ ಸೇರಿ ಇನ್ನಿತರ ಕಾಂಗ್ರೆಸ್ ಮುಖಂಡರು ಹಾಜರಿದ್ದರು.