ಬೆಂಗಳೂರು: ಕೋವಿಡ್ ಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನೇ ದಿನೇ ಏರುತ್ತಿದೆ. ಅಂತ್ಯ ಸಂಸ್ಕಾರ ನಡೆಸಲು ಚಿತಾಗಾರದಲ್ಲಿ ದಿನಗಟ್ಟಲೆ ಕಾಯುವಂತಹ ಸ್ಥಿತಿ ನಿರ್ಮಾಣವಾಗಿದ್ದು ಇದನ್ನೆ ಚಿತಾಗಾರದ ಸಿಬ್ಬಂದಿ ಬಂಡವಾಳ ಮಾಡಿಕೊಳ್ಳುತ್ತಿದ್ದು, ಸಚಿವ ಸುಧಾಕರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಕೋವಿಡ್ ಎರಡನೇ ಅಲೆ ಬೆಂಗಳೂರಿನಲ್ಲಿ ಆರ್ಭಟಿಸುತ್ತಿದ್ದು, ಸೋಂಕಿತರ ಸಂಖ್ಯೆ ದಿನಕ್ಕೆ ಸಾವಿರಾರು ಲೆಕ್ಕದಲ್ಲಿ ಬರುತ್ತಿದೆ. ಇದರ ಜೊತೆಗೆ ಸಾವಿನ ಸಂಖ್ಯೆಯೂ ಅಷ್ಟೇ ವೇಗವಾಗಿ ಏರಿಕೆಯಾಗುತ್ತಿದೆ. ಸೋಂಕಿತರ ಚಿಕಿತ್ಸೆಗೆ ಬೆಡ್ ಗಳು ಸಿಗದೆ ಇರುವುದು ಒಂದು ಕಡೆಯಾದರೆ ಚಿತಾಗಾರಗಳಲ್ಲಿ ಅಂತ್ಯ ಸಂಸ್ಕಾರ ನಡೆಸಲು ಅಂಬ್ಯುಲೆನ್ಸ್ ಗಳು ಸಾಲುಗಟ್ಟಿ ನಿಲ್ಲುತ್ತಿವೆ. ಬೇಗನೇ ಅಂತ್ಯ ಸಂಸ್ಕಾರ ಮುಗಿಸಬೇಕು ಎಂದರೆ ಚಿತಾಗಾರದ ಸಿಬ್ಬಂದಿಗಳು ಹಣದ ಬೇಡಿಕೆ ಇಡುತ್ತಿರುವ ಆರೋಪಗಳು ಕೇಳಿ ಬರುತ್ತಿವೆ. ಒಂದು ಶವದ ಸಂಸ್ಕಾರಕ್ಕೆ ಐದರಿಂದ ಎಂಟು ಸಾವಿರ ಹಣದ ಬೇಡಿಕೆ ಇಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕೊನೆಗೆ ಇದರ ಬಗ್ಗೆ ಗಮನ ಹರಿಸಿರುವ ಡಾ. ಕೆ. ಸುಧಾಕರ್ ಇದನ್ನೆ ಬಂಡವಾಳ ಮಾಡಿಕೊಂಡಿರುವ ಚಿತಾಗಾರದ ಸಿಬ್ಬಂದಿಗೆ ಖಡಕ್ ವಾರ್ನಿಂಗ್ ನೀಡಿದ್ದು, ಕ್ರಮಿನಲ್ ಮೊಕದ್ದಮೆ ಹೂಡಲಾಗುತ್ತದೆ ಎಂದು ಹೇಳಿದ್ದಾರೆ.
ಸಂಯುಕ್ತವಾಣಿ