ಚಿತ್ರದುರ್ಗ: ಕಾಂಗ್ರೆಸ್ ಮತ್ತು ಜನತಾದಳ ಪಕ್ಷಗಳು ಚುನಾವಣೆಯ ಸಮಯದಲ್ಲಿ ಕಾರ್ಯಕರ್ತರಿಗೆ ಊಟಕ್ಕೆ ಹಾಕಿ ಚುನಾವಣೆಗಳನ್ನು ಗೆದ್ದು ಅಧಿಕಾರ ದುರುಪಯೋಗ ಮಾಡಿಕೊಳ್ಳುವಂತಹ ಪಕ್ಷಗಳು ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಕಿಡಿ ಕಾರಿದರು.
ಅವರು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪಟ್ಟಣದಲ್ಲಿ ಇಂದು ನಡೆದ ಗ್ರಾಮ ಸ್ವರಾಜ್ ಸಮಾವೇಶದಲ್ಲಿ ಮಾತನಾಡುತ್ತಾ, ನಾನು ಸಮಾಜ ಸೇವೆಯಿಂದಲೇ ರಾಜಕೀಯಕ್ಕೆ ಬಂದವನು. ನಾನು ಬಿಜೆಪಿಯವನೇ ಬೇರೆ ಕಾರಣಗಳಿಗಾಗಿ ಬಿಜೆಪಿ ತೊರೆದು ಹೋಗಿದ್ದೆ, ರಾಜಕಾರಣ ಮಾಡಬೇಕು ಎಂದು ಬಂದವನಲ್ಲ. ಕಾಂಗ್ರೆಸ್ ಹಾಗೂ ಜನತಾದಳ ಪಕ್ಷಗಳಿಗೆ ಸಿದ್ದಾಂತಗಳೇ ಇಲ್ಲ. ಸಿದ್ದಾಂತಗಳೆಲ್ಲವನ್ನೂ ಗಾಳಿಗೆ ತೂರಿ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಎರಡೂ ಪಕ್ಷಗಳು ಮಾಡುತ್ತಿವೆ. ನಾವು ನಮ್ಮ ಬಗ್ಗೆ ಚಿಂತನೆ ಮಾಡಬೇಕಾಗಿದೆ. ದೇಶಕ್ಕೆ ಬಹಳಷ್ಟು ಜನರು ಬಂದಿದ್ದಾರೆ. ಆದರೆ ಇಂತಹ ಪ್ರಧಾನಿಯನ್ನು ನೋಡಿರಲಿಲ್ಲ. ಕಾರ್ಯಕರ್ತರಲ್ಲಿ ನನ್ನ ಮನವಿ ಎಂದರೆ ಪ್ರತಿಷ್ಠೆಗೆ ಯಾರೂ ಬೀಳಬೇಡಿ ಯಾರಿಗೆ ಅವಕಾಶವಿದೆಯೋ ಪಕ್ಷಕ್ಕಾಗಿ ತ್ಯಾಗ ಮಾಡಿದವರು ದುಡಿದವರು ಅವರಿಗೆ ಮನ್ನಣೆ ಕೊಡೋಣ ಅದು ಬಿಟ್ಟು ಪ್ರತಿಷ್ಠೆಗೆ ಬಿದ್ದು ನನಗೆ ಯಾರೂ ಬೆಂಬಲ ಕೊಡುತ್ತಿಲ್ಲ. ನಾನು ಬೇರೆ ಪಕ್ಷದಿಂದ ನಿಲ್ಲುತ್ತೇನೆ ಪಕ್ಷೇತರವಾಗಿ ನಿಲ್ಲುತ್ತೇನೆ ಎಂದು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೋದರೆ ಪ್ರಧಾನಿ ಮೋದಿ ಅವರ ಕನಸು ನನಸಾಗುವುದಿಲ್ಲ. ಆದ್ದರಿಂದ ಮೊದಲು ಪಕ್ಷ ಕಟ್ಟೋಣ ಬೆಳೆಸೋಣ ನಂತರ ಅಧಿಕಾರ ಹಿಡಿಯೋಣ ಎಂದು ಹೇಳಿದರು.
ಸಂಯುಕ್ತವಾಣಿ