ಹೃದಯ ಆರೋಗ್ಯವಾಗಿರಲು ದಿನಕ್ಕೊಂದು ಗಂಟೆ ನಡಿಗೆ ಅವಶ್ಯಕ : ಡಾ.ಬಿ.ವಿ.ಗಿರೀಶ್
ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ನಿಯಮಿತವಾಗಿ ದಿನಕ್ಕೊಂದು ಗಂಟೆ ನಡಿಗೆ, ವ್ಯಾಯಾಮ ಮತ್ತು ಆಹಾರ ಶೈಲಿಯ ಬದಲಾವಣೆ ಮಾಡಿಕೊಳ್ಳಿ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಸಲಹೆ ನೀಡಿದರು.
ತಾಲ್ಲೂಕಿನ ಮೇಗಳಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹಿರೇಗುಂಟನೂರು ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ವಿಶ್ವ ಹೃದಯ ದಿನದ ಸಂಬಂಧ ಮಾಹಿತಿ ಶಿಕ್ಷಣ ಸಂವಾಹನ ಕಾರ್ಯಕ್ರಮದೊಂದಿಗೆ ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳಿಗಿಂತ ಸಾಂಕ್ರಾಮಿಕವಲ್ಲದ ರೋಗಗಳಾದ ಮಧುಮೇಹ, ರಕ್ತದೊತ್ತಡ ಕ್ಯಾನ್ಸರ್ ಹೃದಯಾಘಾತದಿಂದ ನಿಧನರಾಗುವವರ ಸಂಖ್ಯೆ ಹೆಚ್ಚಾಗಿದೆ. ಹೆಚ್ಚು ಹೆಚ್ಚು ಮಾಂಸ ಸೇವಿಸುವುದು ಬೇಡ. ಅಧಿಕ ಕೊಬ್ಬಿನ ಆಹಾರ ಸೇವನೆಯಿಂದ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗಿ ಚಿಕ್ಕ ವಯಸ್ಸಿನಲ್ಲೇ ಹೃದಾಯಾಘತ ಸಂಭವಿಸಬಹುದು. ಟಿ.ವಿ. ವೀಕ್ಷಿಸುತ್ತ ಊಟ ಮಾಡುವುದು, ಸದಾಕಾಲ ಮಲಗೇ ಇರುವುದು, ಲವಲವಿಕೆಯಿಂದ ಇಲ್ಲದಿರುವುದರಿಂದ ಹೃದಯದ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತದೆ ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ ಹೃದಯದ ಆರೋಗ್ಯ ಕಾಪಾಡಲು ತಂಬಾಕು ಮತ್ತು ಅದರ ಉತ್ಪನ್ನಗಳ ಸೇವನೆ ವರ್ಜಿಸಬೇಕು, ಮದ್ಯಪಾನ ಮಾಡಬಾರದು, ಮಿತವಾಗಿ ಉಪ್ಪು ಸಕ್ಕರೆಯನ್ನು ಸೇವಿಸಬೇಕು ನಿತ್ಯ ಯೋಗ, ಧ್ಯಾನದ ಅಭ್ಯಾಸ ಮಾಡಬೇಕು. ಎಣ್ಣೆಯಲ್ಲಿ ಕರಿದ ಆಹಾರವನ್ನು ಮಿತವಾಗಿ ಸೇವಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ವರ್ತನೆ ಬದಲಾವಣೆ ಸಂಯೋಜಕ ಸುನಿಲ್, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀಧರ್, ಏಕಾಂತ್, ಅಜಯ್, ಇಸ್ಮಾಯಿಲ್, ಸಮುದಾಯ ಆರೋಗ್ಯಾಧಿಕಾರಿ ಶಿವು, ಆರೋಗ್ಯ ಸುರಕ್ಷತಾಧಿಕಾರಿ ಬಿ.ವೀರಮ್ಮ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ನಾಗರೀಕರು ಭಾಗಿಯಾಗಿದ್ದರು