ಭಕ್ತರ ಕುಡಿಯುವ ನೀರಿಗೆ ವ್ಯಾಪಕ ಕ್ರಮ; ಇ.ಓ. ಗಂಗಾಧರಪ್ಪ

ರಾಜ್ಯ

ಶ್ರೀ ಗುರುತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ
ಭಕ್ತರ ಕುಡಿಯುವ ನೀರಿಗೆ ವ್ಯಾಪಕ ಕ್ರಮ; ಇ.ಓ. ಗಂಗಾಧರಪ್ಪ

 

 

 

ನಾಯಕನಹಟ್ಟಿ; ಬೇಸಿಗೆ ಸಂದರ್ಭ ಇರುವುದರಿಂದ ದಿ.26ರಂದು ಮಂಗಳವಾರ ನಡೆಯುವ ನಾಯಕನಹಟ್ಟಿ ಶ್ರೀಗುರುತಿಪ್ಪೇರುದ್ರಸ್ವಾಮಿ ಜಾತ್ರೆಗೆ ಆಗಮಿಸುವ ಭಕ್ತರಿಗೆ ಕುಡಿಯುವ ನೀರು ಸಮರ್ಪಕ ವಿತರಣೆಗೆ ಅಗತ್ಯ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ದೇವಸ್ಥಾನ ಕಾರ್ಯನಿರ್ವಾಹಣಾಧಿಕಾರಿ ಹೆಚ್.ಗಂಗಾಧರಪ್ಪ ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಶ್ರೀದೇವಸ್ಥಾನದಲ್ಲಿ ಮಾನತಾಡಿದ ಅವರು, ಜಾತ್ರೆಯಲ್ಲಿ ಭಕ್ತರಿಗೆ ಕುಡಿಯುವ ನೀರು ಸರಬರಾಜಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.
ನಾಯಕನಹಟ್ಟಿ ಪಟ್ಟಣದಲ್ಲಿ ಹಳೆಯ ಕೇಂದ್ರಗಳ ಜೊತೆ ಹೊಸದಾಗಿ 12 ನೀರಿನ ಕೇಂದ್ರಗಳನ್ನು ಗುರುತಿಸಲಾಗಿದೆ. ಇಲ್ಲಿಂದ ಪಟ್ಟಣದ ವಿವಿಧ ಭಾಗಗಳಿಗೆ 70ಕ್ಕೂ ಹೆಚ್ಚು ಟ್ಯಾಂಕರ್‍ಗಳಲ್ಲಿ ನಿರಂತರವಾಗಿ ಕುಡಿಯುವ ನೀರು ಸರಬರಾಜು ಮಾಡಲಾಗುವುದು. ವಿವಿಧ ಇಲಾಖೆಗಳ ನೀರಿನ ಟ್ಯಾಂಕರ್ ಜೊತೆಗೆ ಹಾಲಿನ ಟ್ಯಾಂಕರ್‍ಗಳನ್ನು ಹೆಚ್ಚುವರಿಯಾಗಿ ಬಳಕೆ ಮಾಡಲಾಗುತ್ತದೆ. ಇದರ ಜೊತೆಯಲ್ಲಿ ಜಾನುವಾರುಗಳಿಗೆ ಆಯಾಕಟ್ಟಿನ ಸ್ಥಳದಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದೆ ಹಾಗೂ ಐದು ಕಡೆ ನೀರಿನ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು.
ದೇವಸ್ಥಾನ ಪ್ರಾಂಗಣ ಹಾಗೂ ಸರತಿಯಲ್ಲಿ ನಿಲ್ಲುವ ಭಕ್ತರಿಗೆ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಯಾವುದೇ ತೊಂದರೆ ಆಗದಾ ರೀತಿಯಲ್ಲಿ ಶ್ರೀ ತಿಪ್ಪೇಶನ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದರು.
ಭದ್ರತೆ ದೃಷ್ಠಿಯಿಂದ ಸಮಗ್ರ ಜಾತ್ರೆ ವ್ಯವಸ್ಥೆಯನ್ನು ಸಿ.ಸಿ.ಕ್ಯಾಮರಗಳ ಕಣ್ಗಾವಲಿಗೆ ವಹಿಸಲಾಗಿದೆ. ಸುಮಾರು 60 ಸ್ಥಳಗಳಲ್ಲಿ ಸಿ.ಸಿ.ಕ್ಯಾಮರಗಳನ್ನು ಅಳವಡಿಸಲಾಗಿದೆ. ಭದ್ರತೆಯನ್ನು ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ನಿರ್ವಹಿಸಲಿದೆ. ಜಾತ್ರಾ ಸಂದರ್ಭದಲ್ಲಿ ಯಾವುದೇ ಸಾಂಕ್ರಾಮಿಕ ರೋಗಗಳು ಹರಡದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಸವೋಚ್ಛ ನ್ಯಾಯಾಲಯದ ಆದೇಶದಂತೆ ದೇವಸ್ಥಾನ ಪ್ರಾಂಗಣ, ದೇವಸ್ಥಾನ ಸಂಬಂಧಿಸಿ ಸ್ಥಳದಲ್ಲಿ ಪ್ರಾಣಿ ಬಲಿಯನ್ನು ಕಟ್ಟುನಿಟ್ಟಾಗಿ ನಿಷೇದಿಸಲಾಗಿದೆ. ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜಾತ್ರಾ ಸಂದರ್ಭದಲ್ಲಿ ಕಟ್ಟುನಿಟ್ಟಾಗಿ ನೀತಿ ಸಂಹಿತೆ ಜಾರಿ ಇರುತ್ತದೆ. ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಜಾತ್ರೆಯ ಎಲ್ಲಾ ಕಾರ್ಯಕ್ರಮಗಳನ್ನು ಪಾಲನೆ ಮಾಡಲಾಗುತ್ತಿದೆ ಎಂದು ಹೆಚ್.ಗಂಗಾಧರಪ್ಪ ಹೇಳಿದರು.

Leave a Reply

Your email address will not be published. Required fields are marked *