ನೆಲ ಸಾರಿಸಲು ಮನೆ ಮುಂದೆ ಬಿದ್ದಿದ್ದ ಸಗಣಿ ತೆಗೆದುಕೊಂಡು ಬಂದಿದ್ದೇ ದಲಿತ ಮಹಿಳೆಯ ತಪ್ಪಾಯ್ತು ನೋಡಿ ಮನೆಯ ಮಾಲೀಕರೆಲ್ಲರೂ ಮಹಿಳೆಯನ್ನು ಮನೆಯೊಳಗಿನಿಂದ ದರ ದರನೆ ಎಳೆದು ತಂದು ಮೈ ಮೇಲೆ ಬಟ್ಟೆ ಇಲ್ಲದ ಹಾಗೆ ಮಾಡಿ ದೌರ್ಜನ್ಯವೆಸಗಿರುವ ಅಮಾನವೀಯ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಅರಬಘಟ್ಟ ಗ್ರಾಮದ ವಸಂತಮ್ಮ ಎನ್ನುವ ದಲಿತ ಮಹಿಳೆ ತನ್ನ ಮನೆಯ ನೆಲ ಬಳಿಯಲು ಸವರ್ಣೀಯರ ಮನೆ ಮುಂದೆ ಬಿದ್ದಿದ್ದ ಸಗಣಿಯನ್ನು ತಂದಿದ್ದಳು, ಇದು ಆಕೆಯನ್ನು ಮನ ಬಂದಂತೆ ಥಳಿಸಿ ಮೈ ಮೇಲೆ ಬಟ್ಟೆ ಇಲ್ಲದಂತೆ ಮಾಡಲು ಕಾರಣವಾಗಿದೆ. ಸತೀಶ,ಯೋಗೇಶ, ದ್ರಾಕ್ಷಾಯಿಣಮ್ಮ ಮತ್ತು ಕವಿತ ಎನ್ನುವವರು ಮನೆಯಿಂದ ಎಳೆದು ತಂದು ಹೊಡೆದಿದ್ದಾರೆ. ಸಾಲದಂಬಂತೆ ಮರ್ಮಾಂಗಕ್ಕೆ ಕಾಲಿನಿಂದ ಹೊಡೆದಿದ್ದಾರೆ. ಬಟ್ಟೆಯನ್ನು ಹರಿದು ಹಾಕಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ವಸಂತಮ್ಮ ಹೇಳುತ್ತಾರೆ. ಇವರ ದೌರ್ಜನ್ಯದಿಂದಾಗಿ ನಾವು ಊರಿನಲ್ಲಿ ಇರದಂತಾಗಿದೆ. ನಮಗೆ ನ್ಯಾಯ ಕೊಡಿಸುವಂತೆ ದೂರನ್ನು ಹೊಸದುರ್ಗ ಠಾಣೆಯಲ್ಲಿ ದಾಖಲಿಸಿದ್ದಾರೆ. ಹಲ್ಲೆಯ ವಿಷಯ ತಿಳಿಯುತ್ತಿದ್ದಂತೆ ಸಮಾಜದ ಮುಖಂಡರುಗಳಾದ ಕೃಷ್ಣಪ್ಪ, ರಾಮಣ್ಣ, ಪರಮೇಶ್ವರ್ ಇತರರು ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಗೆ ಸಾಂತ್ವಾನ ಹೇಳಿದ್ದಾರೆ.