ಸವಾಲುಗಳಿಗೆ ಸೋಲುಣಿಸಿದ ಸಿದ್ದು: ಮಾಜಿ ಸಚಿವ ಹೆಚ್. ಆಂಜನೇಯ
ಚಿತ್ರದುರ್ಗ: ಜು.೭
ಈ ಬಾರಿಯ ಬಜೆಟ್ ಮಂಡನೆ ಕುರಿತು ಆರ್ಥಿಕ ಚಿಂತಕರು, ಪ್ರತಿಪಕ್ಷಗಳು, ಜನರಷ್ಟೇ ಅಲ್ಲ ಕಾಂಗ್ರೆಸ್ ಪಕ್ಷದವರಲ್ಲೂ ತೀವ್ರ ಕುತೂಹಲ ಇತ್ತು. ಅಭಿವೃದ್ಧಿ ಕಾರ್ಯಗಳಿಗೆ ಕತ್ತರಿ ಹಾಕದೆ ಬೃಹತ್ ಐವತ್ತು ಸಾವಿರ ಕೋಟಿ ರೂ. ವೆಚ್ಚದ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ಹಣ ಹೇಗೆ ಹೊಂದಿಸುತ್ತಾರೆ ಎಂಬ ಪ್ರಶ್ನೇ ಸಾಮಾನ್ಯವಾಗಿ ಉದ್ಭವವಾಗಿತ್ತು. ಆದರೆ, ಆರ್ಥಿಕ ತಜ್ಞರ ಚಿಂತನೆಗೂ ನಿಲುಕದೆ ಸಾಲು-ಸಾಲು ಸವಾಲುಗಳನ್ನು ಮೆಟ್ಟಿನಿಂತು ಸಿದ್ದರಾಮಯ್ಯ ಸಮರ್ಥವಾಗಿ ಬಜೆಟ್ ಮಂಡಿಸಿದ್ದಾರೆ. ಇದೊಂದು ಪವಾಡ ಎನ್ನಬಹುದು. ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ಮೆಡಿಕಲ್ ಕಾಲೇಜ್ ಆರಂಭಕ್ಕೆ ಕ್ರಮ ಹಾಗೂ ಯಾವೊಂದು ಸಮುದಾಯಗಳಿಗೂ ಸಣ್ಣ ಅನ್ಯಾಯ ಆಗದಂತೆ ಅನುದಾನ ಹಂಚಿಕೆ ಮಾಡಲಾಗಿದೆ. ಯಾವ ಅಭಿವೃದ್ಧಿ ಕಾರ್ಯಗಳಿಗೆ ಧಕ್ಕೆ ತರದೆ ಗ್ಯಾರಂಟಿ ಯೋಜನೆ ಜಾರಿ ಜೊತೆಗೆ ಹತ್ತಾರು ಹೊಸ ಯೋಜನೆಗಳಿಗೆ ಅನುದಾನ ಒದಗಿಸಿರುವುದು, ಜತೆಗೆ ಆದಾಯ ಕ್ರೋಢೀಕರಣ ಮಾಡಿರುವುದು ಸಿದ್ದರಾಮಯ್ಯ ಅವರ ವಿತ್ತ ಜ್ಞಾನಕ್ಕೆ ಸಾಕ್ಷಿಯಾಗಿದೆ. ವಿಪಕ್ಷಗಳು ಕೂಡ ಟೀಕೆ ಮಾಡಲು ಸಾಧ್ಯವಾಗದ ರೀತಿ ಬಜೆಟ್ ಮಂಡಿಸಿದ್ದಾರೆ.