ಚಿತ್ರದುರ್ಗ ಜಿಲ್ಲೆಯಲ್ಲಿ ಮತದಾನದ ಪ್ರಮಾಣವನ್ನು ಶೇ 80 ರಿಂದ 90 ಕ್ಕೆ ಹೆಚ್ಚಿಸುವ ಸಲುವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಸ್ವೀಪ್ ಸಮಿತಿಯು ವಿವಿಧ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಾ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದೆ.
ಜಿಲ್ಲೆಯಾದ್ಯಂತ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿಗಳು ಸ್ವೀಪ್ ನಲ್ಲಿ ಬೀದಿ ನಾಟಕಗಳು, ರಂಗೋಲಿ ಸ್ಪರ್ಧೆಗಳು, ಆಯೋಜಿಸುತ್ತಿದ್ದಾರೆ. ಅದರ ಮೂಲಕ ಮತದಾನದಲ್ಲಿ ಕಡ್ಡಾಯವಾಗಿ ಎಲ್ಲರೂ ಪಾಲ್ಗೊಳ್ಳಬೇಕು, ಇತರರನ್ನು ಪಾಲ್ಗೊಳ್ಳುವಂತೆ ಪ್ರೇರೇಪಿಸಿ ಅರಿವನ್ನು ಮೂಡಿಸಲಾಗುತ್ತಿದೆ. ರಂಗೋಲಿಗಳಲ್ಲಿ ದೇಶಕ್ಕಾಗಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ,ಎಂಬ ಆಕರ್ಷಕ ರಂಗೋಲಿಗಳನ್ನು ಬಿಡಿಸಿ ಬಣ್ಣವನ್ನು ತುಂಬಿ ಗಮನ ಸೆಳೆಯಲಾಗುತ್ತಿದೆ. ಮನೆಗಳು, ಕಾಲೋನಿಗಳು ಹಾಗೂ ರಸ್ತೆಗಳ ಅಂಗಳಗಳಲ್ಲಿ ಆಕರ್ಷಕ ರಂಗೋಲಿಗಳನ್ನು ಬಿಡಿಸಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಬೀದಿ ನಾಟಕಗಳನ್ನು ಆಯೋಜನೆ ಮಾಡುವ ಮೂಲಕ ಪ್ರಜಾ ಪ್ರಭುತ್ವದಲ್ಲಿ ಮತದಾನ ಎಷ್ಟು ಮುಖ್ಯ ಮತದಾನ ಏಕೆ ಮಾಡಬೇಕು ಎಂದು ಮಾಹಿತಿ ನೀಡಿ ಪ್ರತಿಯೊಬ್ಬರೂ ಮತದಾನ ಪಾಲ್ಗೊಳ್ಳುವಂತೆ ಮನವಿಯನ್ನು ಮಾಡಲಾಗುತ್ತಿದೆ. ಇದೆಲ್ಲರ ಜೊತೆಗೆ ಹಣ ಹಂಚಿಕೆ ಹಾಗೂ ಚುನಾವಣೆಯ ಅಕ್ರಮಗಳು ನಡೆದಾಗ ಸಿ ವಿಜಿಲ್ ನಲ್ಲಿ ಹೇಗೆ ದೂರನ್ನು ನೀಡಬೇಕು ಎಂಬ ಮಾಹಿತಿಯನ್ನು ನೀಡಲಾಯಿತು.