ಚಿತ್ರದುರ್ಗದ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ನೂತನ ತಾಯಿ ಮಕ್ಕಳ ಆಸ್ಪತ್ರೆಯ ಉದ್ಘಾಟನೆಯನ್ನು ಇಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಉದ್ಘಾಟಿಸಿದರು ಆದರೆ ಆರೋಗ್ಯ ಇಲಾಖೆ ಈ ಕಟ್ಟಡ ಸಿದ್ದಗೊಳ್ಳಲು ಶ್ರಮಿಸಿದ ಕೆಲ ಅಧಿಕಾರಿಗಳು ವೈದ್ಯರನ್ನು ಇಂದು ಮರೆತಿದ್ದು, ಕಾರ್ಯಕ್ರಮದಲ್ಲಿಎದ್ದು ಕಾಣುತ್ತಿತ್ತು.
2014-15 ನೇ ಸಾಲಿನಲ್ಲಿ ಈಗಿರುವ ತಾಯಿ ಮಕ್ಕಳ ಆಸ್ಪತ್ರೆಯ ಕಟ್ಟಡದ ಜಾಗದಲ್ಲಿ ಜಿಲ್ಲಾ ಉಪ ಕಾರಾಗೃಹ ಹಾಗೂ ಎಎನ್ಎಂ ಕಾಲೇಜ್ ಸಹ ಇತ್ತು. ಆಸ್ಪತ್ರೆಗೆ ಸೇರಿದ ಜಾಗವಾದ್ದರಿಂದ ಇಲ್ಲಿ ಆಸ್ಪತ್ರೆಯ ಕಟ್ಟಡ ಕಟ್ಟಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅದರ ಆಗು ಹೋಗುಗಳನ್ನು ನೋಡಿಕೊಂಡು ಕೊನೆಗೆ ಆಸ್ಪತ್ರೆಯ ಕಟ್ಟಡ ನಿರ್ಮಿಸಲು ಸರ್ಕಾರದಿಂದ ಅನುಮತಿ ಪಡೆದುಕೊಳ್ಳಲಾಯಿತು. ಇದೆಲ್ಲದಕ್ಕೂ ಧೈರ್ಯವಾಗಿ ಹಳೆಯ ಕಟ್ಟಡ ಕೆಡವಲು ಮುಂದಾಗಿದ್ದ ಅಂದಿನ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಜಗದೀಶ್ ಅವರಿಗೆ ಆರೋಗ್ಯ ಇಲಾಖೆಯಿಂದ ನೋಟಿಸ್ ಕೂಡ ಕೊಡಲಾಗಿತ್ತು. ಇದೆಲ್ಲದಕ್ಕೂ ಉತ್ತರ ನೀಡುವ ಮೂಲಕ ಜಿಲ್ಲೆಯ ಜನತೆಗೆ ಈ ಆಸ್ಪತ್ರೆ ಎಷ್ಟು ಮುಖ್ಯ ಎಂದು ಮನವರಿಕೆ ಮಾಡಿಕೊಟ್ಟು ಆಸ್ಪತ್ರೆಯ ಕಟ್ಟಡ ನಿರ್ಮಾಣವಾಗಲು ಮುಂದಾಗಿದ್ದ ಡಾ. ಜಗದೀಶ್ ಅವರನ್ನು ಆರೋಗ್ಯ ಇಲಾಖೆ ಹಾಗೂ ಜಿಲ್ಲಾಸ್ಪತ್ರೆ ಇಂದು ಸ್ಮರಿಸಿಕೊಳ್ಳದೆ ನೂತನ ಆಸ್ಪತ್ರೆಯ ಕಟ್ಟಡ ಉದ್ಘಾಟನೆ ಮಾಡಿದ್ದು, ಸರಿಯೇ ಎಂದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.