ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಐಮಂಗಲ ಹೋಬಳಿ ಯಲ್ಲಿ ಗ್ರಾಮಸ್ಥರು ಹಾಗೂ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಸ್ಥಳೀಯ ವ್ಯಕ್ತಿ ಡಾ. ಬಿ ತಿಪ್ಪೇಸ್ವಾಮಿ ಜೆಜೆ ಹಟ್ಟಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಪಾದಯಾತ್ರೆ ನಡೆಸಿ ಗ್ರಾಮದ ಕಲ್ಕುಂಟೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಡಾ. ಬಿ ತಿಪ್ಪೇಸ್ವಾಮಿ ಮಾತಾಡಿ, ನನಗೆ ಈ ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಸಿಗುವ ವಿಶ್ವಾಸವಿದ್ದು, ಸ್ಥಳೀಯನಾದ ನಾನು ಜಿಲ್ಲೆಯ ಎಲ್ಲಾ ಸಮಸ್ಯೆಗಳನ್ನು ಅರಿತಿದ್ದೇನೆ. ಅಪ್ಪರ್ ಭದ್ರಾ, ರೈಲ್ವೇ, ಶಿಕ್ಷಣ, ಆರೋಗ್ಯ, ಕೈಗಾರಿಕೆ ಸೇರಿದಂತೆ ಮೂಲ ಸೌಕರ್ಯದ ಬಗ್ಗೆ ಒಬ್ಬ ಸಂಸದನಾಗಿ ತ್ವರಿತವಾಗಿ ಇವೆಲ್ಲವುಗಳನ್ನು ಅನುಷ್ಠಾನಕ್ಕೆ ತರಲು ನನಗೆ ಆಶೀರ್ವಾದಿಸುವಂತೆ ಸಭೆಯಲ್ಲಿ ಮನವಿ ಮಾಡಿದರು.
ಲೀಡ್ಕರ್ ಮಾಜಿ ಅಧ್ಯಕ್ಷ ಶಂಕರ್ ಮಾತಾಡಿ, ಈ ಬಾರಿ ಸ್ಥಳೀಯರಾದ ಡಾ. ಬಿ ತಿಪ್ಪೇಸ್ವಾಮಿಗೆ ಇಡೀ ಜಿಲ್ಲೆಯ ಜನ ಗೆಲ್ಲಿಸಲು ಸ್ವಯಂ ಪ್ರೇರಣೆಯಿಂದ ಹಳ್ಳಿ ಹಳ್ಳಿಗಳಲ್ಲಿ ಮುಂದಾಗಿದ್ದಾರೆ. ಹಾಗಾಗಿ ನಾವು ನೀವೆಲ್ಲರೂ ಸೇರಿ ಡಾ. ಬಿ ತಿಪ್ಪೇಸ್ವಾಮಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಹಿರಿಯೂರು ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಪ್ಪೇಸ್ವಾಮಿ ರವರು ಮಾತನಾಡಿ, ತಿಪ್ಪೇಸ್ವಾಮಿಯವರು ಕಳೆದ 25 ವರ್ಷದಿಂದ ಈ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡಿ ನಮ್ಮಂತ ನೂರಾರು ಯುವಕರನ್ನು ಬೆಳೆಸಿದ್ದಾರೆ. ಹಾಗೂ ಸ್ಥಳೀಯವಾಗಿ ಈ ಜಿಲ್ಲೆಯ ಸಮಸ್ಯೆಗಳನ್ನು ಅರಿತಿದ್ದಾರೆ. ಹೊರಗಿನವರಿಗೆ ಟಿಕೆಟ್ ಕೊಟ್ಟರೆ ಪಕ್ಷ ಮತ್ತು ಸಂಘಟನೆ ಕುಂಠಿತವಾಗುತ್ತದೆ ಎಂದರು. ಆದ್ದರಿಂದ ತಿಪ್ಪೇಸ್ವಾಮಿಗೆ ಟಿಕೆಟ್ ಕೊಡುವಂತೆ ಒತ್ತಾಯಿಸಿದರು.