ಬೊಮ್ಮಾಯಿ ಬಜೆಟ್ಗೆ ಅಸಮಾಧಾನದ ಹೊಗೆ ಯಡಿಯೂರಪ್ಪ ಕೋಪಕ್ಕೆ ಕಾರಣವೇನು?
ಸಿ ಎಂ ಬಸವರಾಜ ಬೊಮ್ಮಾಯಿ 3 ಲಕ್ಷದ 9 ಸಾವಿರದ 182 ಕೋಟಿ ರೂಪಾಯಿ ಗಾತ್ರದ ಬೃಹತ್ ಬಜೆಟ್ ಮಂಡಿಸಿದ್ದಾರೆ. ವಿರೋಧ ಪಕ್ಷದ ನಾಯಕರು ಈ ಬಜೆಟ್ ಅನ್ನ ಕಿವಿ ಮೇಲೆ ಚೆಂಡು ಹೂವು ಇಟ್ಟುಕೊಳ್ಳುವ ಮೂಲಕ ವ್ಯಂಗ್ಯ ಮಾಡಿದ್ದಾರೆ. ಆದರೆ ಬೊಮ್ಮಾಯಿ ಬಜೆಟ್ಗೆ ಮಾಜಿ ಸಿಎಂ ಯಡಿಯೂರಪ್ಪನವರ ಕೋಪದ ಬಿಸಿಯೂ ತಟ್ಟಿದೆ.
ಬಸವರಾಜ ಬೊಮ್ಮಾಯಿ ಹೇಳಿ ಕೇಳಿ ಬಿ.ಎಸ್.ಯಡಿಯೂರಪ್ಪನವರ ಕಟ್ಟಾ ಬೆಂಬಲಿಗ. ಬಿಜೆಪಿ ಹೈಕಮಾಂಡ್ ಬಿಎಸ್ವೈ ಹೇಳಿದಕ್ಕೆ ಬೊಮ್ಮಾಯಿ ಅವರನ್ನ ಮುಖ್ಯಮಂತ್ರಿ ಮಾಡಿದೆ ಅನ್ನೋದು ಎಲ್ಲರಿಗೂ ಗೊತ್ತಿರೋ ಸತ್ಯವೇ. ಆದ್ರೆ, ಈ ಬಾರಿಯ ಬಜೆಟ್ನಿಂದ ಹಾಲಿ, ಮಾಜಿ ಮುಖ್ಯಮಂತ್ರಿಗಳ ನಡುವೆ ಒಳಬೇಗುದಿ ಶುರುವಾಗುವ ಶಂಕೆ ವ್ಯಕ್ತವಾಗಿದೆ.
2023-24ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಏಳನೇ ವೇತನ ಆಯೋಗ ಜಾರಿ ಮಾಡುವ ನಿರೀಕ್ಷೆ ಇತ್ತು. ಬಿ.ಎಸ್.ಯಡಿಯೂರಪ್ಪ ಸರ್ಕಾರಿ ನೌಕರರಿಗೆ ಈ ಬಾರಿ 7ನೇ ವೇತನ ಆಯೋಗ ಜಾರಿ ಮಾಡುವ ಭರವಸೆಯನ್ನು ನೀಡಿದ್ದರು. ಆದರೆ ಬಜೆಟ್ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಈ ಬಗ್ಗೆ ಏನೂ ಘೋಷಿಸಲೇ ಇಲ್ಲ. 7ನೇ ವೇತನ ಆಯೋಗದ ಜಾರಿ ವಿಚಾರವೇ ಯಡಿಯೂರಪ್ಪ ಅವರ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರು ಭೇಟಿ ಮಾಡಿದ್ದ ವೇಳೆ ಬಿಎಸ್ವೈ ತನ್ನ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ. ವಿಧಾನಸಭಾ ಚುನಾವಣೆ ಮನೆ ಬಾಗಿಲಿಗೆ ಬಂದು ನಿಂತಿರುವಾಗ ಹಾಲಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಅವರ ಈ ಒಳ ಬೇಗುದಿ ಶಮನವಾಗುತ್ತೋ? ಅಥವಾ ಮತ್ತಷ್ಟು ರಾಜಕೀಯದ ಸ್ವರೂಪಗಳನ್ನ ಪಡೆದುಕೊಳ್ಳುತ್ತೋ ಗೊತ್ತಿಲ್ಲ.