ಚಿತ್ರದುರ್ಗ: ಕಾಂಗ್ರೆಸ್ ನಾಯಕರು ರೈತರನ್ನ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದರು.
ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ರೈತರನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ 60 ದಿನಗಳಿಂದ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ರಾಜಭವನ ಚಲೋ ಮಾಡಿದ ಡಿಕೆಶಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಮುಂಚಿನಿಂದಲೂ ಡಿಕೆಶಿ ರೈತ ಹೋರಾಟ ಮಾಡಲಿಲ್ಲ. ಇಂದು ರೈತರ ಬಗ್ಗೆ ಮಾತನಾಡುತ್ತಿದ್ದಾರೆ. ರಾಜಕಾರಣಕ್ಕಾಗಿ ರೈತರನ್ನ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಪರ ಕಾಂಗ್ರೆಸ್ ಡೋಂಗಿ ರಾಜಕಾರಣ ಮಾಡುತ್ತಿದ್ದು ಇದನ್ನು ಖಂಡಿಸುತ್ತೇನೆ. ಕೃಷಿ ಕಾಯ್ದೆಗಾಗಿ 18 ತಿಂಗಳು ಸುಪ್ರೀಂ ಕೋರ್ಟ್ ನಲ್ಲಿ ಸ್ಟೇ ಸಲ್ಲಿಸಿದೆ. ತಜ್ಞರ ಸಮಿತಿ ರಚನೆ ಮಾಡಿದ್ದು, ವರದಿ ಬಂದ ಬಳಿಕ ಕೇಂದ್ರ ನಿರ್ಧಾರ ಮಾಡುತ್ತದೆ. ರಾಜಕೀಯ ಪಕ್ಷಗಳು ಸ್ವಾರ್ಥಕ್ಕಾಗಿ ಹೋರಾಟ ಮಾಡುತ್ತಿವೆ. ಬಂದಿರುವ ರೈತರು ಪರ್ಸನೆಲ್ ಅಜೆಂಡಾ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ರೈತಪರ ಯಾರೂ ಕೂಡ ಹೋರಾಟ ಮಾಡುತ್ತಿಲ್ಲ.
ಇನ್ನು ಖಾತೆ ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಮುಲು ಖಾತೆ ಹಂಚಿಕೆ ವೇಳೆ ಸಮಾಧಾನ ಅಸಮಾಧಾನ ಇರುವುದು ಸಹಜ. ಮುಖ್ಯಮಂತ್ರಿಗಳು ಅವರ ವಿವೇಚನೆ ಮೇಲೆ ಹಂಚಿಕೆ ಮಾಡಿದ್ದಾರೆ. ಮಂತ್ರಿ ಮಂಡಲದಲ್ಲಿರುವ ಎಲ್ಲಾ ಸಚಿವರು ಸಮರ್ಥರು ಬಿಜೆಪಿಯಲ್ಲಿ ಯಾವುದೇ ಅಸಮಾಧಾನವಿಲ್ಲ. ಇಂದು ಮಾಧುಸ್ವಾಮಿ ಹಾಗೂ ಅನಂದ್ ಸಿಂಗ್ ಇಬ್ವರನ್ನು ಯಡಿಯೂರಪ್ಪ ಕರೆದಿದ್ದು ಅವರು ಹೋಗಿ ಭೇಟಿ ಮಾಡಲಿದ್ದಾರೆ ಎಂದು ಹೇಳಿದರು.
ಸಂಯುಕ್ತವಾಣಿ