ಸೇವಾಲಾಲ್ ಸ್ವಾಮೀಜಿ ಕೊಟ್ಟ ಎಚ್ಚರಿಕೆ ಏನು?
ಚಿತ್ರದುರ್ಗ,ನ02(ಸಂವಾ)- ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಲು ಬಿಜೆಪಿ ಬದ್ದವಾಗಿದೆ ಎಂದು ನೀಡಿರುವ ಹೇಳಿಕೆಯನ್ನು ಕೂಡಲೇ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಪಾಸ್ಸು ಪಡೆಯಬೇಕು ಇಲ್ಲದೆ ಹೋದರೆ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡವುದಾಗಿ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಎಚ್ಚರಿಸಿದ್ದಾರೆ.
ಅವರು ದಾವಣಗೆರೆ ರಸ್ತೆಯಲ್ಲಿರುವ ಬಂಜಾರ ಗುರುಪೀಠದ ಆವರಣದಲ್ಲಿ ಲೋಕಕಲ್ಯಾಣರ್ಥವಾಗಿ ನಡೆದ ಮಹಾಯಾಗ, ಸಮಾಜದ ಮುಂದಿರುವ ಸವಾಲುಗಳ ಬಗ್ಗೆ ಚಿಂತನಾ ಸಭೆ ಹಾಗು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಕೈಗೊಂಡ ಸಂದರ್ಭದಲ್ಲಿ ಸದಾಶಿವ ವರದಿಯನ್ನು ಜಾರಿಗೊಳಿಸುವುದಾಗಿ ಹೇಳಿರುವ ಕಟೀಲ್ ಅವರು ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದು, ಮಧ್ಯ ಕರ್ನಾಟಕದ ಜಿಲ್ಲೆಯವರ ಕಷ್ಟ ಸುಖಗಳ ಬಗ್ಗೆ ಅರಿವಿದಿದ್ದರೆ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರಲಿಲ್ಲ.ಕೂಡಲೇ ಅವರು ಕ್ಷಮೆಯಾಚಿಸಬೇಕು ಇಲ್ಲವಾದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಹೇಳಿದರು. ಕಟೀಲ್ ಅವರ ಹೇಳಿಕೆ ಪರಿಶಿಷ್ಟ ಜಾತಿಗಳ ೧೦೧ ಜಾತಿಗಳಲ್ಲಿ ಉಪಜಾತಿಗಳ ನಡುವೆ ಬಿನ್ನಾಭಿಪ್ರಾಯ ಮೂಡಿಸಲಿದೆ. ಉಪ ಜಾತಿಗಳನ್ನು ಒಡೆಯುವ ಕೆಲಸ ಮಾಡಬಾರದು ಎಂದು ರಾಜ್ಯಾಧ್ಯಕ್ಷ ಕಟೀಲ್ ಮನಸ್ಥಿತಿಯನ್ನು ಖಂಡಿಸಿದರು.
ಶಾಸಕ ಜಿಎಚ್ ತಿಪ್ಪಾರೆಡ್ಡಿ ಮಾತನಾಡಿ, ಬಂಜಾರ ಗುರುಪೀಠದ
ಅಭಿವೃದ್ದಿಗೆ ನನ್ನ ಅನುದಾನ ಬಿಡುಗಡೆ ಮಾಡುತ್ತೆನೆ. ಶಿಕ್ಷಣ, ಸಾಮಾಜಿಕ, ಆರ್ಥಿಕವಾಗಿ ಮುಂದೆ ಬರಬೇಕು ಹಾಗೂ ಶಿಕ್ಷಣಕ್ಕೆ ಒತ್ತು ನೀಡಿ ಬಂಜಾರ ಸಮಾಜ ಮುಂದೆ ಬರಬೇಕು. ನಳೀನ್ ಕಟೀಲ್ ಅವರು ಸದಾಶಿವ ಆಯೋಗದ ವರದಿಯನ್ನು ಬಿಜೆಪಿ ಜಾರಿಗೊಳಿಸಲಿದೆ ಎಂದು ಬಾಯಿ ತಪ್ಪಿನಿಂದ ಆಕಸ್ನಿಕವಾಗಿ ಹೇಳಿರಬಹುದು ನಾನು ಯಾವುದೇ ಕಾರಣಕ್ಕೂ ಬಂಜಾರ ಸಮೂದಾಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು. ವಿವಿಧ ಮಠಾಧೀಶರು ಹಾಗೂ ಸಮಾಜದ ಮುಖಂಡರು ಚಿಂತನಾ ಸಭೆಯಲ್ಲಿ ಭಾಗವಹಿಸಿದ್ದರು.
ಸಂಯುಕ್ತವಾಣಿ
ಡಿ.ಕುಮಾರಸ್ವಾಮಿ