23 ರಂದು ಚಿತ್ರದುರ್ಗ ಬಂದ್, 20 ಕ್ಕೂ‌ ಹೆಚ್ಚು ಸಂಘಟನೆಗಳಿಂದ ಬೆಂಬಲ 

ರಾಜ್ಯ

23 ರಂದು ಚಿತ್ರದುರ್ಗ ಬಂದ್ / 20 ಕ್ಕೂ‌ ಹೆಚ್ಚು ಸಂಘಟನೆಗಳಿಂದ ಬೆಂಬಲ

 

 

 

ಭದ್ರಾ ಮೇಲ್ದಂಡೆ ಶೀಘ್ರ ಕಾರ್ಯಾನುಷ್ಠಾನಕ್ಕೆ ಆಗ್ರಹಿಸಿ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಜನವರಿ 23 ರ ಮಂಗಳವಾರ ಚಿತ್ರದುರ್ಗ ಬಂದ್ ಕರೆ ನೀಡಿದೆ. ಸಮಿತಿ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.20 ಕ್ಕೂ ಹೆಚ್ಚು ಸಂಘಟನೆಗಳ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಸಮಿತಿ ಅಧ್ಯಕ್ಷ ಲಿಂಗಾರೆಡ್ಡಿ, ಭದ್ರಾ ಮೇಲ್ದಂಡೆಯ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ 5300 ಕೋಟಿ ರೂಪಾಯಿ ನೆರವು ನೀಡುವುದಾಗಿ ಸ್ವತಃ ಪ್ರಧಾನ ಮಂತ್ರಿಗಳು ಕಳೆದ ವರ್ಷ ಚಿತ್ರದುರ್ಗಕ್ಕೆ ಆಗಮಿಸಿ ಹೇಳಿದ್ದರು. ಇದುವರೆಗೂ ಅನುದಾನ ಬಿಡುಗಡೆಯಾಗಿಲ್ಲ. ಕೇಂದ್ರ ಸರ್ಕಾರ ಮತ್ತೊಂದು ಬಜೆಟ್ ಮಂಡಿಸಲು ಮುಂದಾಗಿದ್ದು, ಕಳೆದ ಬಜೆಟ್ ಘೋಷಣೆ ಜಾರಿಗೆ ಬಂದಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಭದ್ರಾ ಮೇಲ್ದಂಡೆ ವಿಚಾರಲ್ಲಿ ರಾಜ್ಯ ಸರ್ಕಾರವೂ ಉದಾಸೀನ ತೋರಿದೆ. ಕೇಂದ್ರದ ಅನುದಾನ ನಿರೀಕ್ಷೆಯಲ್ಲಿ ತನ್ನ ಜವಾಬ್ದಾರಿ ಮರೆತಿದೆ. ಕಳೆದ ಒಂದು ವರ್ಷದಿಂದ ಬಿಡಿಗಾಸು ಬಿಡುಗಡೆ ಮಾಡಿಲ್ಲ. ಭೂ ಸ್ವಾಧೀನದ ಸಮಸ್ಯೆ ಬಗೆ ಹರಿಸಿಲ್ಲ. ಬರೀ ಸುಳ್ಳುಗಳ ಹೇಳಿಕೊಂಡು ಕಾಲ ಹರಣ ಮಾಡುತ್ತಿದೆ ಎಂದು ದೂರಿದರು.
ರೈತ ಸಂಘದ ರಾಜ್ಯ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಕೊಟ್ಟು ಸಾಕಾಗಿದೆ. ಪ್ರತಿಭಟನೆ ಮೂಲಕ ಎರಡೂ ಸರ್ಕಾರಗಳಿಗೆ ಎಚ್ಚರಿಕೆ ಸಂದೇಶ ರವಾನೆ ಮಾಡಬೇಕಿದೆ ಎಂದರು. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ಮಾತನಾಡಿ, ಪ್ರತಿಭಟನೆ ನಡೆಸಿ ಭಾಷಣ ಮಾಡುವುದರಿಂದ ಉಪಯೋಗವಾಗುವುದಿಲ್ಲ. ಮೊದಲು ಚಿತ್ರದುರ್ಗ ಬಂದ್ ಮಾಡಬೇಕು, ನಂತರ ಎಲ್ಲ ತಾಲೂಕುಗಳಿಗೆ ವಿಸ್ತರಣೆ ಮಾಡೋಣವೆಂದರು.
ಸ್ವರಾಜ್ ಇಂಡಿಯಾದ ಮುಖ್ಯಸ್ಥ ಜೆ.ಯಾದವರೆಡ್ಡಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಚಿತ್ರದುರ್ಗ ಜಿಲ್ಲೆಯ ಜನರಿಗೆ ದ್ರೋಹವೆಸಗಿವೆ. ರಾಷ್ಟ್ರೀಯ ಯೋಜನೆ ಮಾಡುವುದಾಗಿ ಹೇಳಿ ಕೇಂದ್ರ ಸರ್ಕಾರ ಮಂಕುಬೂದಿ ಎರಚಿವೆ. ಎತ್ತಿನ ಹೊಳೆ ಯೋಜನೆ ಗಂಭೀರವಾಗಿ ತೆಗೆದುಕೊಂಡು ಕಾಮಗಾರಿ ಚುರುಕುಗೊಳಿಸಿರುವ ರಾಜ್ಯಸರ್ಕಾರ ಭದ್ರಾ ಮೇಲ್ದಂಡೆ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು.
ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಮಾತನಾಡಿ, ಚಿತ್ರದುರ್ಗ ಜಿಲ್ಲೆಯ ರೈತಾಪಿ ಜನರ ಅಳಿವು ಉಳಿವಿನ ಪ್ರಶ್ನೆ ಇದಾಗಿದ್ದು ಸರ್ಕಾರಗಳ ಎಚ್ಚರಿಸಲೇ ಬೇಕಾಗಿದೆ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ ಪೀರ್ ಮಾತನಾಡಿ, ಜನವರಿ 28 ರಂದು ಸಿಎಂ ಚಿತ್ರದುರ್ಗಕ್ಕೆ ಬರಲಿದ್ದು ಮೊದಲ ಹಂತದಲ್ಲಿ ಅವರಿಗೆ ಮನವಿ ಮಾಡಿಕೊಳ್ಳೋಣ. ನಂತರದಲ್ಲಿ ಹೋರಾಟದ ರೂಪುರೇಷಗಳ ಸಿದ್ದಪಡಿಸೋಣವೆಂದರು. ಅಂತಿಮವಾಗಿ ಜನವರಿ 23 ರ ಮಂಗಳವಾರ ಚಿತ್ರದುರ್ಗ ಬಂದ್ ಗೆ ನಿರ್ಣಯ ಕೈಗೊಳ್ಳಲಾಯಿತು.
ಸ್ವಯಂ ಪ್ರೇರಿತ ಬಂದ್ ಇದಾಗಿದ್ದು ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸೋಣ. ಎಲ್ಲ ಸಂಘಸಂಸ್ಥೆಗಳು, ಹೋಟೆಲ್ ಮಾಲೀಕರು, ಖಾಸಗಿ ಬಸ್ ಮಾಲೀಕರು, ವರ್ತಕರು ಸ್ವಯಂ ಪ್ರೇರಿತ ಬಂದ್ ನಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಳ್ಳಲು ಸಭೆ ತೀರ್ಮಾನಿಸಿತು.
ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ,ತಾಲೂಕು ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಕಟ್ಟಡ ಕಾರ್ಮಿಕರ ಸಂಘದ ವೈ.ಕುಮಾರ್, ಹಮಾಲರ ಸಂಘದ ಅಧ್ಯಕ್ಷ ಬಿ.ಬಸವರಾಜಪ್ಪ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಸುರೇಶ್ ಬಾಬು,ಎಐಟಿಯುಸಿ ರಾಜಪ್ಪ, ಸತ್ಯಕೀರ್ತಿ, ಜನಶಕ್ತಿ ಸಂಘಟನೆಯ ಷಫಿವುಲ್ಲಾ, ಪುರೋಷೋತ್ತಮ, ಕರವೇ ಸಂಘಟನೆಯ ಜಿಲ್ಲಾಧ್ಯಕ್ಷರುಗಳಾದ ರಮೇಶ್, ಎಸ್.ಕೆ.ಮಹಂತೇಶ್,ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಶಿವಕುಮಾರ್, ಲಕ್ಷ್ಮಿಕಾಂತ, ಲಿಂಗಾವರಟ್ಟಿ ಇ.ಎನ್.ಲಕ್ಷ್ಮಿಕಾಂತ, ಹಿರಿಯ ಸಂಗೀತ ಕಲಾವಿದ ಎಸ್.ವಿ.ಗುರುಮೂರ್ತಿ, ಕೋನಸಾಗರ ಮಂಜುನಾಥ್, ರೈತ ಸಂಘದ ಉಪಾಧ್ಯಕ್ಷ ಮಲ್ಲಾಪುರ ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಿಕಾರ್ಜುನ, ಲಕ್ಷ್ಮಿಸಾಗರ ಚೌಡಪ್ಪ,ಅನಂತರಾಜ್, ಮಹೇಂದ್ರಕುಮಾರ್, ಸುಧಿ ಡಿ.ಎಸ್ ಹಳ್ಳಿ, ಸಮೀವುಲ್ಲ, ಎಸ್.ಕೆ.ಕುಮಾರಸ್ವಾಮಿ, ಬ್ಯಾಡರಹಳ್ಳಿ ನಿತ್ಯಶ್ರೀ, ಕಾಂಗ್ರೆಸ್ ಮುಖಂಡರಾದ ಸೈಯದ್ ಖುದ್ದೂಸ್, ಪ್ರಕಾಶ್ ರಾಮನಾಯ್ಕ, ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಮೀವುಲ್ಲಾ ಷರೀಫ್, ಜಿ.ಆರ್ ಪಾಪಯ್ಯ, ಬ್ಲಾಕ್ ಕಾಂಗ್ರೆಸ್ ನ ಡಾ.ರಹಮತುಲ್ಲಾ, ಜಿಪಂ ಮಾಜಿ ಅಧ್ಯಕ್ಷ ರವಿಕುಮಾರ್, ಕೋಗುಂಡೆ ರವಿಕುಮಾರ್, ಹಂಪಯ್ಯನಮಾಳಿಗೆ ರೇವಣ್ಣ, ಕೃಷ್ಣಪ್ಪ ಸಭೆಯಲ್ಲಿ ಪಾಲ್ಗೊಂಡಿದ್ದರು.

 

Leave a Reply

Your email address will not be published. Required fields are marked *