ಚಿತ್ರದುರ್ಗ: ಅಕ್ರಮವಾಗಿ ಆದಾಯ ಮೀರಿ ಆಸ್ತಿ ಗಳಿಸಿರುವ ಆರೋಪದ ಮೇಲೆ ಧಾರವಡ ಜಿಲ್ಲೆಯ ಅರಣ್ಯ ಇಲಾಖೆ ಎಸಿಎಫ್ ಎಸ್.ಶ್ರೀನಿವಾಸ ಅವರ ಮನೆ, ತೋಟದ ಮನೆ, ಅರಣ್ಯ ಇಲಾಖೆ ಕಚೇರಿ ಸೇರಿದಂತೆ ಐದು ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಸಮತೋಲನ ಆಸ್ತಿ ಹೊಂದಿರುವ ಆಪಾದನೆಯ ಮೇರೆಗೆ ಚಿತ್ರದುರ್ಗ ಎ.ಸಿ.ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತು, ಸದರಿ ಪ್ರಕರಣದ ತನಿಖೆ ಸಲುವಾಗಿ ಈ ದಿನ ಆಪಾದಿತ ಸರ್ಕಾರಿ ಅಧಿಕಾರಿ ಶ್ರೀನಿವಾಸರವರ ಚಿತ್ರದುರ್ಗ ಟೌನ್, ಈಶ್ವರ ಬಡಾವಣೆಯ ವಾಸದ ಮನೆ, ಶ್ರೀನಿವಾಸರವರ 1ನೇ ಪತ್ನಿಯ ಚಿತ್ರದುರ್ಗ ಟೌನ್ ಕೆ.ಹೆಚ್.ಬಿ. ಕಾಲೋನಿಯಲ್ಲಿ ಹೊಂದಿರುವ ವಾಸದ ಮನೆ, ಚಿತ್ರದುರ್ಗ ತಾಲ್ಲೂಕ್ , ಮಾರಘಟ್ಟ ಗ್ರಾಮದ ಬಳಿಯ ತೋಟದ ಮನೆ, ಕರ್ತವ್ಯ ನಿರ್ವಹಿಸುವ ಧಾರವಾಡದ ಆರಣ್ಯ ಇಲಾಖೆಯ ಎ.ಸಿ.ಎಫ್. ಕಛೇರಿ, ಅರಣ್ಯ ಇಲಾಖೆಯ ವಸತಿಗೃಹ ಹೀಗೆ ಒಟ್ಟು ಐದು ಸ್ಥಳಗಳಲ್ಲಿ ಏಕ ಕಾಲಕ್ಕೆ ಎ.ಸಿ.ಬಿ, ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ಚಿತ್ರದುರ್ಗ ನಗರದ ಈಶ್ವರ ಬಡಾವಣೆಯ ವಾಸದ ಮನೆಯಲ್ಲಿ 876 ಗ್ರಾಂ ಬಂಗಾರದ ಒಡವೆಗಳು, ಎರಡೂವರೆ ಕೆ.ಜಿ ಬೆಳ್ಳಿ ಸಾಮಾಗ್ರಿಗಳು, 4,70,000/- ರೂ ನಗದು ಹಣ ಪತ್ತೆಯಾಗಿದ್ದು, ಮನೆಯಲ್ಲಿನ ಗೃಹೋಪಯೋಗಿ ವಸ್ತುಗಳು ಮತ್ತು ದಾಖಲಾತಿಗಳ ಪರಿಶೀಲನೆ ಮುಂದುವರೆದಿದೆ. ಪೂರ್ವ ವಲಯ ದಾವಣಗೆರೆ ಎಸಿಬಿ ಎಸ್ಪಿ ಹೆಚ್.ಜಯಪ್ರಕಾಶ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಚಿತ್ರದುರ್ಗ ಎ.ಸಿ.ಬಿ ಡಿಎಸ್.ಪಿ. ಬಸವರಾಜ ಆರ್. ಮಗದುಮ್, ಶಿವಮೊಗ್ಗ ಎ.ಸಿ.ಬಿ. ಡಿ.ಎಸ್.ಪಿ. ಲೋಕೇಶ್, ಹಾವೆರಿ ಎ.ಸಿ.ಬಿ ಡಿ.ಎಸ್.ಸಿ. ಮಹಂತೇಶರ ಎಸ್. ಜಿದ್ದಿ, ಪೊಲೀಸ್ ಇನ್ಸ್ಪೆಕ್ಟರ್ಗಳಾದ ಪ್ರವೀಣ್ ಕುಮಾರ್, ಮದುಸೂದನ್, ಇಮ್ರಾನ್ ಬೇಗ್, ಹಾಗೂ ದಾವಣಗೆರೆ ಪೂರ್ವ ವಲಯ ಎ.ಸಿ.ಬಿ ವ್ಯಾಪ್ತಿಯ ಎಲ್ಲ ಠಾಣೆಗಳ ಸಿಬ್ಬಂದಿಗಳು ಭಾಗವಹಿಸಿರುತ್ತಾರೆ ಎಂದು ಎಸಿಬಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಸಂಯುಕ್ತವಾಣಿ