ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡ ಫಲಾನುಭವಿ ಹೆಸರಿಗೆ ಹಕ್ಕು ಪತ್ರ ನೀಡಿದ್ದು ಮುಂದಿನ ದಿನದಲ್ಲಿ ಅವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಕಂದಾಯ ಇಲಾಖೆ ವತಿಯಿಂದ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿದ 52 ಮನೆಗಳ ಫಲಾನುಭವಿಗಳಿಗೆ 94(C) ಅಡಿ ಸಕ್ರಮಗೊಳಿಸಿದ ಹಕ್ಕು ಪತ್ರಗಳನ್ನು ವಿತರಣೆ ಮಾಡಿ ಮಾತನಾಡಿದರು.
ರಾಜ್ಯ ಸರ್ಕಾರದಿಂದ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವ ಫಲಾನುಭವಿಗಳು ಅರ್ಜಿ ಸಲ್ಲಿಸಿ ಸಕ್ರಮ ಮಾಡಿಸಿಕೊಳ್ಳಲು ಅವಕಾಶ ನೀಡಿತ್ತು. ಈ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿದಂತಹ ಎಲ್ಲಾರಿಗೂ ಕಂದಾಯ ಇಲಾಖೆ ಮೂಲಕ ಸರ್ಕಾರದ ಮಾನದಂಡ ಅನ್ವಯ ಮನೆಯ ಫಲಾನುಭವಿ ಹೆಸರಿಗೆ ಹಕ್ಕು ಪತ್ರ ನೀಡುವ ಮೂಲಕ ಅವರಿಗೆ ಆ ಜಾಗದ ಸಂಪೂರ್ಣ ಸ್ವಾತಂತ್ರ್ಯ ದೊರಕುವಂತೆ ಮಾಡಲಾಗಿದೆ ಎಂದರು.
ನನ್ನ ಕ್ಷೇತ್ರದಲ್ಲಿ ಎಲ್ಲಾ ಕಡೆ ಪರಿಶೀಲನೆ ನಡೆಸಿದ್ದೇವೆ. ಆದರೆ ಜೆ.ಎನ್.ಕೋಟೆಯಲ್ಲಿ ಅತಿ ಹೆಚ್ಚು ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡ ಫಲಾನುಭವಿಗಳು ದೊರಕಿದ್ದಾರೆ. ಉಳಿದಂತೆ ಇನ್ನು 75 ಅರ್ಜಿಗಳು ಬಾಕಿ ಇದ್ದು ತಹಶೀಲ್ದಾರ್ ಅವರು 20 ದಿನ ಸಮಯ ಪಡೆದಿದ್ದು ಅರ್ಜಿ ಸಲ್ಲಿಸಿದ ಎಲ್ಲಾರಿಗೂ ಹಕ್ಕು ಪತ್ರ ನೀಡಲಾಗುತ್ತದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಖಾತೆಗಳನ್ನು ಮಾಡಿಕೊಡುತ್ತಿದ್ದು ಎಲ್ಲಾ ಪಂಚಾಯಿತಿಗಳಿಗೆ ಹೆಚ್ಚಿನ ಮನೆಗಳನ್ನು ಸಹ ನೀಡಲಾಗಿದೆ. ಇನ್ನು ಅರ್ಜಿ ಸಲ್ಲಿಸುವವರು ಬಾಕಿ ಇದ್ದರೆ ಮುಂದೆ ಸರ್ಕಾರ ಅವಕಾಶ ಕೊಟ್ಟಾಗ ಅರ್ಜಿ ಸಲ್ಲಿಸಿ ಎಂದು ತಿಳಿಸಿದರು.
ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ ಮಾತನಾಡಿ ಸರ್ಕಾರದ ಆದೇಶದಂತೆ ಅರ್ಜಿ ಸಲ್ಲಿಸಿದ ಎಲ್ಲಾರಿಗೂ ಹಕ್ಕು ಪತ್ರ ನೀಡಿದ್ದೇವೆ. ಸರ್ಕಾರ ಮಾನದಂಡ ಪ್ರಕಾರ 2015 ರ ಪೂರ್ವದಲ್ಲಿ ಅನಧಿಕೃತವಾಗಿ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಸಿಕೊಂಡವರಿಗೆ ಹಕ್ಕು ಪತ್ರ ನೀಡಲಾಗುತ್ತಿದೆ.ಕಳೆದ ಮಾರ್ಚ್ ತಿಂಗಳ ಒಳಗಾಗಿ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಹಕ್ಕು ಪತ್ರ ನೀಡಲಾಗುತ್ತದೆ.ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಯಾವುದೇ ನಿವೇಶನ ಮತ್ತು ಮನೆ ಹೊಂದಿರಬಾರದು. ಒಂದು ವೇಳೆ ಅಂತಹ ದಾಖಲೆಗಳು ಕಂಡು ಬಂದರೆ ಸರ್ಕಾರದಿಂದ ನೀಡಿದ ಹಕ್ಕು ಪತ್ರ ವಜಾ ಮಾಡಲಾಗುವುದು. ಗ್ರಾಮೀಣ ಭಾಗದಲ್ಲಿ 30×40 ಮತ್ತು 50×80, ನಗರ ಪ್ರದೇಶದಲ್ಲಿ20×30 ಮತ್ತು 30×40 ಅಳತೆ ಸಕ್ರಮ ಮಾಡಲು ಅವಕಾಶವಿದೆ. ಅಳತೆಯ ಅನುಗುಣವಾಗಿ ಸಾಂಕೇತಿಕ ಶುಲ್ಕ ಪಡೆದು ಹಕ್ಕು ಪತ್ರ ನೀಡಲಾಗುತ್ತದೆ. ಶಾಸಕರು ಉಳಿದ ಅರ್ಜಿಗಳ ವಿಲೇವಾರಿ ಮಾಡಿ ತುರ್ತಾಗಿ ಹಕ್ಕು ಪತ್ರ ನೀಡಲು ಸೂಚಿಸಿದ್ದು 15 ರಿಂದ 20 ದಿನದಲ್ಲಿ ಎಲ್ಲಾವನ್ನು ಪೂರ್ಣಗೊಳಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಜಿ.ಟಿ.ಸುರೇಶ್, ಕಂದಾಯ ನಿರೀಕ್ಷಕ ಅಧಿಕಾರಿ ಶರಣಬಸವೇಶ್ವರ, ಜೆ.ಎನ್.ಕೋಟೆ ಗ್ರಾಮ ಪಂಚಾಯತಿ ಸದಸ್ಯರಾದ ಶಿವಣ್ಣ, ಶಿವಮೂರ್ತಿ,ಜೆ.ಎನ್.ಕೋಟೆ ಪಿಡಿಓ ನಿರ್ಮಾಲ, ಗ್ರಾಮ ಆಡಳಿತಧಿಕಾರಿಗಳಾದ ಶ್ರೀನಿವಾಸ್,ಪಾಂಡುರಂಗಪ್ಪ, ಅಣ್ಣೇಶ್ ಮತ್ತು ಫಲಾನುಭವಿಗಳು ಹಾಜರಿದ್ದರು.
Post Views:
451