ಪ್ರತಿಯೊಬ್ಬ ಅಧಿಕಾರಿಗಳು ಪ್ರಯತ್ನ ಮಾಡಿದರೆ ಮಾತ್ರ ಜಿಲ್ಲೆಯು ಉದ್ದಾರ ವಾಗಲಿದೆ. ಇಲ್ಲವಾದರೆ ಜಿಲ್ಲೆಯ ಉದ್ದಾರ ಸಾಧ್ಯವಿಲ್ಲ, ಅಲ್ಲದೆ ಅಧಿಕಾರಿಗೆ ನನ್ನ ಕಾಲದಲ್ಲಿ ಏನು ಕೊಡುಗೆ ನೀಡಿದೆ ಎಂದು ತಮ್ಮ ಮೊಮ್ಮಕ್ಕಳಿಗೆ ಹೇಳಬೇಕು ಆ ರೀತಿ ಕೆಲಸ ಮಾಡಬೇಕು. ಇದಕ್ಕೆ ಬದ್ದತೆ ಇರಬೇಕು ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲಿಕರಣ ಇಲಾಖೆಯ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡು ಘಟನೆ ಇಂದು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯಿತು.
ಅವರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ದಿಶಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಜನರ ಬಹು ದಿನಗಳ ಕನಸಾಗಿರುವ ಮೆಡಿಕಲ್ ಕಾಲೇಜು ಪ್ರಾರಂಭಿಸಲು ಕೇಂದ್ರ ಸರ್ಕಾರದಿಂದ ಸ್ಥಳ ಪರಿಶೀಲನೆ ಬರಬೇಕೆಂದು ಕಾಯುತ್ತಿದ್ದಾರೆ, ಜಿಲ್ಲೆಯ ಆಧಿಕಾರಿಗಳು ಮಾತ್ರ ಸ್ಥಳ ಗೊತ್ತು ಮಾಡಲು ನಿರಾಸಕ್ತಿ ವಹಿಸುತ್ತಿದ್ದಾರೆ ಎಂದು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸಚಿವರು ಅಸಮಧಾನ ವ್ಯಕ್ತಪಡಿಸಿದರು.
ಮೆಡಿಕಲ್ ಕಾಲೇಜು ಪ್ರಾರಂಭಕ್ಕೆ ಏನೆಲ್ಲಾ ಕ್ರಮ ಕೈಗೊಂಡಿದ್ದಿರಿ ಎಂದು ಜಿಲ್ಲಾ ಆಸ್ಪತ್ರೆ ಸರ್ಜನ್ ಬಸವರಾಜ್ ಅವರಿಗೆ ಸಚಿವರು ಪ್ರಶ್ನಿಸಿದಾಗ, ಕುಂಚಿಗನಾಳ್ ಸಮೀಪ ಮೂರವರೆ ಎಕರೆ ಜಮೀನನ್ನು ಗುರುತಿಸಲಾಗಿದೆ ಎಂದು ಉತ್ತರಿಸುತ್ತಲೇ ಕೆಂಡಮಂಡಲವಾದ ಸಚಿವರು, ಮೆಡಿಕಲ್ ಕಾಲೇಜಿನ ನಿರ್ಮಾಣಕ್ಕೆ ಇಂಗಳದಾಳ್ ಸಮೀಪ 92 ಎಕರೆ ಜಮೀನು ಇದ್ದರು ಕೂಡ ಮೂರುವರೆ ಎಕರೆ ಜಮೀನು ನೋಡಲಾಗಿದೆ ಎಂದು ಹೇಳುತ್ತಿರಾ ಇದೇನಾ ನಿಮಗೆ ಕೆಲಸದ ಮೇಲೆ ಇರುವ ಬದ್ದತೆ ? ಎಂದು ಕಿಡಿಕಾರಿದರು.
ಮೆಡಿಕಲ್ ಕಾಲೇಜಿಗೆ ವಿಶಾಲವಾದ ಸ್ಥಳ ಬೇಕಿದೆ. ಹೀಗಿರುವಾಗ ನೀವು ಚಿಕ್ಕದಾದ ಸ್ಥಳ ತೋರಿಸಿದರೆ ಯಾವ ರೀತಿ ಮೆಡಿಕಲ್ ಕಾಲೇಜು ನಿರ್ಮಾಣ ಆಗಲಿದೆ. ಯಾವುದೇ ಯೋಜನೆ ಬಗ್ಗೆ ಸಮಗ್ರವಾಗಿ ಕೆಲಸ ಮಾಡಿದರೆ ಮಾತ್ರ ವೇಗ ದೊರೆಯುತ್ತದೆ. ಅದನ್ನು ಬಿಟ್ಟು ತಾತ್ಸಾರ ತೋರಿದರೆ ಜಿಲ್ಲೆ ಯಾವಾಗ ಉದ್ದಾರ ಆಗಬೇಕು ಎಂದು ಅಸಮಧಾನ ವ್ಯಕ್ತಪಡಿಸಿದರು.