ಸನ್ಯಾಸತ್ವ ತ್ಯಜಿಸಲು ಅವರನ್ನ ಕಾಡಿತ್ತಾ ಯುವತಿ ಪ್ರೀತಿ ಯುವತಿ ಜೊತೆ ನಾಪತ್ತೆಯಾದ್ರಾ ಸ್ವಾಮೀಜಿ? ಮಠದಲ್ಲಿ ಸಿಕ್ಕಿದ ಪತ್ರದಲ್ಲಿದೆ ಚಿದಂಬರ ರಹಸ್ಯ!!
ಸ್ವಾಮೀಜಿಯೊಬ್ಬರು ಸನ್ಯಾಸತ್ವಕ್ಕೆ ತಿಲಾಂಜಲಿ ಇಟ್ಟು , ಮಠದಿಂದ ನಾಪತ್ತೆಯಾಗಿದ್ದಾರೆ. ಜೊತೆಗೆ ತಾವು ಬರೆದಿರುವ ಪತ್ರದಲ್ಲಿ ಮಠ ಬಿಡಲು ಕಾರಣವನ್ನು ತಿಳಿಸಿದ್ದಾರೆ. ಸ್ವಾಮೀಜಿ ನಾಪತ್ತೆ ಹಿಂದೆ ‘ಆಕೆ’ಯ ಪ್ರೀತಿಯ ನೆರಳು ಗೋಚರಿಸುತ್ತಿದೆ!
ಮಾಗಡಿ, ರಾಮನಗರ: ಸನ್ಯಾಸಿ ಅಂದರೆ ಸಂಸಾರ ಸುಖ, ಭೋಗಗಳನ್ನು ತ್ಯಜಿಸಿ, ಮದ, ಮೋಹ, ಕಾಮ, ಕ್ರೋಧಗಳೆಂದ ಅರಿಷಡ್ವರ್ಗಗಳನ್ನು ಗೆದ್ದವನು. ಒಂದು ಧರ್ಮ ಸಮುದಾಯಕ್ಕೆ ದಾರಿ ತೋರಿಸುವ, ಮಾರ್ಗದರ್ಶನ ಮಾಡುವ ಕೇಂದ್ರ. ಇಲ್ಲಿನ ಸ್ವಾಮೀಜಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಇರುತ್ತದೆ. ಪೀಠ ಅಲಂಕರಿಸುವ ಸ್ವಾಮೀಜಿ ಸಮಾಜಕ್ಕೆ ಮಾರ್ಗ ದರ್ಶಿಯಾಗಿ ಮಾದರಿಯಾಗಿ ಬದುಕಬೇಕು. ಆದರೆ ರಾಮನಗರದ ಮಾಗಡಿ ತಾಲೂಕಿನ ಸೋಲೂರಿನ ಗದ್ದುಗೆ ಮಠದಲ್ಲಿ ಎಲ್ಲವನ್ನು ಗಾಳಿಗೆ ತೂರಲಾಗಿದೆ.
ಈ ಮಠದ ಶಿವಮಹಂತ ಸ್ವಾಮೀಜಿಯವರು ಇದೀಗ ಸನ್ಯಾಸತ್ವಕ್ಕೆ ತಿಲಾಂಜಲಿನಿಟ್ಟು ಮಠ ತೊರೆದು ನಾಪತ್ತೆಯಾಗಿದ್ದಾರೆ. ಜೊತೆಗೆ ಪತ್ರವೊಂದನ್ನು ಬರೆದಿಟ್ಟು, ತಾವು ಮಠ ಬಿಟ್ಟು ಹೋಗಲು ಕಾರಣವಾದ ವಿಚಾರವನ್ನು ತಿಳಿಸಿದ್ದಾರೆ. ಸ್ವಾಮೀಜಿ ನಾಪತ್ತೆಯಿಂದಾಗಿ ಮಠದ ಭಕ್ತರು, ಗ್ರಾಮಸ್ಥರು ಆಘಾತಕ್ಕೆ ಒಳಗಾಗಿದ್ದಾರೆ.
ಸೋಲೂರಿನ ಗದ್ದುಗೆ ಮಠದ ಶಿವಮಹಂತ ಸ್ವಾಮೀಜಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಇವರ ಮೂಲ ಅಥವಾ ಗೃಹಸ್ಥಾಶ್ರಮದ ಹೆಸರು ಹರೀಶ್. ಇದೀಗ ಗದ್ದುಗೆ ಮಠದಲ್ಲಿದ್ದ ಶಿವಮಹಂತ ಸ್ವಾಮೀಜಿ ಸನ್ಯಾಸತ್ವಕ್ಕೆ ತಿಲಾಂಜಲಿ ಇಟ್ಟು, ಪತ್ರ ಬರೆದಿಟ್ಟು ಮಠದಿಂದ ನಾಪತ್ತೆಯಾಗಿದ್ದಾರೆ.
ಯುವತಿ ಜೊತೆಗೆ ನಾಪತ್ತೆಯಾದರಾ ಸ್ವಾಮೀಜಿ?: ಹೌದು, ಇಂಥದ್ದೊಂದು ವದಂತಿ ಇದೀಗ ಮಠದ ಭಕ್ತರಲ್ಲಿ ಹಾಗೂ ಗ್ರಾಮದಲ್ಲಿ ಹರಡಿದೆ. ಸ್ವಾಮೀಜಿ ಯುವತಿಯೊಬ್ಬಳ ಜೊತೆ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಮದುವೆಯಾಗಿದ್ದವಳ ಜೊತೆ ಸ್ವಾಮೀಜಿ ತೆರಳಿದ್ದಾರೆ ಅಂತ ಹೇಳಲಾಗುತ್ತಿದೆ.
ಹರೀಶ್ ಇವರ ಮೂಲ ಹೆಸರಾಗಿದ್ದು, ಸ್ವಾಮೀಜಿಯಾದ ಮೇಲೆ ಶಿವಮಹಂತ ಸ್ವಾಮೀಜಿ ಎಂದು ಹೆಸರು ನೀಡಲಾಗಿತ್ತು. ಕಳೆದ ಎರಡು ವರ್ಷಗಳ ಹಿಂದಷ್ಟೇ ಮಠದ ಪೀಠಾಧಿಪತಿಯಾಗಿ ನೇಮಕಗೊಂಡಿದ್ದರು. ಇದೀಗ ಇವರು ಮದುವೆಯಾಗಿ ಒಂದೂವರೆ ತಿಂಗಳಾಗಿದ್ದ ಯುವತಿ ಒಬ್ಬಳ ಜೊತೆಗೆ ಎಸ್ಕೇಪ್ ಆಗಿದ್ದಾರೆ ಎಂಬ ವದಂತಿ ಹಬ್ಬಿದೆ. ಇನ್ನು ಸ್ವಾಮೀಜಿ ಮಠದಿಂದ ತೆರಳುವ ಮುನ್ನ ಪತ್ರವೊಂದನ್ನು ಬರೆದಿದ್ದಾರೆ.
ನನ್ನನ್ನು ಹುಡುಕಬೇಡಿ ಅಂತ ಮನವಿ: ತನಗೆ ಸನ್ಯಾಸತ್ವ ಇಷ್ಟವಿಲ್ಲ, ನಾನು ಮಠ ತೊರೆದು ಹೋಗ್ತಿದ್ದೀನಿ ಎಂದು ಹೇಳಿ ಪತ್ರ ಬರೆದು ಪರಾರಿಯಾಗಿದ್ದಾರೆ. ನಾನು ಯಾರ ಕೈಗೂ ಸಿಗುವುದಿಲ್ಲ ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಪತ್ರದಲ್ಲಿ ಹೇಳಿದ್ದಾರೆ.
ಸ್ವಾಮೀಜಿ ಬರೆದ ಪತ್ರದಲ್ಲಿ ಏನಿದೆ?: ನಾನು ನನ್ನ ಸ್ವಾಮೀಜಿ ಪಟ್ಟವನ್ನುತೊರೆಯುತ್ತಿದ್ದೇನೆ. ಕಾರಣ ನನ್ನ ಜೀವನದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಈ ಕಾರಣಕ್ಕಾಗಿ ನಾನು ಇದನ್ನೆಲ್ಲಾ ಬಿಟ್ಟು ದೂರ ಹೋಗುತ್ತಿದ್ದೇನೆ. ನನಗೆ ಈ ಜೀವನ ಜಿಗುಪ್ಸೆ ಉಂಟು ಮಾಡಿದೆ. ಈ ಕಾರಣ ನಿಮಗೆಲ್ಲ ಗೊತ್ತಿದೆ ಅಂತ ಭಾವಿಸುತ್ತೇನೆ. ದಯವಿಟ್ಟು ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ. ನಾನು ಕಾವಿ ಬಟ್ಟೆಯನ್ನು ತ್ಯಜಿಸಿದ ಮೇಲೆ ಮತ್ತೆಂದೂ ತೊಡುವುದಿಲ್ಲ. ಹಾಗೇನಾದರೂ ನನ್ನನ್ನು ಹುಡುಕುವ ಪ್ರಯತ್ನ ಮಾಡಿದರೆ ನನ್ನ ಹೆಣವನ್ನು ನೀವು ನೋಡುತ್ತೀರಿ ಅಂತ ಪತ್ರದಲ್ಲಿ ಸ್ವಾಮೀಜಿ ಎಚ್ಚರಿಸಿದ್ದಾರೆ.
ಈ ಹಿಂದೆ ಯುವತಿಯನ್ನು ಪ್ರೀತಿಸುತ್ತಿದ್ದ ಸ್ವಾಮೀಜಿ: ಈ ಹಿಂದೆ ಇದೇ ಸ್ವಾಮೀಜಿ ಬೇರೆ ಮಠದಲ್ಲಿರುವಾಗ ಯುವತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದರು ಎನ್ನಲಾಗಿದೆ. ಆಕೆಗೆ ಕಳೆದ ಒಂದೂವರೆ ತಿಂಗಳ ಹಿಂದೆ ಮದುವೆಯಾಗಿತ್ತು ಅಂತ ಹೇಳಲಾಗುತ್ತಿದೆ. ಅದೇ ಹುಡುಗಿ ಜೊತೆ ಶಿವಮಹಂತಸ್ವಾಮಿ ಅಲಿಯಾಸ್ ಹರೀಶ್ ಪರಾರಿಯಾಗಿರುವ ಶಂಕೆ ಇದೆ. ಇದೀಗ ಕುದೂರು ಠಾಣೆಯಲ್ಲಿ ಸ್ವಾಮೀಜಿ ಮಿಸ್ಸಿಂಗ್ ಕೇಸ್ ದಾಖಲಾಗಿದೆ.