ಜಮೀನಿನಲ್ಲಿರುವ ಮನೆಗೆ ನುಗ್ಗಿ ಮನೆ ಮಾಲೀಕರನ್ನು ಹಗ್ಗದಿಂದ ಕೈಕಾಲು ಕಟ್ಟಿ ಹಾಕಿ ನಗದು ಬೆಳ್ಳಿ ಬಂಗಾರದ ಒಡವೆಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದ ದರೋಡೆಕೋರರನ್ನು ತುರುವನೂರು ಪೋಲಿಸರು ಬಂಧಿಸಿದ್ದಾರೆ.
ಚಿತ್ರದುರ್ಗ ತಾಲೂಕಿನ ತುರುವನೂರು ವ್ಯಾಪ್ತಿಯ ಬಂಗಾರಕ್ಕನಹಳ್ಳಿಯ ಜಮೀನಿನಲ್ಲಿ ವಾಸವಿರು ತಿಪ್ಪೇಸ್ವಾಮಿ ಎನ್ನುವವರ ಮನೆಗೆ ನುಗ್ಗಿದ ಮೂರು ಜನರು ಮನೆಯಲ್ಲಿದ್ದ 3 ಲಕ್ಷ 37 ಸಾವಿರ ಮೌಲ್ಯದ ಒಡವೆಗಳು, ಎರಡು ಮೊಬೈಲ್ ಒಂದು ಲಕ್ಷ ನಗದು ದೋಚಿದ ಘಟನೆಯೂ 28-11-21 ರಂದು ನಡೆದಿರುತ್ತದೆ.ಇದರ ಬಗ್ಗೆ ತಿಪ್ಪೇಸ್ವಾಮಿ ಅವರು ತುರುವನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತಾರೆ.
ಪ್ರಕರಣ ದಾಖಲಿಸಿಕೊಂಡ ಪೋಲಿಸರು ಅಡಿಷನಲ್ ಎಸ್ಪಿ ಮಹಾನಿಂಗ ನಂದಗಾವಿ ಮಾರ್ಗದರ್ಶನದಲ್ಲಿ ಒಂದು ತಂಡವನ್ನು ರಚಿಸುತ್ತಾರೆ. ನಂತರ ಈ ತಂಡವು ಮಾಹಿತಿಯನ್ನು ಕಲೆ ಹಾಕಿದ್ದು, ಆರೋಪಿಗಳಾದ, ಶಿವಧ್ವಜ,ಅಭಿಷೇಕ್ @ಅಭಿ, ವಿಕಾಸ್ @ ವಿಕ್ಕಿ, ವಜ್ರಮಣಿ @ ವಜ್ರ, ಹಾಗೂ ತಿಪ್ಪೇಸ್ವಾಮಿ @ ಗಿಡ್ಡ, ಎಂಬ ಐದು ಜನರನ್ನು ಬಂಧಿಸಿ ಅವರನ್ನು ವಿಚಾರಣೆಗೊಳಪಡಿಸಿ ಅವರಿಂದ 40 ಗ್ರಾಂ ತೂಕದ ಮಾಂಗಲ್ಯ ಸರ, 20 ಗ್ರಾಂ ತೂಕದ ಕೊರಳಚೈನ್, 5 ಗ್ರಾಂ ತೂಕದ ಬಂಗಾರದ ಓಲೆ, 5 ಗ್ರಾಂ ತೂಕದ ಬಂಗಾರದ ಗುಂಡು ಡ್ರಾಪ್ಸ್, ಮತ್ತು 07 ಗ್ರಾಂ ತೂಕದ ಬೆಂಡೋಲೆ ಝುಮುಕಿ ಇವುಗಳ ಮೌಲ್ಯ 3 ಲಕ್ಷದ 37 ಸಾವಿರ, ಮತ್ತು 3 ಜೊತೆ 240 ಗ್ರಾಂ ತೂಕದ ಕಾಲು ಚೈನ್ ಗಳು, 1 ಲಕ್ಷ ನಗದು, 7 ಲಕ್ಷ ಮೌಲ್ಯದ ಈಟಿಯೋಸ್ ಕಾರು, ಆರು ಮೊಬೈಲ್ ಫೋನ್ ಗಳು ಕೃತ್ಯಕ್ಕೆ ಬಳಸಿದ್ದ ಚಾಕು ಚೂರಿ, ಹುರಿ ಮಾಸ್ಕ್ ಗ್ಲೌಸ್ ಮತ್ತು ಟೇಪ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೇಲಿನ ಎಲ್ಲಾ ವಸ್ತುಗಳ ಬೆಲೆಯೂ ಒಟ್ಟಾಗಿ 11 ಲಕ್ಷ 97 ಸಾವಿರದ 800 ರೂಪಾಯಿಗಳಾಗಿರುತ್ತದೆ. ಇಂತವರನ್ನು ಬಂಧಿಸಿ ಉತ್ತಮ ಕಾರ್ಯ ಮಾಡಿರುವ ಪೋಲಿಸರನ್ನು ಎಸ್ಪಿ ರಾಧಿಕಾ ಶ್ಲಾಘಿಸಿದ್ದಾರೆ.