ವಿರೋಧ ಪಕ್ಷದವರು ನೀಡಿದಕ್ಕಿಂತ ಹೆಚ್ಚಿನ ಹಣವನ್ನು ನಮ್ಮ ಕ್ಷೇತ್ರದಲ್ಲಿ ನೀಡಬೇಕು, ಇದರ ಬಗ್ಗೆ ಅಜ್ಜ ತಿಳಿಸಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಇದರ ಬಗ್ಗೆ ಚುನಾವಣಾ ಆಯೋಗ ಕ್ರಮವನ್ನು ಕೈಗೊಂಡು, ಈ ಮಾತಾಡಿದವರು ಹಾಗೂ ಬಿಜೆಪಿ ಅಭ್ಯರ್ಥಿ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು, ಇದರ ಬಗ್ಗೆ ತನಿಖೆಯಾಗಬೇಕು, ಬಿಜೆಪಿ ಪದಾಧಿಕಾರಿಗಳ ಮೇಲೆ ಕಣ್ಗಾವಲು ಸಮಿತಿ ರಚಿಸಬೇಕೆಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಸಂಯೋಜಕ ಶಿವುಯಾದವ್ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೊಳಕಾಲ್ಮೂರಿನಲ್ಲಿ ಇತ್ತೀಚೆಗೆ ನಡೆದ ಬಿಜೆಪಿಯ ಸಭೆಯಲ್ಲಿ ಮೋರ್ಚಾದ ಅಧ್ಯಕ್ಷ ತಿಪ್ಪೇಸ್ವಾಮಿ ಸಭೆಯಲ್ಲಿ ಈ ಮಾತಾಡಿದ್ದಾರೆ, ನಮ್ಮ ಕ್ಷೇತ್ರದಲ್ಲಿ ಹಣ ಇಲ್ಲದಿದ್ದರೆ ನಡೆಯುವುದಿಲ್ಲ, ವಿರೋಧ ಪಕ್ಷದವರು 500 ರೂ, ನೀಡಿದರೆ ನಾವು ಅದಕ್ಕಿಂತ ಹೆಚ್ಚಾಗಿ ನೀಡಬೇಕಿದೆ. ವಿರೋಧ ಪಕ್ಷದವರು ಏನು ನೀಡದಿದ್ದರೂ ಸಹಾ ನಾವುಗಳು 100 ರೂಗಳನ್ನಾದರೂ ನೀಡಬೇಕಿದೆ ಎಂದು ಅಜ್ಜ ಹೇಳಿದ್ದಾರೆ ಎಂಬ ಮಾಹಿತಿ ನೀಡುವ ವಿಡಿಯೋ ಇತ್ತಿಚೆಗೆ ಎಲ್ಲಾ ಕಡೆ ವೈರಲ್ ಆಗಿದೆ. ಈಬಗ್ಗೆ ಇದುವರೆವಿಗೂ ಸಹಾ ಚುನಾವಣಾ ಆಯೋಗ ಏನು ಕ್ರಮ ಕೈಗೊಂಡಿಲ್ಲ, ಇದು ಚುನಾವಣಾ ಆಯೋಗವನ್ನು ತಲುಪಿಲ್ಲವೇ ಅಥವಾ ಚುನಾವಣಾ ಆಯೋಗ ಬಿಜೆಪಿ ಪರವಾಗಿ ಕೆಲಸವನ್ನು ಮಾಡುತ್ತೀದ್ದೇಯೇ ಎಂದು ಪ್ರಶ್ನಿಸಿದರು.
ಚುನಾವಣೆಯನ್ನು ಗೆಲ್ಲಲೇ ಬೇಕು ಎಂಬ ಹಠದಲ್ಲಿರುವ ಬಿಜೆಪಿ ವಾಮಮಾರ್ಗದಲ್ಲಿ ಗೆಲುವನ್ನು ಸಾಧಿಸಲು ಹೂರಟಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಇದರ ಬಗ್ಗೆ ಚುನಾವಣಾ ಆಯೋಗ ಗಮನ ನೀಡಬೇಕಿದೆ ಬಿಜೆಪಿ ಪದಾಧಿಕಾರಿಗಳ ಮೇಲೆ ನಿಗಾವನ್ನು ಇರಿಸಲು ಕಣ್ಗಾವಲು ಸಮಿತಿ ರಚಿಸಬೇಕು, ಈ ಮಾತಾಡಿರುವ ತಿಪ್ಪೇಸ್ವಾಮಿ ಮತ್ತು ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರ ಮೇಲೆ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬೇಕು, ಇದರ ಬಗ್ಗೆ ಕೋಲಂಕುಷವಾಗಿ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದು, ಇಲ್ಲಿಗೆ ಎಲೆಕ್ಟ್ರೋ ಬಾಂಡ್ನಿಂದ ಬಂದ ಹಣ ಇಲ್ಲಿಗೆ ಬರುವ ನಿರೀಕ್ಷೆ ಇದೆ ಈ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಎಚ್ಚತ್ತೆಕೊಳ್ಳಬೇಕಿದೆ ಎಂದು ಶಿವುಯಾದವ್ ತಿಳಿಸಿದರು.ಗೋಷ್ಟಿಯಲ್ಲಿ ಸೈಯದ್ ವಲಿ ಖಾದ್ರಿ ರವೀಶ್ ಭಾಗವಹಿಸಿದ್ದರು.