ಗಣತಂತ್ರ ದಿವಸ ಅದ್ಧೂರಿ ಆಚರಿಸದಿರುವುದು ನೋವಿನ ಸಂಗತಿ;ಎಚ್.ಆಂಜನೇಯ

ರಾಜ್ಯ

ಗಣತಂತ್ರ ದಿವಸ ಅದ್ಧೂರಿ ಆಚರಿಸದಿರುವುದು ನೋವಿನ ಸಂಗತಿ;ಎಚ್.ಆಂಜನೇಯ

ಸರ್ವಶ್ರೇಷ್ಠ ಸಂವಿಧಾನ ರಚಿಸಿ 75 ವರ್ಷ ಕಳೆದಿದೆ. ಈ ದಿನವನ್ನು ಕೇಂದ್ರ ಸರ್ಕಾರ ಅದ್ಧೂರಿಯಾಗಿ ಆಚರಿಸದಿರುವುದು ಅತ್ಯಂತ ನೋವಿನ ಸಂಗತಿ ಎಂದು ಕೆಪಿಸಿಸಿ ಉಪಾಧ್ಯಕ್ಷ ಮಾಜಿ ಸಚಿವ ಎಚ್.ಆಂಜನೇಯ ಬೇಸರ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತಾಡಿದರು.ಮಾಜಿ ಪ್ರಧಾನಿ ಜವಹಾರ್ ಲಾಲ್ ನೆಹರು ಭಾರತದ ಮೊದಲನೇ ಕಾನೂನು ಮಂತ್ರಿಯಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನೇಮಕ ಮಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ವಿವಿಧ ದೇಶಗಳನ್ನು ಸುತ್ತಿ ಕಾನೂನು ಅಧ್ಯಯನ ಮಾಡಿ ಸರ್ವರ ಏಳಿಗೆಗೆ ಇಡೀ ವಿಶ್ವವೇ ಮೆಚ್ಚುವಂತ ಸಂವಿಧಾನ ರಚಿಸಿ, ಅರ್ಪಿಸಿ ಇಂದಿಗೆ 75 ವರ್ಷ ಕಳೆಯಿತು.ಈ ಸಾಧನೆ ದಿನವನ್ನು ದೇಶದ ಪ್ರಧಾನಿಯವರು ರಾಮ ಮಂದಿರದ ಉದ್ಘಾಟನೆಯ ರೀತಿ ಅದ್ಧೂರಿಯಾಗಿ ಆಚರಿಸಬೇಕಿತ್ತು. ಆದರೆ ಆಚರಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶಕ್ಕೆ ಸ್ವತಂತ್ರ ಲಭಿಸಲು ಕಾರಣರಾದ ಮತ್ತು ದೇಶವನ್ನು ಅಭಿವೃದ್ಧಿಯತ್ತ ಸಾಗಲು ಕಾರಣರಾದ ಮಹಾತ್ಮಗಾಂಧಿ, ಪಂಡಿತ್ ಜವಹಾರ್ ಲಾಲ್ ನೆಹರು, ಲಾಲ್ ಬಹದೂರ್ ಶಾಸ್ತ್ರಿ, ಇಂದಿರಾಗಾಂಧಿಯವರನ್ನು ನೆನಪೇ ಇಲ್ಲದಂತಹ ಸ್ಥಿತಿ ನಿರ್ಮಾಣ ಮಾಡುತ್ತಿರುವುದು ದುಃಖಕರ ಎಂದರು.

 

 

 

ಬ್ರಿಟೀಷರು 300 ವರ್ಷಗಳ ಕಾಲ ಈ ರಾಷ್ಟ್ರವನ್ನು ಆಳ್ವಿಕೆ ನಡೆಸಿ ನಮ್ಮ ಸಂಪತ್ತನ್ನೆಲ್ಲ ದೋಚಿಕೊಂಡು ಹೋದರು. ಗುಲಾಮಗಿರಿಗೆ ಒಳಪಟ್ಟಿದ್ದ ಜನರನ್ನು ಬಿಡುಗಡೆಗೊಳಿಸಲು ಮಹಾತ್ಮಗಾಂಧಿ ಅವರ ನೇತೃತ್ವದಲ್ಲಿ ಚಳವಳಿ ನಡೆದಿದ್ದರಿಂದ ನಮಗೆ ಸ್ವಾತಂತ್ರ್ಯ ಲಭಿಸಿತು.
ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಜವಹಾರ್ ಲಾಲ್ ನೆಹರು ಪ್ರಧಾನಮಂತ್ರಿಯಾದ ಸಮಯದಲ್ಲಿ ಬಟ್ಟೆಗೆ ಹೊಲಿಗೆ ಹಾಕಿಸುವ ಯಂತ್ರ ಸೇರಿದಂತೆ ವಿಮಾನ, ಸುಸಜ್ಜಿತ ರಸ್ತೆಯೂ ನಮ್ಮಲ್ಲಿ ಇರಲಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದು ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಸದೃಢ ಭಾರತದ ನಿರ್ಮಾಣಕ್ಕೆ ನಾಂದಿ ಹಾಡಿದರು ಎಂದು ನೆನಪಿಸಿದರು.

ಸ್ವತಂತ್ರ ಚಳವಳಿಯಲ್ಲಿ ಬ್ರಿಟೀಷರ ಗುಂಡಿಗೆ ಎದೆಗೊಡುವ ಸಮಯದಲ್ಲಿ ಇವರು ಪರಿಶಿಷ್ಟ ಜಾತಿ, ಪಂಗಡದವರು, ಮುಸ್ಲಿಮರು, ಹಿಂದೂ, ಸಿಖ್ಖರು ಎನ್ನುವುದನ್ನು ನೋಡಲಿಲ್ಲ. ನಮಗೆ ಭಾರತ ಬ್ರಿಟೀಷರ ಸಂಕೋಲೆಯಿಂದ ಮುಕ್ತಿ ಹೊಂದಿ ಸ್ವತಂತ್ರ ಆಗಬೇಕು.ಬ್ರಿಟಿಷರು ನಮ್ಮ ದೇಶವನ್ನು ಬಿಟ್ಟು ತೊಲಗಬೇಕು ಎನ್ನುವ ಸಂಕಲ್ಪದಿಂದ ನಮ್ಮ ಪೂಜ್ಯರ ಹೋರಾಟ ಮತ್ತು ತ್ಯಾಗದ ಫಲವಾಗಿ ಸ್ವತಂತ್ರ ಸಿಕ್ಕಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ ಪೀರ್, ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಸಂಪತ್ ಕುಮಾರ್, ವಿಧಾನಪರಿಷತ್ ಮಾಜಿ ಸದಸ್ಯೆ ಜಯಮ್ಮ ಬಾಲರಾಜ್, ಜಿಲ್ಲಾ ಮಾಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ನಂದಿನಿಗೌಡ, ಜಿಪಂಮಾಜಿ ಸದಸ್ಯ ಆರ್.ನರಸಿಂಹರಾಜು, ಸಂಪತ್ ಕುಮಾರ್ ಮತ್ತಿತರರಿದ್ದರು.

 

Leave a Reply

Your email address will not be published. Required fields are marked *