ಹೊಳಲ್ಕೆರೆ : ಇದೇ ತಿಂಗಳ ಹತ್ತೊಂಬತ್ತರಂದು ನಾಮಪತ್ರ ಸಲ್ಲಿಸುತ್ತೇನೆ. ದೊಡ್ಡ ಸಂಖ್ಯೆಯಲ್ಲಿ ನೀವುಗಳೆಲ್ಲಾ ಬಂದು ನನ್ನನ್ನು ಆರ್ಶೀವದಿಸಿ ಎಂದು ಹೊಳಲ್ಕೆರೆ ಕ್ಷೇತ್ರದ ಬಿಜೆಪಿ. ಅಭ್ಯರ್ಥಿ ಎಂ.ಚಂದ್ರಪ್ಪ ಜನತೆಯಲ್ಲಿ ಮನವಿ ಮಾಡಿದರು.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಭರಮಸಾಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸೋಮವಾರ ಮತಯಾಚನೆ ಮಾಡಿ ಮಾತನಾಡಿದ ಎಂ.ಚಂದ್ರಪ್ಪ ತುಂಗಭದ್ರಾ, ಹಿರಿಯೂರಿನ ವಾಣಿವಿಲಾಸ ಸಾಗರದಿಂದ ನೀರು ತಂದು ತಾಲ್ಲೂಕಿನಾದ್ಯಂತ ಪ್ರತಿ ಮನೆ ಮನೆಗೆ ಶುದ್ದ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಹೊಸಹಳ್ಳಿ, ಕೋಗುಂಡೆ, ಭರಮಸಾಗರ, ಬಹದ್ದೂರ್ಘಟ್ಟದಲ್ಲಿ ನ್ಯಾಷನಲ್ ಹೈವೆ ಮಾದರಿಯಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. 496 ಹಳ್ಳಿಗಳಲ್ಲಿ ಸಿ.ಸಿ.ರಸ್ತೆ, ಟಾರ್ ರಸ್ತೆ ನಿರ್ಮಿಸಲಾಗಿದೆ. ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ 600 ಕೋಟಿ ರೂ.ಗಳನ್ನು ಮಂಜೂರು ಮಾಡಿಸಿಕೊಂಡು ತಾಲ್ಲೂಕಿನ ಎಲ್ಲಾ ಕೆರೆ ಕಟ್ಟೆಗಳಿಗೆ ನೀರು ತುಂಬಿಸಿದ್ದರಿಂದ ಎಲ್ಲಾ ಕಡೆ ಐವತ್ತು ಅರವತ್ತು ಅಡಿ ಬೋರ್ ಕೊರೆಸಿದರೆ ಸಾಕು ನೀರು ಸಿಗುತ್ತದೆ. ಅಷ್ಟರ ಮಟ್ಟಿಗೆ ಅಂರ್ತಜಲ ವೃದ್ದಿಯಾಗಿದೆ ಎಂದು ಹೇಳಿದರು.
ನಾಲ್ಕು ಸಾವಿರ ಕೋಟಿ ರೂ.ಗಳ ಅನುದಾನ ತಂದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಹಗಲು-ರಾತ್ರಿ ಶ್ರಮಿಸಿದ್ದೇನೆ. ಇಲ್ಲಿಂದ ಗೆದ್ದು ಹೋಗಿ ಮಂತ್ರಿಯಾಗಿದ್ದವರು ಏನು ಮಾಡಿದರು ಎನ್ನುವುದನ್ನು ನೀವುಗಳು ಕೇಳಲೇಬೇಕು. ಅವರೆ ಗ್ಯಾರೆಂಟಿ ಇಲ್ಲದಿರುವಾಗ ಗ್ಯಾರೆಂಟಿ ಕಾರ್ಡ್ಗಳನ್ನು ಏಕೆ ಕೊಡಬೇಕು. ಗ್ಲಾಸ್ ಹಾಕಿಸಿ ಮನೆಯಲ್ಲಿ ಇಟ್ಟುಕೋ ಎಂದು ಹೇಳಿ ಕಳಿಸಿ ಎಂದು ಮತದಾರರನ್ನು ಜಾಗೃತಗೊಳಿಸಿದರು.
ಹಾಲಿದ್ದಾಗ ಹಬ್ಬ ಮಾಡು ಅಧಿಕಾರವಿದ್ದಾಗ ಕೆಲಸ ಮಾಡು ಎನ್ನುವ ಚಿಂತನೆಯಿಟ್ಟುಕೊಂಡು ಕ್ಷೇತ್ರದ ಜನರ ಹಿತಕ್ಕಾಗಿ ಪ್ರಾಮಾಣಿಕವಾಗಿ ದುಡಿಯುವ ರಾಜಕಾರಣಿ ನಾನು. 493 ಹಳ್ಳಿಗಳಲ್ಲಿ ಇಂತಹ ಕೆಲಸ ಮಾಡಿಲ್ಲ ಅನ್ನಂಗಿಲ್ಲ. ಎಪ್ಪತ್ತೈದು ವರ್ಷಗಳಿಂದ ಅನೇಕರು ಶಾಸಕರುಗಳಾಗಿದ್ದಾರೆ. ಯಾರು ಏನು ಕೆಲಸ ಮಾಡಿದ್ದಾರೆಂದು ನಾನು ಕೇಳಲ್ಲ. ಕೋವಿಡ್ ಸಂದರ್ಭದಲ್ಲಿ ಪ್ರಧಾನಿ ಮೋದಿರವರು ಮೂರು ವರ್ಷಗಳ ಕಾಲ 130 ಕೋಟಿ ಜನರಿಗೆ ಉಚಿತ ಪಡಿತರ ಕೊಟ್ಟಿದ್ದಾರೆ. ಮುಂದುವರೆದ ದೇಶಗಳಲ್ಲಿ ಇನ್ನು ಕೊರೋನಾ ನಿಯಂತ್ರಣಕ್ಕೆ ಬಂದಿಲ್ಲ. ಒಳ್ಳೊಳ್ಳೆ ವಿಜ್ಞಾನಿ ಹಾಗೂ ವೈದ್ಯರುಗಳನ್ನು ಕರೆಸಿಕೊಂಡು ಲಸಿಕೆ ಕಂಡುಹಿಡಿದು ಪ್ರತಿಯೊಬ್ಬರಿಗೂ ಮೂರು ಮೂರು ಸಾರಿ ಲಸಿಕೆ ನೀಡಿದ್ದರಿಂದ ಭಾರತದಲ್ಲಿ ಎಲ್ಲರೂ ಸುರಕ್ಷಿತವಾಗಿದ್ದಾರೆ. ಇಂತಹ ಪ್ರಧಾನಿಯನ್ನು ಪಡೆದಿರುವ ನಾವುಗಳು ಪುಣ್ಯವಂತರು. ಹಾಗಾಗಿ ಮೇ. 10 ರಂದು ನಡೆಯುವ ಚುನಾವಣೆಯಲ್ಲಿ ನನ್ನನ್ನು ಮತ್ತೊಮ್ಮೆ ಆಯ್ಕೆ ಮಾಡಿ ನಿಮ್ಮ ಸೇವೆ ಮಾಡಲು ವಿಧಾನಸೌಧಕ್ಕೆ ಕಳಿಸಿಕೊಡಿ ಎಂದು ಮತದಾರರಲ್ಲಿ ವಿನಂತಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ವಿ.ಶರಣಪ್ಪ, ಭರಮಸಾಗರ ಮಂಡಲ ಅಧ್ಯಕ್ಷ ಶೈಲೇಶ್, ಪುರಸಭೆ ಅಧ್ಯಕ್ಷ ಆರ್.ಎ.ಅಶೋಕ್, ಡಿ.ಎಸ್.ಪ್ರವೀಣ್ಕುಮಾರ್, ಡಿ.ಎಸ್.ಪ್ರದೀಪ್ಕುಮಾರ್, ಮಂಜುನಾಥ್, ಕಲ್ಲೇಶ್, ಮೋಹನ್, ಬಿಜೆಪಿ.ಮುಖಂಡರುಗಳು, ಕಾರ್ಯಕರ್ತರು, ಅಭಿಮಾನಿಗಳು, ಗ್ರಾಮದ ಹಿರಿಯರು ಮತ ಯಾಚನೆಯಲ್ಲಿ ಭಾಗವಹಿಸಿದ್ದರು.