ಚಿತ್ರದುರ್ಗ,ಡಿಸೆಂಬರ್29(ಸಂವಾ)
ಮನೆಯ ಈ ಸ್ವತ್ತು ಮಾಡಿಕೊಡಲು ನಾಲ್ಕು ಸಾವಿರ ಲಂಚ ಪಡೆಯುವಾಗ ಗ್ರಾಪಂ ಬಿಲ್ಚಕಲೆಕ್ಟರ್ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಚಿತ್ರದುರ್ಗ ದಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಹೋಬಳಿಯ ದಾಸಣ್ಣನ ಮಾಳಿಗೆಯ ತಿಪ್ಪಮ್ಮ ಕೊಂ ವೀರಣ್ಣ ಎನ್ನುವವರು ಮನೆಯ ಈ ಸ್ವತ್ತು ಮಾಡಿಸಲು ಹೋದಾಗ ಮನೆಯ ದಾಖಲಾತಿಗಳನ್ನು 27-12-21 ರಂದು ಬಿಲ್ ಕಲೆಕ್ಟರ್ ಬೊಮ್ಮನಾಯಕನಿಗೆ ನೀಡಿದ್ದು, ಬೊಮ್ಮನಾಯಕ ಈಸ್ವತ್ತು ಮಾಡಿಕೊಡಲು ನಾಲ್ಕು ಸಾವಿರ ಲಂಚದ ಹಣವನ್ನು ನೀಡುವಂತೆ ಹೇಳಿದ್ದಾನೆ. ಇಂದು ತಿಪ್ಪಮ್ಮ ಕೊಂ ವೀರಪ್ಪ ಚಿತ್ರದುರ್ಗ ಎಸಿಬಿ ಕಚೇರಿಗೆ ದೂರು ನೀಡಿದ್ದು, ದೂರಿನನ್ವಯ ಎಸಿಬಿ ಡಿವೈಎಸ್ಪಿ ಬಸವರಾಜ್ ಮುಗುದುಮ್ ಹಾಗೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಸಮಯದಲ್ಲಿ ದಾಸಣ್ಣನ ಮಾಳಿಗೆ ಗ್ರಾಪಂ ಕಚೇರಿಯಲ್ಲಿ ಬಿಲ್ ಕಲೆಕ್ಟರ್ ಬೊಮ್ಮ ನಾಯಕ ನಾಲ್ಕು ಸಾವಿರ ಲಂಚದ ಹಣ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾನೆ. ಲಂಚದ ಹಣ ಹಾಗೂ ಬೊಮ್ಮನಾಯಕನನ್ನು ವಶಕ್ಕೆ ಪಡೆದಿರುವ ಎಸಿಬಿ ಪೋಲಿಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದು, ತನಿಖೆ ಮುಂದುವರೆದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ