ಹಿರಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಹಾಜರಾತಿ ಪುಸ್ತಕದಲ್ಲಿ ಫೋರ್ಜರಿ ಸಹಿ ಮಾಡಿದ್ದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಏಳು ದಿನಗಳ ಒಳಗಾಗಿ ವರದಿಯನ್ನು ನೀಡಬೇಕು ಎಂದು ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಿಇಓ ಎಂಎಸ್ ದಿವಾಕರ್ ಸಿಬ್ಬಂದಿಗೆ ಸೂಚನೆ ನೀಡಿದ ಘಟನೆ ನಡೆಯಿತು.ಹಿರಿಯೂರು ತಾಲೂಕಿನ ಐಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿಇಓ ಎಂಎಸ್ ದಿವಾಕರ್ ದಿಢೀರ್ ಭೇಟಿ ನೀಡಿದರು. ಈ ಸಮಯದಲ್ಲಿ ಹಾಜರಾತಿ ಪುಸ್ತಕ ಪರಿಶೀಲಿಸಿದಾಗ ಕೆಲವರು ರಜೆ ಎಂದು ಬರೆದು ಅವರ ಹೆಸರಿನ ಮುಂದೆ ಸಹಿ ಮಾಡಿದ್ದಾರೆ. ಇನ್ನು ಕೆಲವರು ನಿಯೋಜನೆ ಮೇಲೆ ತೆರಳಿದ್ದಾರೆ ಎಂದು ನಮೂದಿಸಲಾಗಿದೆ. ಇಂತಹ ನಿಯೋಜನೆ ಸಕ್ಷಮ ಪ್ರಾಧಿಕಾರದಿಂದ ಆಗಿದೆಯೇ ಇಲ್ಲವೇ ಅವರಾಗೆ ಬರೆದುಕೊಂಡಿದ್ದಾರೆಯೇ ಎಂದು ಪರಿಶೀಲಿಸಿ ವರದಿ ನೀಡಿ, ಇನ್ನು ಗೈರು ಹಾಜರಾಗಿದ್ದರೂ ಕೂಡ ಅವರ ಹೆಸರಿನ ಮುಂದೆ ಸಹಿ ಮಾಡಲಾಗಿದೆ ಇಂಥವರ ಮೇಲೆ ಶಿಸ್ತು ಕ್ರಮ ಜರುಗಿಸಲು ಶಿಫಾರಸ್ಸು ಮಾಡುವಂತೆ ಸಿಇಓ ದಿವಾಕರ್ ಸೂಚಿಸಿದರು. ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿಯೋಜನೆ ಮತ್ತು ಗೈರು ಹಾಜರಿಯನ್ನು ಅನಧಿಕೃತ ಗೈರು ಹಾಜರಿ ಎಂದು ಪರಿಗಣಿಸಿ
ಶಿಸ್ತು ಕ್ರಮ ಜರುಗಿಸಲು ತಿಳಿಸಿ ಏಳು ದಿನಗಳ ಒಳಗಾಗಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.ನಂತರ ಆಯುಷ್ ವಿಭಾಗಕ್ಕೆ ಹೋಗಿ ಔಷಧಿಗಳ ದಾಸ್ತಾನು ಕೊಠಡಿಗೆ ಭೇಟಿ ನೀಡಿದ್ದು, ಅಲ್ಲಿ ಅವಧಿ ಮೀರಿದ ಔಷಧಿಗಳನ್ನು ಪರಿಶೀಲಿಸಿದರು. ಯಾವ ನಿಯಮದಡಿಯಲ್ಲಿ ಈ ಔಷಧಿಗಳನ್ನು ಸಂಗ್ರಹಿಸಲಾಗಿದೆ ಎಂದು ಏಳು ದಿನಗಳ ಒಳಗಾಗಿ ವರದಿ ನೀಡುವಂತೆ ಸೂಚಿಸಿದರು. ನಂತರ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳ ವೈದ್ಯಾಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಗೈರಾದ ಬಗ್ಗೆ ಶಿಸ್ತಿನ ಕ್ರಮಜರುಗಿಲಾಗುವುದು ಎಂದು ಎಂದು ಎಚ್ಚರಿಕೆಯನ್ನು ನೀಡಿದರು.