ಗ್ರಾಮ ಸಭೆಯಲ್ಲಿ ಆಯ್ಕೆಯಾದ ನಂತರ ಫಲಾನುಭವಿಗಳು ಕಡ್ಡಾಯವಾಗಿ ಮನೆ ನಿರ್ಮಿಸಿಕೊಳ್ಳಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸೂಚಿಸಿದರು. ತಾಲೂಕಿನ ಜೆ.ಎನ್.ಕೋಟೆ ಗ್ರಾಮ ಪಂಚಾಯತಿ ಮತ್ತು ಐನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಸವ ವಸತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆಯ ಗ್ರಾಮ ಸಭೆಯಲ್ಲಿ ಮನೆಯ ಫಲಾನುಭವಿಗಳ ಆಯ್ಕೆ ಮತ್ತು ಸಿ.ಸಿ. ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಜೆ.ಎನ್.ಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 30 ರಿಂದ 40 ಕೋಟಿ ವೆಚ್ಚದಲ್ಲಿ ಸಿ.ಸಿ.ರಸ್ತೆ, ಚಕ್ ಡ್ಯಾಂ,ಅಂಗನವಾಡಿಗೆ ಅಭಿವೃದ್ಧಿಗೆ ಹಣ ನೀಡಿದ್ದು ಕಾಮಗಾರಿ ಪೂರ್ಣಗೊಳಿಸಲಾಗಿದೆ. ಈಗ ಮತ್ತೆ ಅಪ್ಪರ್ ಭದ್ರಾ ಇಲಾಖೆಯಿಂದ 90 ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಮಾಡಲು ಚಾಲನೆ ನೀಡಿದ್ದೇನೆ. ಅದೃಷ್ಟ ಬೇಗ ಕಾಮಗಾರಿ ಪೂರ್ಣಗೊಳಿಸಲು ತಿಳಿಸಿದ್ದೇನೆ ಎಂದರು.
ಜೆ.ಎನ್.ಕೋಟೆ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಸೇರಿ ಪರಿಶಿಷ್ಟ ಜಾತಿ-60, ಪರಿಶಿಷ್ಟ ಪಂಗಡ- 50,ಸಾಮಾನ್ಯ -50 ಒಟ್ಟು 160 ಮನೆಗಳನ್ನು ನೀಡದ್ದೇನೆ. ಐನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ -65 ಪರಿಶಿಷ್ಟ ಪಂಗಡ -40, ಸಾಮಾನ್ಯ-50 ಒಟ್ಟು 155 ಮನೆಗಳು ನೀಡಲಾಗಿದೆ.ಗುಡ್ಡದರಂಗನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ-50 ಪರಿಶಿಷ್ಟ ಪಂಗಡ- 50 ಸಾಮಾನ್ಯ-30 ಒಟ್ಟು 130 ಮನೆಗಳ ನೀಡಿದ್ದೇನೆ.ಗ್ರಾಮ ಸಭೆಯಲ್ಲಿ ಮನೆಗಳನ್ನು ಬರೆಸಿದವರು ಮನೆ ಕಟ್ಟಿಕೊಳ್ಳಬೇಕು. ಸುಮ್ಮನೆ ಹೆಸರು ಬರೆಸಬಾರದು.ಜನರ ಅಗತ್ಯಕ್ಕೆ ತಕ್ಕಷ್ಟು ಮನೆ ನೀಡಿದ್ದು ಕಡಿಮೆ ಬಂದರೆ ವ್ಯವಸ್ಥೆ ಮಾಡಲಾಗುತ್ತದೆ.ಗ್ರಾಮ ಸಭೆ ಜನರ ಸಭೆಯಾಗಿರುತ್ತದೆ. ಯಾರು ಸಹ ರಾಜಕಾರಣ ಮಾಡಬಾರದು ಬಡವರಿಗೆ ಮತ್ತು ಅಗತ್ಯ ಇರುವವರಿಗೆ ಮನೆ ತಲುಪಬೇಕು ಎಂದು ತಿಳಿಸಿದರು.ತಮ್ಮ ಹೆಸರಿಗೆ ಖಾತೆ ಇದ್ದರೆ ಮಾತ್ರ ಮನೆಗಳಿಗೆ ಹೆಸರು ನೊಂದಾಯಿಸಿ ಮತ್ತು ಮನೆ ಪಡೆದು 10 ವರ್ಷ ಪೂರ್ಣವಾಗಿದ್ದರೆ ಮನೆ ಪಡೆಯಬಹುದು. ಜಮೀನಿನಲ್ಲಿ ಮನೆ ಕಟ್ಟಿಕೊಳ್ಳಲು ಅವಕಾಶವಿದ್ದು ಯಾರು ಬೇಕಾದರು ಮನೆ ಕಟ್ಟಿಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಜೆ.ಎನ್.ಕೋಟೆ ಗ್ರಾಮ ಪಂಚಾಯತಿ ಅಧ್ಯಕ್ಷ ವಿದ್ಯಾಶ್ರೀ ಮಂಜುನಾಥ್, ಐನಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ವೀಣಾ ದೇವರಾಜ್ ,ಗ್ರಾಮ ಸದಸ್ಯರಾದ ಶಿವಮೂರ್ತಿ, ಪಾಲಯ್ಯ, ತಿಮ್ಮಣ್ಣ, ಈರಣ್ಣ , ಮಲ್ಲಪ್ಪ, ಪವಿತ್ರ, ಶರಣಪ್ಪ, ಉಮೇಶ್,ನಾಗರಾಜ್, ಶಂಕರಮ್ಮ, ಪಿಡಿಓ ಗಳಾದ ನಿರ್ಮಲ, ಶೃತಿ ಮತ್ತು ಮನೆಯ ಫಲಾನುಭವಿಗಳು ಇದ್ದರು.