ಬೋವಿ ಸಮಾಜಕ್ಕೆ ಹಾಗು ಪಕ್ಷದ ನಿಷ್ಠಾವಂತರಿಗೆ ಲೋಕಸಭೆ ಟಿಕೆಟ್ ನೀಡಿ: ಡಿ‌.ಬಸವರಾಜ್ ಒತ್ತಾಯ

ರಾಜಕೀಯ

ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಬೋವಿ ಜನಾಂಗದವರಿಗೆ ಟಿಕೆಟ್‌ ನೀಡಬೇಕು ಅದರಲ್ಲೂ ಪಕ್ಷದಲ್ಲಿ ನಿಷ್ಠಾವಂತರಾಗಿ ಕೆಲಸ ಮಾಡಿದವರನ್ನು ಗುರುತಿಸಿ ಟಿಕೆಟ್ ನ್ನು ನೀಡುವಂತೆ ಪಕ್ಷದ ವರಿಷ್ಠರಿಗೆ ಕೆಪಿಸಿಸಿ ವಕ್ತಾರ, ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಮಾಜಿ ಅಧ್ಯಕ್ಷ ಡಿ.ಬಸವರಾಜು ಆಗ್ರಹಿಸಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಾನು ಕಳೆದ ೪೦ ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ರೀತಿಯ ಹುದ್ದೆಗಳಲ್ಲಿ ಕೆಲಸವನ್ನು ನಿರ್ವಹಿಸಿದ್ದೇನೆ, ಅವಿಭಜಿತ ಚಿತ್ರದುರ್ಗ ಜಿಲ್ಲೆಯಲ್ಲಿಯೂ ೧೯೮೪ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಎನ್.ಎಸ್.ಯು.ಐನ ಅಧ್ಯಕ್ಷನಾಗಿ, ರಾಜ್ಯ ವಿದ್ಯಾರ್ಥಿ ಕಾಂಗ್ರೆಸ್ ಉಪಾಧ್ಯಕ್ಷನಾಗಿ, ಅಖಂಡ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ದಾವಣಗೆರೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಎರಡು ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಇದರೊಂದಿಗೆ ದಾವಣಗೆರೆ ಜಿಲ್ಲೆ ಕಾಂಗ್ರೆಸ್ ಸೇವಾದಳದ ಅಧ್ಯಕ್ಷನಾಗಿ, ರಾಜ್ಯದ ಪ್ರಧಾನ ಸಂಘಟಕರಾಗಿ ಸೇವೆಯನ್ನು ಸಲ್ಲಿಸಿದ್ದೇನೆ ಎಂದರು.
ಕೆಪಿಸಿಸಿ ಸದಸ್ಯನಾಗಿ ಕಾರ್ಯದರ್ಶಿಯಾಗಿ ಸಂಯೋಜಕರಾಗಿ ಮಾಧ್ಯಮ ವಿಶ್ಲೇಷಕನಾಗಿ ಪ್ರಸ್ತತ ವಕ್ತರರಾಗಿ ಕೆಲಸವನ್ನು ಮಾಡುತ್ತಿದ್ದೇನೆ. ೨೦೧೪ರಲ್ಲಿ ಹಾವೇರಿಯಲ್ಲಿ ಸಲೀಂರವರು ಲೋಕಸಭಾ ಅಭ್ಯರ್ಥಿಯಾಗಿದ್ದಾಗ ವೀಕ್ಷಕನಾಗಿ ಕೆಲಸವನ್ನು ಮಾಡಿದ ಅನುಭವ ಇದೆ. ಇದರೊಂದಿಗೆ ಬೆಂಗಳೂರು ಬಿಬಿಎಂಪಿ, ಬೆಂಗಳೂರು ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ವೀಕ್ಷಕನಾಗಿ ಕೆಲಸ ಮಾಡಿದ್ದೇನೆ. ದಾವಣಗೆರೆ ನಗರಸಭೆಗೆ ಮೂರು ಬಾರಿ ಗೆಲುವನ್ನು ಸಾಧಿಸಿ ಒಂದು ಬಾರಿ ಅಧ್ಯಕ್ಷನಾಗಿ ಕೆಲಸವನ್ನು ಮಾಡಿದ್ದೇನೆ. ಅಲ್ಲದೆ ಈ ಸಮಯದಲ್ಲಿ ವಿವಿಧ ಮಠಾಧೀಶರಿಂದ ಆದರ್ಶ ನಗರಸಭಾ ಅಧ್ಯಕ್ಷ ಎಂಬ ಬಿರುದನ್ನು ಪಡೆದಿದ್ದೆನೆ ಎಂದು ಬಸವರಾಜು ತಿಳಿಸಿದರು.
೨೦೧೪ರ ವಿಧಾನಸಭಾ ಸಮಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದಲ್ಲಿ ರೇಷ್ಮೇ ಉದ್ಯಮಗಳ ನಿಗಮಕ್ಕೆ ಅಧ್ಯಕ್ಷನಾಗಿ ಸರ್ಕಾರದ ೨೨ ಕೋಟಿ ಸಾಲದಲ್ಲಿದ್ದ ನಿಗಮವನ್ನು ಲಾಭದಲ್ಲಿ ತರಿಸಿ ಸರ್ಕಾರದ ಸಾಲವನ್ನು ವಾಪಾಸ್ಸು ಮಾಡಿ ಇದರೊಂದಿಗೆ ೧೦ ಕೋಟಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದೇನೆ, ಸರ್ಕಾರದ ನೂರಾರು ನಿಗಮಗಳಲ್ಲಿ ನಮ್ಮ ನಿಗಮ ನಂಬರ್ ಒನ್ ನಿಗಮ ಎಂದು ಬಹುಮಾನವನ್ನು ಪಡೆದಿದೆ. ಕಳೆದ ೪೦ ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಂಘಟನೆಯನ್ನು ಮಾಡುತ್ತಾ ಬಂದಿದ್ದೇನೆ. ಈಗಾಗಲೇ ಹಲವಾರು ವಿಧಾನಸಭೆ ಮತ್ತು ಲೋಕಸಭೆಗಳಿಗೆ ಟಿಕೆಟ್ ನ್ನು ಕೇಳಿದ್ದೇ ಅದರೆ ಪಕ್ಷ ನೀಡಿರಲಿಲ್ಲ, ಈ ಬಾರಿಯಾದರೂ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಬೋವಿ ಸಮಾಜದವನಾದ ನನಗೆ ಟಿಕೆಟ್ ನೀಡುವುದರ ಮೂಲಕ ಬೋವಿ ಸಮಾಜವನ್ನು ಗುರುತಿಸಬೇಕಿದೆ ಎಂದು ಪಕ್ಷದ ಮುಖಂಡರನ್ನು ಒತ್ತಾಯಿಸಿದ ಬಸವರಾಜು ಈ ಬಾರಿಯ ಲೋಕಸಭೆಗೆ ನಮ್ಮ ಜನಾಂಗಕ್ಕೆ ಟಿಕೆಟ್ ನೀಡಲು ಸಾಧ್ಯವಾಗದಿದ್ದರೆ ಮುಂಬರುವ ವಿಧಾನ ಪರಿಷತ್‌ನ ೧೧ ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಭೋವಿ ಸಮಾಜಕ್ಕೆ ನೀಡುವುದರ ಮೂಲಕ ನಮ್ಮ ಸಮಾಜವನ್ನು ಮೇಲೆತ್ತಬೇಕಿದೆ ಎಂದು ಎಐಸಿಸಿಯ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರನ್ನು ಆಗ್ರಹಿಸಿದ್ದಾರೆ.
ಗೋಷ್ಟಿಯಲ್ಲಿ ಅಂಜನಪ್ಪ, ರಾಮಣ್ಣ, ವೆಂಕಟೇಶ್, ರಾಜು ದಾದಾಪೀರ್, ವಿನಾಯಕ, ಶಿವಕುಮಾರ್, ತಿಪ್ಪೇಸ್ವಾಮಿ ವಿರೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

 

 

 

Leave a Reply

Your email address will not be published. Required fields are marked *