ನನ್ನ ಮಗ ಏನು ತಪ್ಪು ಮಾಡಿದ್ದಾ ಅಂತ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಟಿಕೇಟ್ ತಪ್ಪಿಸಿ ಇಂತಹ ಮೋಸ ಮಾಡಿದಿರಿ. ನನ್ನ ರಾಜಕೀಯ ಶಕ್ತಿ ಸಾಮರ್ಥ್ಯ ಏನು ಎನ್ನುವುದನ್ನು ಮುಂದಿನ ದಿನಗಳಲ್ಲಿ ತೋರಿಸುತ್ತೇನೆಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಹೊಳಲ್ಕೆರೆ ಕ್ಷೇತ್ರದ ಶಾಸಕ ಡಾ.ಎಂ.ಚಂದ್ರಪ್ಪ ಸವಾಲು ಹಾಕಿದರು.
ಚಳ್ಳಕೆರೆ ರಸ್ತೆಯಲ್ಲಿರುವ ಎ.ಜೆ.ಕನ್ವೆಂಷನ್ ಹಾಲ್ನಲ್ಲಿ ಶುಕ್ರವಾರ ಕರೆಯಲಾಗಿದ್ದ ಸ್ವಾಭಿಮಾನಿ ಕಾರ್ಯಕರ್ತರ ಸಭೆ ಉದ್ಗಾಟಿಸಿ ಮಾತನಾಡಿದರು.
2019 ರ ಲೋಕಸಭಾ ಚುನಾವಣೆಯಲ್ಲಿಯೇ ನನ್ನ ಮಗ ಎಂ.ಸಿ.ರಘುಚಂದನ್ಗೆ ಚಿತ್ರದುರ್ಗ ಕ್ಷೇತ್ರದಿಂದ ಟಿಕೇಟ್ ಕೇಳಿದ್ದೆ. ಆಗ ನನ್ನ ಮನೆಗೆ ಬಂದು ಬಿ.ಎಸ್.ಯಡಿಯೂರಪ್ಪನವರು ಮುಂದಿನ ಸಾರಿ ಅವಕಾಶ ಕೊಡುವುದಾಗಿ ಭರವಸೆ ನೀಡಿದ್ದರಿಂದ ಸುಮ್ಮನಾದೆವು. ಈ ಬಾರಿ ಕೊನೆ ಹಂತದವರೆಗೂ ನನ್ನ ಮಗನ ಹೆಸರಿತ್ತು. ಅಂತಿಮ ಗಳಿಗೆಯಲ್ಲಿ ಗೋವಿಂದ ಕಾರಜೋಳರನ್ನು ಚಿತ್ರದುರ್ಗ ಪಾರ್ಲಿಮೆಂಟ್ ಕ್ಷೇತ್ರದ ಅಭ್ಯರ್ಥಿಯನ್ನಾಗಿ ವರಿಷ್ಠರು ಘೋಷಿಸಿದ್ದಾರೆ. ನಮ್ಮ ಕುಟುಂಬ ರಾಜಕೀಯ ವಿರೋಧಿಗಳಿಗೂ ದ್ರೋಹ ಮಾಡಿಲ್ಲ. ನನ್ನ ಮಗ ಏನು ವಿಷ ಹಾಕಿದ್ದ ಎಂದು ಇಂತಹ ನಂಬಿಕೆ ದ್ರೋಹದ ಕೆಲಸ ಮಾಡಿದ್ದೀರ ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಗದ್ಗದಿತರಾದ ಡಾ.ಎಂ.ಚಂದ್ರಪ್ಪ ತಮ್ಮ ಮನದಲ್ಲಿರುವ ದುಃಖವನ್ನು ಹೊರ ಹಾಕಿದರು.
ಈ ಬಾರಿಯ ಚುನಾವಣೆಯಲ್ಲಿ ನನ್ನ ಮಗನಿಗೆ ನೂರಕ್ಕೆ ನೂರು ಟಿಕೆಟ್ ಸಿಗುತ್ತದೆಂದು ನಂಬಿದ್ದೆ. ಆದರೆ ನಾನು ಯಾರನ್ನು ನಂಬಿದ್ದೆನೋ ಅವರೆ ನನ್ನ ಕತ್ತು ಕೊಯ್ದರು. ಹಾಗಾಗಿ ಸ್ವಾಭಿಮಾನಿ ಕಾರ್ಯಕರ್ತರ ಸಭೆ ಕರೆಯುವಂತ ಅನಿವಾರ್ಯ ಪರಿಸ್ಥಿತಿ ಒದಗಿ ಬಂದಿದೆ. ಇಂತಹ ಸಭೆಯಲ್ಲಿ ಮಾತನಾಡಲು ತುಂಬಾ ನೋವಾಗುತ್ತಿದೆ ಎಂದು ಗದ್ಗದಿತರಾದ ಡಾ.ಎಂ.ಚಂದ್ರಪ್ಪ ವಿಧಾನಸಭೆಯಲ್ಲಿ ಸೋತವರೊಬ್ಬರು ಎಂ.ಎಲ್.ಸಿ.ಯಾಗಲು ನನ್ನ ಬೆಂಬಲ ಬೇಕಿತ್ತು. ಆದರೆ ಈಗ ಪಕ್ಷದ ನಾಯಕರುಗಳಿಗೆ ಚಾಡಿ ಹೇಳಿ ನನ್ನ ಮಗ ಎಂ.ಸಿ.ರಘುಚಂದನ್ಗೆ ಟಿಕೇಟ್ ತಪ್ಪಿಸಿದರು. ಮುಂದೆ ಅವರಿಗೂ ಕಾದಿದೆ ಎಂದು ಹೆಸರು ಹೇಳಲಿಚ್ಚಿಸದೆ ವಾಗ್ದಾಳಿ ನಡೆಸಿದರು.
ಮೂವತ್ತು ವರ್ಷಗಳಿಂದಲೂ ರಾಜಕೀಯ ಮಾಡಿಕೊಂಡು ಬರುತ್ತಿದ್ದೇನೆ. 2008 ರಿಂದ ಬಿಜೆಪಿ.ಯಲ್ಲಿ ಮೂರು ಬಾರಿ ಶಾಸಕನಾಗಿ ಸಾರ್ವಜನಿಕರ ನಡುವೆ ಕೆಲಸ ಮಾಡುತ್ತಿದ್ದೇನೆ. ಬಾಣದ ಗುರ್ತಿಗೆ ಐದು ಜಿಲ್ಲೆಯಿಂದ ನಾನೊಬ್ಬನೆ ಶಾಸಕನಾಗಿದ್ದು, ಬಿ.ಎಸ್.ಯಡಿಯೂರಪ್ಪನವರು ಬಿಜೆಪಿ.ಯಿಂದ ಹೊರ ಬಂದು ಕೆ.ಜೆ.ಪಿ. ಪಕ್ಷ ಕಟ್ಟಿದಾಗ ಇನ್ನು ಏಳು ತಿಂಗಳು ಅವಧಿಯಿದ್ದಾಗಲೆ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಅವರ ಬೆನ್ನಿಗೆ ನಿಂತಿದ್ದೆ. ಆ ಕೃತಜ್ಞತೆಯೂ ಅವರಿಗಿಲ್ಲದಂತಾಯಿತು. ರಾಜ್ಯದ ಮುಖ್ಯಮಂತ್ರಿಯಾಗಬೇಕಾದರೆ ಭೋವಿ ಸಮಾಜದ ಗೂಳಿಹಟ್ಟಿ ಡಿ.ಶೇಖರ್, ಶಿವರಾಜ್ ತಂಗಡಗಿ, ವೆಂಕಟರಮಣಪ್ಪ ಇವರುಗಳು ನನ್ನ ಮಾತಿಗೆ ಬೆಲೆ ಕೊಟ್ಟು ಬೆಂಬಲಿಸಿದರು. ಭೋವಿ ಸಮಾಜ ಕೊಟ್ಟ ಮಾತಿಗೆ ತಪ್ಪುವವರಲ್ಲ. ಬಿ.ಎಸ್.ಯಡಿಯೂರಪ್ಪನವರಿಗಾಗಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟೆ. ಅಷ್ಟೆ ಅಲ್ಲ. ಅವರಿಗಾಗಿ ಪ್ರಾಣ ಕೊಡಲು ಸಿದ್ದ ಎಂದು ಹೇಳಿದರು.
ಸರ್ವೆ ರಿಪೋರ್ಟ್, ಕಾರ್ಯಕರ್ತರ ಅಭಿಪ್ರಾಯಕ್ಕಾದರೂ ಪಕ್ಷದ ನಾಯಕರುಗಳು ಗೌರವ ಕೊಟ್ಟು ನನ್ನ ಮಗನಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬಹುದಿತ್ತು. ಅದನ್ನು ಬಿಟ್ಟು ಐದು ನೂರು ಕಿ.ಮೀ. ದೂರದಿಂದ ಗೋವಿಂದ ಕಾರಜೋಳರನ್ನು ಕರೆಸಿಕೊಳ್ಳುವ ಬಾಧೆ ಏನಿತ್ತು. 2019 ಎಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಕೇಂದ್ರದ ಮಂತ್ರಿಯಾದ ಎ.ನಾರಾಯಣಸ್ವಾಮಿ ಜಿಲ್ಲೆಯಲ್ಲಿ ಎಲ್ಲಿಯಾದರೂ ಸುತ್ತಾಡಿದ್ದಾರಾ. ಯಾರಾದರು ಅವರ ಮುಖ ನೋಡಿದ್ದೀರ ಎಂದು ಸ್ವಾಭಿಮಾನಿ ಕಾರ್ಯಕರ್ತರನ್ನು ಪ್ರಶ್ನಿಸಿದ ಶಾಸಕ ಡಾ.ಎಂ.ಚಂದ್ರಪ್ಪ ಜನಾರ್ಧನರೆಡ್ಡಿ ನನಗೆ ಇಪ್ಪತ್ತೈದು ಕೋಟಿ ರೂ.ಆಸೆ ತೋರಿಸಿದರು. ಸತೀಶ್ ಜಾರಕಿಹೊಳಿ ಕೂಡ ನನಗೆ ಹಣದ ಆಮಿಷ ಹೊಡ್ಡಿದರು. ಎಂತಹ ಸಂದರ್ಭದಲ್ಲೂ ನಾನು ಬಿ.ಎಸ್.ಯಡಿಯೂರಪ್ಪನವರಿಗೆ ಮೋಸ ಮಾಡಲಿಲ್ಲ. ಗೋವಿಂದ ಕಾರಜೋಳ ನಿನಗೆ ನಾಚಿಕೆ ಆಗುತ್ತಿಲ್ವಾ ಇಲ್ಲಿಗೆ ಬಂದು ಸ್ಪರ್ಧಿಸುತ್ತಿದ್ದೀಯ ಎಂದು ಕಿಡಿ ಕಾರಿದರು.