ಚಿತ್ರದುರ್ಗ: ಕೂಲಿ ನಾಲಿ ಮಾಡಿ ಬದುಕುತ್ತಿದ್ದ ಬಡ ಕುಟುಂಬ, ಎಂದಿನಂತೆ ನೆನ್ನೆ ರಾತ್ರಿ ಕೂಲಿ ಕೆಸಲ ಮುಗಿಸಿ ಬಂದು ಊಟ ಮಾಡಿ ಮಲಗಿದ್ದ ಇಡೀ ಕುಟುಂಬಕ್ಕೆ ತಿಂದ ಆಹಾರವೇ ವಿಷವಾಗಿ ಮೂವರು ಸಾವನ್ನಪ್ಪಿದ್ದು ಇಬ್ಬರು ಮಕ್ಕಳು ಚಿಂತಾಜನಕ ಸ್ಥಿತಿಯಲ್ಲಿರುವ ಕರುಣಾಜನಕ ಘಟನೆ ನಡೆದಿದೆ.
ಚಿತ್ರದುರ್ಗ ತಾಲೂಕಿನ ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯ ಇಸಾಮುದ್ರ ಗ್ರಾಮದ ತಿಪ್ಪಾನಾಯ್ಕ್ ಎಂಬ ವ್ಯಕ್ತಿ ವೃದ್ದ ತಾಯಿ ಗುಂಡೀಬಾಯಿ, ಪತ್ನಿ ಸುಧಾಬಾಯಿ ಹಾಗೂ 18 ವರ್ಷದ ಮಗ ರಾಹುಲ್ ಮತ್ತು 16 ವರ್ಷದ ಮಗಳು ರಮ್ಯಾ ಜೊತೆ ಬಡತನವಿದ್ದರೂ ಕೂಲಿನಾಲಿ ಮಾಡ್ಕೊಂಡು ಸಂತೋಷದಿಂದಲೇ ಜೀವನ ಸಾಗಿಸುತ್ತಿದ್ರು, ಆದ್ರೆ ನೆನ್ನೆ ರಾತ್ರಿ ರಾಗಿ ಮುದ್ದೆ ಕಾಳು ಸಾರು ತಿಂದು ಮಲಗಿದ ಸ್ವಲ್ಪ ಹೊತ್ತಿನಲ್ಲೇ ಇಡೀ ಕುಟುಂಬಕ್ಕೆ ವಾಂತಿ ಬೇಧಿಯಾಗಿ ಅಸ್ವಸ್ಥರಾಗಿದ್ರು, ಕೂಡಲೇ ಪಕ್ಕದ ಮನೆಯಲ್ಲಿದ್ದ ಅಣ್ಣನ ಮಗಳು ತಂದೆಗೆ ವಿಷಯ ತಿಳಿಸಿ ಎಲ್ಲರನ್ನೂ ಭರಮಸಾಗರ ಆಸ್ಪತ್ರೆಗೆ ಸಾಗಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಿಸದೇ ವೃದ್ದೆ ಗುಂಡೀಬಾಯಿ ಹಾಗು ಸೊಸೆ ಸುಧಾ ಬಾಯಿ ಸಾವನ್ನಪ್ಪಿದ್ದಾರೆ. ತಕ್ಷಣ ಎಚ್ಚತ್ತ ತಿಪ್ಪಾನಾಯ್ಕನ ಅಣ್ಣ ತಮ್ಮ ಹಾಗೂ ಮಕ್ಕಳನ್ನು ದಾವಣಗೆರೆಗೆ ಕರೆದೋಯ್ದು ಎಸ್.ಎಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ರು, ಆದರೆ ಅಲ್ಲೂ ಚಿಕಿತ್ಸೆ ಫಲಿಸದೇ ತಿಪ್ಪಾನಾಯ್ಕ್ ಕೊನೆಯುಸಿರೆಳಿದಿದ್ದು, ತಿಪ್ಪಾನಾಯ್ಕ್ ಮಕ್ಕಳ ಸ್ಥಿತಿ ಗಂಭೀರವಾಗಿದೆ.
ವಿಷಾಹಾರ ಸೇವಿಸಿ ಒಂದೇ ಕುುಟುಂಬದ ಐವರು ಅಸ್ವಸ್ಥರಾಾದ ಬಗ್ಗೆ ವಿಚಾರ ತಿಳಿಯುತ್ತಿದ್ದಂತೇ ಸ್ಥಳಕ್ಕೆ ಭೇಟಿ ನೀಡಿದ ಭರಮಸಾಗರ ಠಾಣೆ ಪೊಲೀಸರು, ಎಸ್ಪಿ ಜಿ.ರಾಧಿಕಾ ಅವರ ಮಾರ್ಗದರ್ಶನದಂತೆ ಸ್ಥಳ ಪರಿಶೀಲನೆ ನಡೆಸಿದ್ದು, ಮೃತರು ಶೇವಿಸಿದ್ದ ಆಹಾರದ ಸ್ಯಾಂಪಲ್ ಶೇಖರಿಸಿ ಪ್ರಯೋಗಾಲಯಕ್ಕೆ ಕಳುಹಿದ್ದಾರೆ. ಸದ್ಯ ಅಸಹಜ ಸಾವಿನ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
ಬದುಕಿನಲ್ಲಿ ಎಷ್ಟೇ ಕಷ್ಟ ಇದ್ದರೂ ಕೂಲಿನಾಲಿ ಮಾಡಿ ಬದುಕುತ್ತಿದ್ದ ಕುಟುಂಬದ ಆಧಾರ ಕೊಂಡಿಗಳನ್ನ ತಿಂದ ಆಹಾರವೇ ವಿಷವಾಗಿ ಮೂರು ಜೀವಗಳನ್ನು ಬಲಿಪಡೆದಿದ್ದು, ತಂದೆ ತಾಯಿಯ ಪ್ರೀತಿಯಲ್ಲಿ ಬೆಳೆದು ಬದುಕು ರೂಪಿಸಿಕೊಳ್ಳಬೇಕಿದ್ದ ಎರಡು ಅಪ್ರಾಪ್ತ ಮಕ್ಕಳು ಅಕ್ಷರಶಃ ಅನಾಥರಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಸಂಯುಕ್ತವಾಣಿ