ಚಿತ್ರದುರ್ಗ,ಏಪ್ರಿಲ್17- ಕುರಿಗಳನ್ನು ಕದ್ದು ಕುರಿಗಾಹಿಯನ್ನು ಕೊಲೆ ಮಾಡಿದ್ದ ಮೂವರು ಕೊಲೆ ಆರೋಪಿಗಳನ್ನು ಚಿತ್ರದುರ್ಗ ಗ್ರಾಮಾಂತರ ಹಾಗೂ ಭರಮಸಾಗರ ಠಾಣೆ ಪೋಲಿಸರು ಮಿಂಚಿನ ಕಾರ್ಯಚರಣೆ ನಡೆಸಿ 24 ಗಂಟೆಯೊಳಗೆ ಬಂಧಿಸಿದ್ದಾರೆ.
ಭರಮಸಾಗರ ಠಾಣೆ ವ್ಯಾಪ್ತಿ ಯ ಸಿರಿಗೆರೆ ಗ್ರಾಮದ ರುದ್ರಮ್ಮ ಜಯ್ಯಣ್ಣ ಎಂಬುವರ ಮನೆಯಲ್ಲಿ ಕುರಿ ಕಾಯುವ ಕೆಲಸ ಮಾಡಿಕೊಂಡಿದ್ದ ರಾಮಜ್ಜ (60) ಕೊಲೆಯಾಗಿರುವ ವ್ಯಕ್ತಿ.
ಕಳೆದ ಒಂದು ವಾರದ ಹಿಂದೆ ಅಂದರೆ 10 ರಂದು ಬೆಳಗ್ಗೆ ಎಂದಿನಂತೆ ರಾಮಜ್ಜ ಗಂಗಾಧರಪ್ಪ ಎನ್ನುವವರ ತೋಟದ ಕಡೆಗೆ ಕುರಿ ಮೇಸಯಿಸಲು ಹೋಗಿದ್ದು, ಸಂಜೆ 8 ಗಂಟೆಯಾದರೂ ಕುರಿಗಳ ಜೊತೆಗೆ ಮನೆಗೆ ಬರಲಿಲ್ಲ. ಬದಲಿಗೆ ಕುರಿಗಳು ಮಾತ್ರ ಮನೆಗೆ ಬಂದಿದ್ದು, ಕುರಿಗಳಲ್ಲಿ 5 ಕುರಿಗಳು ಕಳುವಾಗಿದ್ದವು. ಇದೇ ತಿಂಗಳ 14 ರಂದು ಬೆಳಗ್ಗೆ ರಾಮಚಂದ್ರಪ್ಪ ಹಾಗೂ ನಾಗರಾಜ್ ಎಂಬುವರು ತಮ್ಮ ತೋಟದ ಕಡೆಗೆ ಹೋಗುತ್ತಿರುವಾಗ ಶವದ ವಾಸನೆ ಬಂದಿದ್ದು ಹೋಗಿ ನೋಡಿದಾಗ ಗಂಗಾಧರಪ್ಪ ಅವರ ತೋಟದಲ್ಲಿ ಅಡಿಕೆ ಗರಿಯಲ್ಲಿ ಕೊಲೆ ಮಾಡಿ ಶವವನ್ನು ಮುಚ್ಚಿಡಲಾಗಿತ್ತು. ಇದರ ಮೇರೆಗೆ ಕುರಿಗಳ ಮಾಲೀಕರಾದ ರುದ್ರಮ್ಮ ಯಾರೋ ದುಷ್ಕರ್ಮಿಗಳು ಈ ಕೃತ್ಯ ಮಾಡಿದ್ದು ಅವರನ್ನು ಹುಡುಕಿ ಕಳೆದು ಹೋದ ಕುರಿಗಳನ್ನು ಹುಡುಕಿ ಅವರು ಹಾಗೂ ಕೊಲೆ ಮಾಡಿದ ಆರೋಪಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ದೂರು ನೀಡಿದ್ದ ಹಿನ್ನೆಲೆಯಲ್ಲಿ ಭರಮಸಾಗರ ಠಾಣೆಯ ಪೋಲಿಸರು ತನಿಖೆ ನಡೆಸಿ ಕೊಲೆ ಮಾಡಿದ್ದ ಅರೋಪಿಗಳಾದ ರವಿ, ರಘು ಮತ್ತು ರವಿ ಕಿರಣ ಎಂಬುವರು ಹಾಗೂ 65 ಸಾವಿರ ಮೌಲ್ಯದ ಐದು ಕುರಿಗಳನ್ನು ಒಂದೇ ದಿನದಲ್ಲಿ ಪತ್ತೆ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇವರ ಕಾರ್ಯಕ್ಕೆ ಎಸ್ಪಿ ರಾಧಿಕಾ ಅವರು ಶ್ಲಾಘೀಸಿದ್ದಾರೆ.
ಸಂಯುಕ್ತವಾಣಿ