ಹುಬ್ಬಳ್ಳಿಯ ನೇಹಾ ಹಿರೇಮಠ್ ಅವರ ಹತ್ಯೆ ಖಂಡನೆ ಕೋಟೆ ನಾಡು ಚಿತ್ರದುರ್ಗದಲ್ಲಿ ಪ್ರತಿಧ್ವನಿಸಿತು.
ನೇಹಾ ಹಿರೇಮಠ್ ಅವರ ಹತ್ಯೆಯನ್ನು ಖಂಡಿಸಿ ಇಂದು ಬಿಜೆಪಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಪ್ರತಿಭಟನೆಯಲ್ಲಿ ಮಾತಾಡಿದ ಮಾಜಿ ಶಾಸಕ ತಿಪ್ಪಾರೆಡ್ಡಿ, ಹತ್ತು ವರ್ಷಗಳ ಹಿಂದೆ ಬಿಹಾರದಲ್ಲಿನಡೆಯುತ್ತಿದ್ದ ದೌರ್ಜನ್ಯ ಹಾಗೂ ಅತ್ಯಾಚರದಂತಹ ಘಟನೆಗಳು, ಕರ್ನಾಟಕದಲ್ಲಿ ಇಂದು ನಡೆಯುತ್ತಿವೆ. ಸರ್ಕಾರ ಬಂದ ಮೇಲೆ, ಎಂಟು ಯುವಕ ಯುವತಿಯರ ಹತ್ಯೆಯಾಗಿದೆ. ಕಾಂಗ್ರೆಸ್ ಸರ್ಕಾರ ಹಿಂದೂಗಳ ರಕ್ಷಣೆ ಮಾಡುವಲ್ಲಿ ವಿಫಲವಾಗಿದೆ. ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ, ಮಾತಾಡಿ, ನೇಹಾ ಹತ್ಯೆ ಪ್ರಕರಣವನ್ನು ಸಿಬಿಐ ಗೆ ವಹಿಸಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು. ಅಭ್ಯರ್ಥಿ ಕಾರಜೋಳ ಮಾತಾಡಿ, ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಹಿಂದೂಗಳ ಹತ್ಯೆಗಾಗಿ ಆರೋಪಿಗಳನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದು, ಇದನ್ನು ಖಂಡಿಸುತ್ತೇವೆ. ಮೋದಿಯವರು ಬಂದ ಮೇಲೆ ದೇಶದಲ್ಲಿ ಭಯೋತ್ಪಾದನೆ ಕಡಿಮೆಯಾಗಿದೆ. ಸಿದ್ದರಾಮಯ್ಯ ಸಿಎಂ ಆದ ಮೇಲೆ ಹಿಂದೂಗಳ ಕಗ್ಗೊಲೆಯಾಗುತ್ತಿವೆ. ಇದನ್ನು ಸಿಬಿಐಗೆ ಕೊಡಬೇಕು ಎಂದು ಒತ್ತಾಯಿಸಿದರು. ಮಾಜಿ ಶಾಸಕ ಬೆಳ್ಳುಬ್ಬಿ ಮಾತಾಡಿ, ನೇಹಾ ಹತ್ಯೆ ಮಾಡಿದ ಫಯಾಜ್ ನನ್ನು ಗಲ್ಲಿಗೇರಿಸುವ ಜೊತೆಗೆ, ಕೈ ಕತ್ತರಿಸಬೇಕು, ಕಾಲು ಕಡಿಯಬೇಕು, ಕಣ್ಣು ಕೀಳಬೇಕು ಎಂದು ಹೇಳಿದರು. ಇದಕ್ಕೂ ಮುನ್ನ ನಗರದ ನೀಲಕಂಠೇಶ್ವರ ದೇವಸ್ಥಾನದಿಂದ ವಿಧಾನ ಪರಿಷತ್ ಸಚೇತಕ ರವಿಕುಮಾರ್ ಅವರ ನೇತೃತ್ವದಲ್ಲಿ ಹೊರಟ ಪ್ರತಿಭಟನೆ ಮೆರವಣಿಗೆಯು ನಗರದ ಬಿಡಿ ರಸ್ತೆ ಮೂಲಕ ನಡೆದು ಬಂತು. ಪ್ರತಿಭಟನಾಕಾರರು ಸರ್ಕಾರದ ವಿರುದ್ದ ಘೋಷಣೆ ಹಾಕುವ ಮೂಲಕ ಆಕ್ರೋಶ ಹೊರ ಹಾಕಿದರು. ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸಚೇತಕ ರವಿಕುಮಾರ್, ಮಾಜಿ ಶಾಸಕ ತಿಪ್ಪಾರೆಡ್ಡಿ, ಹೊಳಲ್ಕೆರೆ ಶಾಸಕ ಚಂದ್ರಪ್ಪ, ಎಂಎಲ್ ಸಿ ಕೆಎಸ್ ನವೀನ್ ಅಭ್ಯರ್ಥಿ ಗೋವಿಂದ ಕಾರಜೋಳ, ಡಾ.ಸಿದ್ದಾರ್ಥ್ ಹಾಗೂ ಬಿಜೆಪಿ ಜೆಡಿಎಸ್ ಮುಖಂಡರು ಭಾಗವಹಿಸಿದ್ದರು.