ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ: ಹೈಕೋರ್ಟ್ ಮಹತ್ವದ ಆದೇಶ
ಹುಬ್ಬಳ್ಳಿ, ಆಗಸ್ಟ್ 30: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡಿ ಹೈಕೋರ್ಟ್ ವಿಭಾಗೀಯ ಪೀಠ ತಡರಾತ್ರಿ ಆದೇಶ ಹೊರಡಿಸಿದೆ. ಈ ಮೂಲಕ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರ ಆದೇಶವನ್ನು ಹೈಕೋಟ್ ಎತ್ತಿಹಿಡಿದಿದೆ.
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ವಿಚಾರಕ್ಕೆ ಸಂಬಂಧಿಸಿ ಚಾಮರಾಜಪೇಟೆ ಈದ್ಗಾ ಮೈದಾನದ ಸುಪ್ರೀಂಕೋರ್ಟ್ ಆದೇಶ ಆಧರಿಸಿ ವಿಚಾರಣೆಗೆ ಅರ್ಜಿದಾರರು ಸಲ್ಲಿಸಿದ ಮನವಿ ಮೇರೆಗೆ ರಾತ್ರಿ 10 ಗಂಟೆಗೆ ಅರ್ಜಿ ವಿಚಾರಣೆ ನಡೆಸಲಾಯಿತು.
ಬುಧವಾರವೇ ಗಣೇಶ ಹಬ್ಬ ಇರುವ ಕಾರಣ ಮಂಗಳವಾರವೇ ಹುಬ್ಬಳ್ಳಿ ಈದ್ಗಾ ಮೈದಾನದ ಬಗ್ಗೆಯೂ ವಿಚಾರಣೆ ನಡೆಸುವಂತೆ ಹೈಕೋರ್ಟ್ಗೆ ಮನವಿ ಮಾಡಲಾಗಿತ್ತು. ಚಾಮರಾಜನಗರ ಈದ್ಗಾ ಮೈದಾನಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನೇ ಹುಬ್ಬಳ್ಳಿಯ ಈದ್ಗಾ ಮೈದಾನಕ್ಕೂ ಅನ್ವಯಿಸಲು ಅರ್ಜಿದಾರರು ಮನವಿ ಮಾಡಿದ್ದರು.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ವಿಚಾರದ ಅಧಿಕಾರವನ್ನು ಮೇಯರ್ಗೆ ನೀಡಿ ಹೈಕೋರ್ಟ್ ಆದೇಶ ನೀಡಿತ್ತು.
ಅರ್ಜಿದಾರರ ಪರ ವಕೀಲರು ಸುಪ್ರೀಂಕೋರ್ಟ್ ಆದೇಶ ಉಲ್ಲೇಖಿಸಿ ವಾದ ಮಾಡಿದರು. ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಯಥಾಸ್ಥಿತಿಗೆ ಆದೇಶಿಸಿದೆ. ಇದೇ ಆದೇಶವನ್ನು ಹುಬ್ಬಳ್ಳಿ ಈದ್ಗಾ ಕೇಸ್ಗೂ ಅನ್ವಯಿಸಲು ಮನವಿ ಮಾಡಿದ್ದರು. ಆದರೆ ಇದಕ್ಕೆ ಆಕ್ಷೇಪ ಸಲ್ಲಿಸಿದ ಸರ್ಕಾರದ ಪರ ವಕೀಲ ಎಎಜಿ ಧ್ಯಾನ್ ಚಿನ್ನಪ್ಪ ಚಾಮರಾಜಪೇಟೆ ಮೈದಾನಕ್ಕೆ ಸಂಬಂಧಿಸಿದಂತೆ ಮಾಲೀಕತ್ವ ವಿವಾದವಿದೆ. ಆದರೆ ಹುಬ್ಬಳ್ಳಿ ಈದ್ಗಾ ಮೈದಾನದ ಮಾಲೀಕತ್ವದ ವಿವಾದವಿಲ್ಲ. ಹೀಗಾಗಿ ಎರಡೂ ಪ್ರಕರಣಗಳನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ವರ್ಷದಲ್ಲಿ 2 ಬಾರಿ ಮಾತ್ರ ನಮಾಜ್ ಮಾಡಲು ಲೈಸೆನ್ಸ್ ನೀಡಲಾಗಿದೆ. ಅಂಜುಮಾನ್ ಸಂಸ್ಥೆಗೆ ಹುಬ್ಬಳ್ಳಿ ಈದ್ಗಾ ಮೈದಾನದ ಮೇಲೆ ಯಾವುದೇ ಹಕ್ಕಿಲ್ಲ. ಹೀಗಾಗಿ ಭೂಮಿಯನ್ನು ಸರ್ಕಾರಕ್ಕೆ ಬೇಕಾದಂತೆ ಬಳಕೆ ಮಾಡಬಹುದು. ಇದಕ್ಕೆ ಹುಬ್ಬಳ್ಳಿ-ಧಾರವಾಡ ನಗರಪಾಲಿಕೆಗೆ ಎಲ್ಲಾ ಅಧಿಕಾರವಿದೆ ಎಂದು ವಾದಿಸಿದರು.
ಸುಪ್ರೀಂಕೋರ್ಟ್ ಆದೇಶಕ್ಕೂ ಹುಬ್ಬಳ್ಳಿ ಮೈದಾನಕ್ಕೂ ಸಂಬಂಧವಿಲ್ಲ. ಸ್ವಾಧೀನ ಸಂಬಂಧಿಸಿದಂತೆ ವಿವಾದವಿದ್ದಿದ್ದರಿಂದ ಸುಪ್ರೀಂಕೋರ್ಟ್ ಯಥಾಸ್ಥಿತಿ ಕಾಪಾಡಿಕೊಳ್ಳಲು ಆದೇಶಿಸಿದೆ. ಗಣೇಶ ಉತ್ಸವ ಕೇವಲ ಒಂದು ಧರ್ಮಕ್ಕೆ ಮಾತ್ರ ಸಂಬಂಧಿಸಿದ್ದಲ್ಲ ಎಲ್ಲರೂ ಭಾಗವಹಿಸಬಹುದಾದ ಸಾರ್ವಜನಿಕ ಉತ್ಸವ ಎಂದು ಎಎಜಿ ಧ್ಯಾನ್ ಚಿನ್ನಪ್ಪ ವಾದಿಸಿದರು.